ಮೌನವಾಗಿದ್ದು ಲಿಂಗಾಯತ ಸ್ವತಂತ್ರ ಧರ್ಮದ ಯುದ್ಧ ಗೆದ್ದರೆ ಬಿಎಸ್ ವೈ?
Recommended Video
ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರ ಮೇಲೆ ಇಡೀ ಲಿಂಗಾಯತ ಸಮುದಾಯವೇ ಸಿಟ್ಟಾಗುವಂತಾಗಿದೆ. ವೀರಶೈವ- ಲಿಂಗಾಯತ, ಪ್ರತ್ಯೇಕ ಧರ್ಮ ಎಂಬ ಎರಡು ಅಲುಗಿನ ಕತ್ತಿಯ ಮಧ್ಯೆ ತಲೆ ತೂರಿಸುತ್ತಿದ್ದ ಪಾಟೀಲರಿಗೆ ಕತ್ತಿಯೀಗ ಕುತ್ತಿಗೆ ಮೇಲೆ ನಿಂತಿದೆ. ಅವರ ಉದ್ದೇಶ ಸರಿಯಿತ್ತೋ ಇಲ್ಲವೋ ಎಂಬುದರ ಚರ್ಚೆಯೇ ಅಪ್ರಸ್ತುತವಾಗಿ, ಈ ಮನುಷ್ಯ ಸುಳ್ಳು ಹೇಳಬಾರದಿತ್ತು ಎನ್ನುವಂತಾಗಿದೆ.
ಸಿದ್ದಗಂಗಾ ಮಠದ ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ?
ಅಷ್ಟಕ್ಕೂ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಪತ್ರಿಕಾ ಪ್ರಕಟಣೆ ನೀಡಿ, ನಾನು ಹಾಗೆಂದಿಲ್ಲ. ಅಂದದ್ದು ಹೀಗೆ ಎಂದು ಸ್ಪಷ್ಟನೆ ನೀಡುವ ಮಟ್ಟಕ್ಕೆ ಆಗಿದ್ದೇ ಎಂ.ಬಿ.ಪಾಟೀಲರ ಹೇಳಿಕೆಯಿಂದ. ಸಿದ್ದಗಂಗಾ ಶ್ರೀಗಳು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಎಂ.ಬಿ.ಪಾಟೀಲರು ಹೇಳಿಕೆ ನೀಡಿದ್ದರು.
ರಾಜ್ಯ ಸರಕಾರದ 'ಲಿಂಗಾಯತ ರಾಜಕೀಯ'ಕ್ಕೆ ಭಾರೀ ಹಿನ್ನಡೆ
ಅದಾದ ಆರಂಭದಲ್ಲೇ ಅನುಮಾನ ನಾನಾ ಕಡೆಯಿಂದ ವ್ಯಕ್ತವಾಯಿತು. ಸಿದ್ದಗಂಗಾ ಶ್ರೀಗಳು ಹೀಗೆ ಹೇಳಿರುವುದಕ್ಕೆ ಸಾಧ್ಯವೇ ಇಲ್ಲ ಎಂಬ ನಂಬಿಕೆಯೇ ಮೇಲುಗೈ ಸಾಧಿಸಿತು. ಆದರೆ ಯಾವಾಗ ಮಠದ ಕಡೆಯಿಂದಲೇ ಪತ್ರಿಕಾ ಪ್ರಕಟಣೆ ಬಂದು, ನಾನು ಹಾಗೆ ಹೇಳಿಲ್ಲ. ಮಠವನ್ನು ರಾಜಕೀಯಕ್ಕೆ ಎಳೆಯಬೇಡಿ ಎಂದು ಸ್ವತಃ ಶಿವಕುಮಾರ ಸ್ವಾಮೀಜಿ ಹೇಳಿದರೋ ಅಲ್ಲಿಗೆ ಪಾಟೀಲರಿಗೆ ಭರ್ತಿ ಪೆಟ್ಟು ಬಿದ್ದಂತಾಗಿದೆ.
ಯಡಿಯೂರಪ್ಪನವರಿಗೆ ಪರ್ಯಾಯವಾಗಿ ಬೆಳೆಸಲು ಯತ್ನ
ಲಿಂಗಾಯತ- ವೀರಶೈವ ಪ್ರತ್ಯೇಕ ಧರ್ಮ ವಿಚಾರದ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಂಡುಬಂದ ಆಡಳಿತಾರೂಢ ಪಕ್ಷದ ಸಚಿವ ಎಂ.ಬಿ.ಪಾಟೀಲ. ಮೇಲ್ನೋಟಕ್ಕೆ ಪಾಟೀಲರನ್ನು ಯಡಿಯೂರಪ್ಪನವರಿಗೆ ಪರ್ಯಾಯವಾಗಿ ಬೆಳೆಸಲು ನಡೆಯುತ್ತಿರುವ ಯತ್ನವಿದು ಅಂತಲೇ ಬಿಂಬಿಸಲಾಯಿತು. ಪಾಟೀಲರು ಒಂದಷ್ಟು ಬಿರುಸಿನಿಂದಲೇ ಓಡಾಡಿದರು.
ಕಾಂಗ್ರೆಸ್ ನಲ್ಲಿ ಶಹಭಾಷ್ ಗಿರಿ
ಆದರೆ, ಯಡಿಯೂರಪ್ಪನವರು ಈ ವಿಚಾರವಾಗಿ ಎಲ್ಲೂ ತುಟಿ ಬಿಚ್ಚಲಿಲ್ಲ. ಅವರು ಯಾವುದೇ ಹೇಳಿಕೆ ನೀಡಿದ್ದರೂ ಒಂದೋ ತಮ್ಮದೇ ಸಮುದಾಯದ ಮುಖಂಡರ ಸಿಟ್ಟಿಗೆ ಗುರಿಯಾಗುತ್ತಿದ್ದರು. ಅಥವಾ ಹಿಂದುತ್ವವನ್ನು ಪ್ರತಿಪಾದಿಸುವ ಬಿಜೆಪಿಯೊಳಗೆ ಖಳನಾಯಕರಾಗುತ್ತಿದ್ದರು. ಯಡಿಯೂರಪ್ಪನವರನ್ನು ಸುಮ್ಮನಾಗಿಸಿದ ಪಾಟೀಲರಿಗೆ ಕಾಂಗ್ರೆಸ್ ನೊಳಗೆ ಶಹಭಾಷ್ ಗಿರಿ ಕೂಡ ಸಿಕ್ಕಿರಬಹುದು.
ಸ್ವಾಮೀಜಿಗಳು, ಮುಖಂಡರ ಆಕ್ರೋಶ
ಆದರೆ, ಪ್ರತ್ಯೇಕ ಧರ್ಮದ ವಿಚಾರದಲ್ಲಿ ಪಾಟೀಲರು ಮುಂಚೂಣಿಯಲ್ಲಿ ಕಂಡಬಂದದ್ದು, ಅದರಿಂದ ರಾಜಕೀಯ ಮೈಲೇಜ್ ಸಿಕ್ಕಿದ್ದು ನಿಜ. ಆದರೆ ಆ ಸಮುದಾಯದೊಳಗೆ ಕೆಲವು ಸ್ವಾಮೀಜಿಗಳ ಹಾಗೂ ಮುಖಂಡರ ಸಿಟ್ಟಿಗೆ ಕಾರಣರಾದರು. ಸ್ವತಃ ಪಾಟೀಲರೇ ಹೇಳುವಂತೆ, ಹೊರಟ್ಟಿ ಹಾಗೂ ಪಾಟೀಲರನ್ನು ಸರ್ವನಾಶ ಮಾಡುವುದಾಗಿ ಕೆಲ ಸ್ವಾಮೀಜಿಗಳು ಹೇಳಿದರು ಎಂಬ ವಿಡಿಯೋ ಇದೆಯಂತೆ.
ಎಂ.ಬಿ. ಪಾಟೀಲ್ ಹೇಳಿಕೆಯ ಸತ್ಯಾಸತ್ಯತೆ ಅನುಮಾನಿಸಿದ ಓದುಗರು
ಪಾಟೀಲರ ಪರ ಮಾತನಾಡಲು ಸಹ ಭಯ
ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡದ ಯಡಿಯೂರಪ್ಪನವರು ಮೀಸೆ ಕೆಳಗೆ ನಗುವಂತಾಗಿದೆ. ಏಕೆಂದರೆ, ಜಾತಿ-ಧರ್ಮ ಎಂಬುದನ್ನು ನೋಡದೆ ಎಲ್ಲ ನಾಯಕರು ಪಾಟೀಲರನ್ನೀಗ ಸುಳ್ಳು ಮಾತನಾಡಿದ್ದಾರೆ, ಸಿದ್ದಗಂಗಾ ಮಠಾಧೀಶರಿಗೆ ಅವಮಾನ ಮಾಡಿದ್ದಾರೆ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಪಾಟೀಲರ ಪರವಾಗಿ ಒಂದು ಮಾತನಾಡಲು ಕೂಡ ಯೋಚನೆ ಮಾಡುವಂತಾಗಿದೆ.
ಬಿಎಸ್ ವೈ ತಂತ್ರಗಾರಿಕೆ ಕೆಲಸ ಮಾಡಿತೆ?
ಈ ಹಿಂದೆ ಮಾಜಿ ಸಚಿವ ಸುರೇಶ್ ಕುಮಾರ್ ಅವರು ಒನ್ಇಂಡಿಯಾ ಕನ್ನಡದ ಜತೆ ಸಂದರ್ಶನದಲ್ಲಿ ಮಾತನಾಡಿ, ಯಡಿಯೂರಪ್ಪನವರು ಸುಮ್ಮನಿದ್ದಾರೆ ಅಂದರೆ ಅದು ತಂತ್ರಗಾರಿಕೆಯ ಭಾಗ. ಸೂಕ್ಷ್ಮ ವಿಚಾರದ ಬಗ್ಗೆ ಏನೆಂದರೆ ಅದು ಮಾತನಾಡಬಾರದು. ಇದು ಕೇರಂ ಆಟಗಾರನೊಬ್ಬನ ಲೆಕ್ಕಾಚಾರ. ಯಾವ ಪಾನ್ ಕೇರಂನ ಪೋಚ್ ತಲುಪುವುದಕ್ಕೆ ಎಂಥ ಹೊಡೆತ ನೀಡಬೇಕು ಎಂಬುದು ಗೊತ್ತಿರಬೇಕು. ಅದು ಬಿಎಸ್ ವೈಗೆ ಗೊತ್ತಿದೆ ಎಂದಿದ್ದರು.
ವಿಪರೀತ ಮಾತನಾಡಿ ಸಿಕ್ಕಿಬಿದ್ದ ಪಾಟೀಲರು
ಇದೀಗ ಪಾಟೀಲರೇ ಹೇಳುತ್ತಿದ್ದಾರೆ. ಈಗಿನ ಸನ್ನಿವೇಶ ಸೃಷ್ಟಿಯಾಗಲು ಯಡಿಯೂರಪ್ಪ, ಸೋಮಣ್ಣ, ಮಾಜಿ ಸಂಸದ ಜಿ.ಎಸ್.ಬಸವರಾಜು ಮತ್ತಿತರರ ಹಿಕಮತ್ತು ಕಾರಣ ಎಂಬ ಆರೋಪ ಅವರದು. ಅಲ್ಲಿಗೆ ಯಡಿಯೂರಪ್ಪ ಸುಮ್ಮನಿದ್ದು ಗೆದ್ದಿದ್ದರೆ, ಪಾಟೀಲರು ಮಾತನಾಡಿ ವಿಲವಿಲ ಎನ್ನುವಂತಾಗಿದೆ.
ಎರಡೂ ರೀತಿಯ ಹೇಳಿಕೆಗೆ ಭರ್ತಿ ವಿರೋಧ
ತಾವೇ ಸರಿ ಎಂದು ಪಟ್ಟು ಹಿಡಿದು, ಶಿವಕುಮಾರ ಸ್ವಾಮೀಜಿ ತಮ್ಮ ಬಳಿ ಹೇಳಿದ್ದೇ ನಿಜ. ಆ ನಂತರ ಸ್ವಾಮೀಜಿ ಮೇಲೆ ಒತ್ತಡ ತಂದಿದ್ದಾರೆ ಎಂದು ಪಾಟೀಲರು ಸಾಬೀತು ಮಾಡಲು ಹಠ ಹಿಡಿದು ಕೂತರೆ ಅದರ ಪರಿಣಾಮ ಮತ್ತೆಲ್ಲೋ ತಲುಪುತ್ತದೆ. ಅಥವಾ ತಾವೇ ತಪ್ಪಾಗಿ ಅರ್ಥೈಸಿಕೊಂಡಿರಬಹುದು ಎಂದು ಕ್ಷಮೆ ಕೇಳಿದರೆ ಅದು ಮತ್ತೊಂದು ರೀತಿಯ ಸಿಟ್ಟಿಗೆ ಕಾರಣವಾಗುತ್ತದೆ. ಅಂತೂ ಪಾಟೀಲರ ಪಾಲಿಗೆ ಈ ವಿಚಾರ ಬಿಸಿ ತುಪ್ಪವಾಗಿದೆ.