1 ಲಕ್ಷ ಪರಿಹಾರ ಘೋಷಿಸುತ್ತಿದ್ದಂತೆ ಕೊವಿಡ್-19 ಸಾವಿನ ಸಂಖ್ಯೆ ಏರಿಕೆ!
ಬೆಂಗಳೂರು, ಜೂನ್ 21: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಹುಟ್ಟು ಸಾವಿನ ಲೆಕ್ಕಾಚಾರದಲ್ಲಿ ವ್ಯತ್ಯಾಸ ಆಗಿರುವುದ ಹಿಂದೆ ಒಂದು ಬೇರೆಯದ್ದೇ ಕಾರಣ ಅಡಗಿದೆ. ನಾಗರಿಕ ನೋಂದಣಿ ವ್ಯವಸ್ಥೆ ನೀಡುವ ದತ್ತಾಂಶಗಳು ಒಂದು ತಾತ್ಕಾಲಿಕ ವರದಿ ಆಗಿರುತ್ತದೆ.
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸಾವಿನ ಸಂಖ್ಯೆಯ ಅಂಕಿ-ಅಂಶಗಳ ನೋಂದಣಿ ನಿಧಾನಗತಿಯಲ್ಲಿ ಇರುತ್ತದೆ. ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ರಾಜ್ಯಾದ್ಯಂತ 35,000 ಜನನ ಮರಣ ನೋಂದಣಿ ಕೇಂದ್ರಗಳಿದ್ದರೂ ಅಸಮರ್ಥ ರೀತಿಯಲ್ಲಿ ದತ್ತಾಂಶ ಸಂಗ್ರಹಿಸಲಾಗಿದೆ.
ಕರ್ನಾಟಕದ ಕೊರೊನಾವೈರಸ್ ಸಾವಿನ ಲೆಕ್ಕದಲ್ಲಿ 6 ಪಟ್ಟು ಸುಳ್ಳು!?
ಜೂನ್ ತಿಂಗಳ ಆರಂಭದಿಂದ ಈಚೆಗೆ 10 ರಿಂದ 15 ದಿನಗಳಲ್ಲಿ ಕೊರೊನಾವೈರಸ್ ಸಾವಿನ ಪ್ರಕರಣಗಳಲ್ಲಿ ದಿಢೀರ್ ವ್ಯತ್ಯಾಸ ಕಂಡು ಬಂದಿದೆ. ರಾಜ್ಯದಲ್ಲಿ ಕೊವಿಡ್-19 ಸಾವಿನ ಪ್ರಕರಣಗಳ ಹಿಂದಿನ ಏರಿಳಿತಕ್ಕೆ ಅಸಲಿ ಕಾರಣವೇನು. ಕೊರೊನಾವೈರಸ್ ಸೋಂಕಿತ ಪ್ರಕರಣಗಳು, ಸೋಂಕಿನ ಪರೀಕ್ಷೆ ಹಾಗೂ ಲಸಿಕೆ ವಿತರಣೆ ಕುರಿತು ಮುಂದುವರಿದ ಸುದ್ದಿಯನ್ನು ಇಲ್ಲಿ ಓದಿ.
ಸಾವಿನ ಸಂಖ್ಯೆ ಏರಿಕೆಗೆ ಕಾರಣವಾಯಿತಾ ಪರಿಹಾರ?
"ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರು ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟರೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸಿಎಂ ಬಿ ಎಸ್ ಯಡಿಯೂರಪ್ಪ ಘೋಷಿಸಿದರು. ಇದರ ಬೆನ್ನಲ್ಲೇ ಒಂದು ಹಂತದಲ್ಲಿ ಸ್ಥಿರವಾಗಿದ್ದ ಕೊರೊನಾವೈರಸ್ ಸಾವಿನ ಪ್ರಕರಣಗಳ ಸಂಖ್ಯೆ ದಿಢೀರನೇ ಏರಿಕೆ ಆಗುತ್ತಿದೆ," ಎಂದು ಅಧಿಕಾರಿಗಳೇ ಹೇಳಿದ್ದಾರೆ. ಕೊವಿಡ್-19 ಸೋಂಕಿಗೆ ಬಲಿಯಾದ ಬಿಪಿಎಲ್ ಕಾರ್ಡ್ ಹೊಂದಿರುವ 25,000 ದಿಂದ 30,000 ಕುಟುಂಬಗಳಿಗೆ ನೆರವು ನೀಡುವ ಉದ್ದೇಶದಿಂದ 250 ರಿಂದ 300 ಕೋಟಿ ರೂಪಾಯಿ ಮೊತ್ತದ ಯೋಜನೆಯನ್ನು ಘೋಷಿಸಿದ್ದರು.
ಗ್ರಾಮೀಣ ಪ್ರದೇಶದಲ್ಲಿ ಸಾವು ನೋಂದಣಿ ವಿಳಂಬ
"ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ತತ್ ಕ್ಷಣಕ್ಕೆ ಸಾವಿನ ಪ್ರಕರಣಗಳನ್ನು ನೋಂದಾಯಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಅವುಗಳ ನೋಂದಣಿಯಲ್ಲಿ ವಿಳಂಬ ಆಗುವುದು ಸರ್ವೇ ಸಾಮಾನ್ಯ," ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. 2019ರಲ್ಲಿ ಒಟ್ಟು 5.08 ಲಕ್ಷ ಜನರು ಸಾವಿನ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 1.67 ಲಕ್ಷ ಸಾವಿನ ಪ್ರಕರಣಗಳು ಗ್ರಾಮೀಣ ಪ್ರದೇಶಗಳಿಗೆ ಸಂಬಂಧಿಸಿದ್ದು, ಅದರಲ್ಲಿ 1.01ರಷ್ಟು ಸಾವಿನ ಪ್ರಕರಣಗಳ ನೋಂದಣಿಯಲ್ಲಿ ವಿಳಂಬ ಆಗಿರುವುದು ಕಂಡು ಬಂದಿದ್ದನ್ನು ಸಿಎಂ ಉಲ್ಲೇಖಿಸಿದರು.
ಕೋವಿಡ್ನಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ
ಸಾವಿನ ಕುರಿತು ನೋಂದಣಿಗೆ 21 ದಿನಗಳ ಗಡುವು
ಕರ್ನಾಟಕದಲ್ಲಿ ಪ್ರಸ್ತುತ ಸಾವಿನ ಅಂಕಿ-ಅಂಶಗಳು ತಾತ್ಕಾಲಿಕವಾಗಿದ್ದರೂ, ಮುಂದಿನ ವಾರ ಅಥವಾ ಮುಂದಿನ ತಿಂಗಳುಗಳಲ್ಲಿ ಅದರಲ್ಲಿ ಸಮನ್ವಯತೆ ಸಾಧಿಸುವ ನಿರೀಕ್ಷೆಯಲ್ಲಿ ಅಧಿಕಾರಿಗಳು ಎದುರು ನೋಡುತ್ತಿದ್ದಾರೆ. ಜನನ ಮತ್ತು ಮರಣ ನೋಂದಣಿ ಕಾಯ್ದೆ 1969 ಹಾಗೂ ಕರ್ನಾಟಕ ಜನರ ಮತ್ತು ಮರಣ ನೋಂದಣಿ ನಿಯಮ 1970ರ ಪ್ರಕಾರ ಹುಟ್ಟು ಮತ್ತು ಸಾವಿನ ಕುರಿತು 21 ದಿನಗಳಲ್ಲೇ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಅದರ ಹೊರತಾಗಿ ಒಂದು ವರ್ಷದ ನಂತರವೂ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅನುಮತಿ ಮೇರೆಗೆ ಸಾವಿನ ಬಗ್ಗೆ ನೋಂದಣಿ ಮಾಡಿಸುವುದಕ್ಕೆ ಅವಕಾಶವಿದೆ.
ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 5,000ಕ್ಕಿಂತ ಇಳಿಮುಖವಾಗಿದೆ. ರಾಜ್ಯದಲ್ಲಿ ಕೊವಿಡ್-19 ಹೊಸ ಪ್ರಕರಣಗಳ ಶೇಕಡಾವಾರು ಪ್ರಮಾಣ 2.58ರಷ್ಟಿದ್ದು, ಸಾವಿನ ಪ್ರಮಾಣ ಶೇ.2.65ರಷ್ಟಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 120 ಮಂದಿ ಕೊವಿಡ್-19 ಸೋಂಕಿನಿಂದಲೇ ಪ್ರಾಣ ಬಿಟ್ಟಿದ್ದು, ಈವರೆಗೂ 33883 ಮಂದಿ ಮಹಾಮಾರಿಯಿಂದ ಮೃತಪಟ್ಟಿದ್ದಾರೆ. ಒಂದು ದಿನದಲ್ಲಿ 4517 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 8456 ಸೋಂಕಿತರು ಗುಣಮುಖರಾಗಿದ್ದಾರೆ.
ಭಾನುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 28,06,453ಕ್ಕೆ ಏರಿಕೆಯಾಗಿದೆ. ಈವರೆಗೂ 26,45,735 ಸೋಂಕಿತರು ಗುಣಮುಖರಾಗಿದ್ದು. 1,26,813 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಕೊವಿಡ್-19 ತಪಾಸಣೆ ವೇಗ ಹೇಗಿದೆ?
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ತಪಾಸಣೆ ವೇಗವನ್ನು ಕೂಡ ತಗ್ಗಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 43,869 ಮಂದಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಹಾಗೂ 1,30,652 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಒಟ್ಟು 1,74,521 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಈವರೆಗೂ 58,50,096 ಜನರಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಮಾಡಲಾಗಿದೆ. ಇದರ ಹೊರತಾಗಿ 2,68,89,443 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಈವರೆಗೂ ಒಟ್ಟು 3,27,39,539 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ.
ಜಿಲ್ಲಾವಾರು ಕೊರೊನಾವೈರಸ್ ಸೋಂಕಿತರ ಸಂಖ್ಯೆ
ರಾಜ್ಯದಲ್ಲಿ ಒಟ್ಟು 4517 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 10, ಬಳ್ಳಾರಿ 67, ಬೆಳಗಾವಿ 201, ಬೆಂಗಳೂರು ಗ್ರಾಮಾಂತರ 111, ಬೆಂಗಳೂರು 933, ಬೀದರ್ 6, ಚಾಮರಾಜನಗರ 61, ಚಿಕ್ಕಬಳ್ಳಾಪುರ 123, ಚಿಕ್ಕಮಗಳೂರು 183, ಚಿತ್ರದುರ್ಗ 74, ದಕ್ಷಿಣ ಕನ್ನಡ 525, ದಾವಣಗೆರೆ 136, ಧಾರವಾಡ 77, ಗದಗ 28, ಹಾಸನ 346, ಹಾವೇರಿ 24, ಕಲಬುರಗಿ 9, ಕೊಡಗು 137, ಕೋಲಾರ 77, ಕೊಪ್ಪಳ 61, ಮಂಡ್ಯ 131, ಮೈಸೂರು 545, ರಾಯಚೂರು 19, ರಾಮನಗರ 12, ಶಿವಮೊಗ್ಗ 141, ತುಮಕೂರು 144, ಉಡುಪಿ 167, ಉತ್ತರ ಕನ್ನಡ 146, ವಿಜಯಪುರ 7, ಯಾದಗಿರಿ 16 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.
Recommended Video
ಯಾವ ಹಂತದಲ್ಲಿ ಎಷ್ಟು ಫಲಾನುಭವಿಗಳಿಗೆ ಲಸಿಕೆ?
ರಾಜ್ಯದಲ್ಲಿ ಮೇ 1ರಿಂದ ಈವರೆಗೂ 36,86,562 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ಮೊದಲ ಡೋಸ್ ನೀಡಲಾಗಿದ್ದು, 29,637 ಜನರಿಗೆ 2ನೇ ಡೋಸ್ ಲಸಿಕೆ ವಿತರಿಸಲಾಗಿದೆ. ರಾಜ್ಯದಲ್ಲಿ ಈವರೆಗೂ 7,43,853 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 4,89,224 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 7,39,932 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 2,35,772 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. ಇದರ ಹೊರತಾಗಿ 45 ವರ್ಷಕ್ಕಿಂತ ಮೇಲ್ಪಟ್ಟ 1,00,59,335 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 24,68,580 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.