ಬಿ. ಎಂ. ವಿಜಯ ಶಂಕರ್ ಕೊರಳಿಗೆ ಐಎಂಎ ಸುತ್ತಿಕೊಂಡಿದ್ದು ಹೇಗೆ?
ಬೆಂಗಳೂರು, ಜೂನ್ 24 : ಬಹುಕೋಟಿ ರೂಪಾಯಿ ಐಎಂಎ ಹಗರಣದ ಆರೋಪಿಯಾಗಿದ್ದ ಐಎಎಸ್ ಅಧಿಕಾರಿ ಬಿ. ಎಂ. ವಿಜಯ ಶಂಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಎಂಎ ಹಗರಣ ಐಎಎಸ್, ಐಪಿಎಸ್ ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳ ಕೊರಳಿಗೆ ಸುತ್ತಿಕೊಂಡಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ.
Recommended Video
ಬೆಂಗಳೂರಿನ ಜಯನಗರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಿ. ಎಂ. ವಿಜಯ ಶಂಕರ್ ಪತ್ತೆಯಾಗಿದ್ದಾರೆ. ಅಮಾನತು ಆದೇಶ ರದ್ದುಗೊಂಡು ಸಕಾಲ ಯೋಜನೆ ಆಯುಕ್ತರಾಗಿದ್ದ ವಿಜಯ ಶಂಕರ್ ಮಂಗಳವಾರ ಬೆಳಗ್ಗೆ ಕಚೇರಿಗೆ ಹೋಗಿ ಸರಣಿ ಸಭೆ ಮಾಡಿದ್ದರು. ಸಂಜೆ ನೇಣಿಗೆ ಕೊರಳೊಡ್ಡಿದ್ದಾರೆ.
59 ವರ್ಷದ ವಿಜಯ ಶಂಕರ್ 2001ರಿಂದ ಕೆಎಎಸ್ ಅಧಿಕಾರಿಯಾಗಿದ್ದರು. 2014ರಲ್ಲಿ ಐಎಎಸ್ ಅಧಿಕಾರಿಯಾಗಿ ಬಡ್ತಿ ಪಡೆದಿದ್ದರು. ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದಾಗ ಅವರಿಗೆ ಐಎಂಎ ಹಗರಣದ ನಂಟು ತಾಕಿತ್ತು. ಇದೇ ಪ್ರಕರಣದಲ್ಲಿ ಅಮಾನತುಗೊಂಡು ಎಸ್ಐಟಿಯಿಂದ ಬಂಧನಕ್ಕೆ ಒಳಗಾಗಿದ್ದರು. ಜಾಮೀನಿನ ಮೇಲೆ ಹೊರ ಬಂದಿದ್ದರು.
ಐಎಎಸ್ ಅಧಿಕಾರಿ ಬಿ. ಎಂ. ವಿಜಯ್ ಶಂಕರ್ ಆತ್ಮಹತ್ಯೆ
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಐಎಂಎ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು. ಪ್ರಕರಣದಲ್ಲಿ ವಿಜಯ ಶಂಕರ್ ವಿಚಾರಣೆ ನಡೆಸಲು ಸಿಬಿಐ ನೋಟಿಸ್ ನೀಡಿತ್ತು. ಮತ್ತೆ ಬಂಧನವಾಗುವ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
1.5 ಕೋಟಿ ಲಂಚದ ಹಗರಣ
ಐಎಂಎ ಸಂಸ್ಥೆಯ ಪರವಾಗಿ ವರದಿ ನೀಡಲು ಬಿ. ಎಂ. ವಿಜಯ್ ಶಂಕರ್ 1.5 ಕೋಟಿ ಲಂಚ ಪಡೆದಿದ್ದಾರೆ ಎಂಬುದು ಆರೋಪವಾಗಿತ್ತು. ಐಎಂಎ ಹಗರಣದ ತನಿಖೆ ನಡೆಸುತ್ತಿದ್ದ ಎಸ್ಐಟಿ ವಿಜಯ್ ಶಂಕರ್ ಬಂಧಿಸಿತ್ತು. ಅವರಿಗೆ ಸೇರಿದ್ದ 2.5 ಕೋಟಿ ನಗದು ಹಣವನ್ನು ವಶಕ್ಕೆ ಪಡೆದಿದ್ದರು. ಕಿಕ್ ಬ್ಯಾಕ್ ಪಡೆದ ಹಣವನ್ನು ವಿಜಯ್ ಶಂಕರ್ ಬೆಂಗಳೂರು ನಗರದ ಬಿಲ್ಡರ್ ಓರ್ವನಿಗೆ ಫ್ಲಾಟ್ ಮತ್ತು ನಿವೇಶನ ಖರೀದಿಸಲು ನೀಡಿದ್ದರು ಎಂಬ ಆರೋಪವೂ ಇತ್ತು. ಈ ಪ್ರಕರಣದಲ್ಲಿ ಸೇವೆಯಿಂದ ಅಮಾನತುಗೊಂಡಿದ್ದ ವಿಜಯ್ ಶಂಕರ್ ಪರಪ್ಪನ ಅಗ್ರಹಾರದಲ್ಲಿ ಹಲವರು ದಿನ ನ್ಯಾಯಾಂಗ ಬಂಧನದಲ್ಲಿಯೂ ಇದ್ದರು.
ಎಲ್. ಸಿ. ನಾಗರಾಜು ಹೇಳಿದ್ದ ಹೆಸರು
ಬೆಂಗಳೂರು ಉತ್ತರ ವಿಭಾಗಾಧಿಕಾರಿ ಎಲ್. ಸಿ. ನಾಗರಾಜು ಐಎಂಎ ಹಗರಣದಲ್ಲಿ ಮೊದಲು ಬಂಧಿತನಾದ ಸರ್ಕಾರಿ ಅಧಿಕಾರಿ. 1998ನೇ ಬ್ಯಾಚ್ ಕೆಎಎಸ್ ಅಧಿಕಾರಿ ಐಎಂಎ ಪರವಾಗಿ ವರದಿ ನೀಡಲು ಮೂರು ಕಂತುಗಳಲ್ಲಿ 4.5 ಕೋಟಿ ರೂ. ಹಣ ಪಡೆದಿದ್ದಾರೆ ಎಂಬುದು ಆರೋಪ. ಎಸ್ಐಟಿ ಇವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಗ್ರಾಮ ಲೆಕ್ಕಿಗ ಮಂಜುನಾಥ್ ಮತ್ತು ಬಿ. ಎಂ. ವಿಜಯ್ ಶಂಕರ್ ಹೆಸರು ಬೆಳಕಿಗೆ ಬಂದಿತ್ತು.
ಬಂಧನದ ಭೀತಿಯಲ್ಲಿ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆ?
ಐಟಿ ದಾಳಿ ಬಳಿಕ ಕ್ಲೀನ್ ಚಿಟ್
ಐಎಂಎ ಕಚೇರಿಗಳ ಮೇಲೆ ದಾಳಿ ಮಾಡಿದ್ದ ಐಟಿ ಅಧಿಕಾರಿಗಳು ಸಿಕ್ಕ ದಾಖಲೆಗಳನ್ನು ಜಾರಿ ನಿರ್ದೇಶನಾಲಯಕ್ಕೆ ನೀಡಿದ್ದರು. ಇಡಿ ಐಎಂಎ ವಿದೇಶಿ ಹೂಡಿಕೆ, ಜನರ ಠೇವಣಿ ಬಗ್ಗೆ ನಿಗಾ ಇಡುವಂತೆ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿತ್ತು. ಆಗ ಸರ್ಕಾರ ಸಕ್ಷಮ ಪ್ರಾಧಿಕಾರಿಯನ್ನಾಗಿ ಬೆಂಗಳೂರು ಉತ್ತರ ವಿಭಾಗಾಧಿಕಾರಿ ಎಲ್. ಸಿ. ನಾಗರಾಜು ನೇಮಿಸಿತು. ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿತ್ತು. ಆಗ ನಾಗರಾಜು ಐಎಂಎ ಪರವಾಗಿ ವರದಿ ನೀಡಲು 4.5 ಕೋಟಿ ಲಂಚ ಪಡೆದಿದ್ದಾರೆ ಎಂಬುದು ಆರೋಪ.
ಗ್ರಾಮ ಲೆಕ್ಕಿಗ ಮಧ್ಯವರ್ತಿ
ಗ್ರಾಮ ಲೆಕ್ಕಿಗ ಮಂಜುನಾಥ್ ಎಲ್. ಸಿ. ನಾಗರಾಜು, ಜಿಲ್ಲಾಧಿಕಾರಿಯಾಗಿದ್ದ ಬಿ. ಎಂ. ವಿಜಯ್ ಶಂಕರ್ ಪರವಾಗಿ ಐಎಂಎ ಅವರ ಜೊತೆಗೆ ಡೀಲ್ ಕುದುರಿಸಿದ್ದ. ವಿಜಯ್ ಶಂಕರ್ 1.5 ಕೋಟಿ, ಎಲ್. ಸಿ. ನಾಗರಾಜ್ 4.5 ಕೋಟಿ ಲಂಚ ಪಡೆದು ಐಎಂಎ ಪರವಾಗಿಯೇ ವರದಿ ನೀಡಿದರು. ನಾಗರಾಜ್ ಬಂಧನವಾಗುತ್ತಿದ್ದಂತೆ ಮಂಜುನಾಥ್, ವಿಜಯ್ ಶಂಕರ್ ಹೆಸರು ಬಹಿರಂಗವಾಯಿತು. ಈಗ ವಿಜಯ್ ಶಂಕರ್ ಆತ್ಮಹತ್ಯೆಯಿಂದ ಪ್ರಕರಣ ಮತ್ತೊಂದು ತಿರುವು ಪಡೆದಿದೆ.