ಬಸವಕಲ್ಯಾಣಕ್ಕೆ ಬಿಎಸ್ವೈ ಪುತ್ರ ಬಿ.ವೈ. ವಿಜಯೇಂದ್ರ ಭೇಟಿ ಹಿಂದಿನ ರಹಸ್ಯ!
ಬೆಂಗಳೂರು, ನ. 15: ಉಪ ಚುನಾವಣೆ ನಡೆದಿದ್ದ ಎರಡು ಕ್ಷೇತ್ರಗಳಲ್ಲಿ ಭರ್ಜರಿ ಗೆಲುವಿನ ಬಳಿಕ ಇದೀಗ ಮತ್ತೊಂದು ಉಪ ಚುನಾವಣೆಯತ್ತ ಬಿಜೆಪಿ ಸರ್ಕಾರ ಕಣ್ಣಿಟ್ಟಿದೆ. ಕಾಂಗ್ರೆಸ್ ಶಾಸಕರಾಗಿದ್ದ ಬಿ. ನಾರಾಯಣರಾವ್ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೀದರ್ನ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಕಮಲ ಅರಳುವಂತೆ ಮಾಡಲು ಬಿಜೆಪಿ ಸರ್ಕಾರ ಸಕಲ ಪ್ರಯತ್ನಗಳನ್ನು ಶುರು ಮಾಡಿದೆ.
ಇತ್ತೀಚೆಗೆ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಫಲಿತಾಂಶ ನಿರೀಕ್ಷಿತವೇ, ಆದರೆ ಶಿರಾದಲ್ಲಿ ಗೆಲ್ಲುತ್ತೇವೆಂದು ಬಿಜೆಪಿ ನಾಯಕರೇ ಊಹಿಸಿರಲಿಲ್ಲ. ಆ ಗೆಲುವಿನ ಬಳಿಕ ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆಯಾಗಿರುವ ಬಸವಕಲ್ಯಾಣದಲ್ಲೂ ಕಮಲ ಅರಳಿಸಲು ಬಿಜೆಪಿ ಮುಂದಾಗಿದೆ.
ಮತ್ತೊಂದು ಉಪ ಚುನಾವಣೆ ಸಿದ್ಧತೆ ಆರಂಭಿಸಿದ ಬಿಎಸ್ವೈ ಪುತ್ರ ವಿಜಯೇಂದ್ರ!
ಇದೇ ಹಿನ್ನೆಲೆಯಲ್ಲಿ ಆ ಕ್ಷೇತ್ರದತ್ತ ರಾಜ್ಯ ಬಿಜೆಪಿ ಸರ್ಕಾರ ವಿಶೇಷ ಆಸಕ್ತಿ ತೋರಿಸುತ್ತಿದೆ. ಆಸಕ್ತಿ ಮಾತ್ರವಲ್ಲ ಕೋಟಿ ಕೋಟಿ ಲೆಕ್ಕದಲ್ಲಿ ಅನುದಾನವನ್ನೂ ಕೊಡುತ್ತಿದೆ. ಜೊತೆಗೆ ಬಿಜೆಪಿ ಆರಂಭಿಸಿರುವ ಎಲ್ಲ ಚುನಾವಣಾ ತಂತ್ರಗಾರಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ!
ಮರಾಠ ಮತ ಸೆಳೆಯಲು ತಂತ್ರ!
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಮರಾಠ ಸುದಾಯದ ಮತಗಳು ನಿರ್ಣಾಯಕ. ಈಗಾಗಿಯೇ ಕಳೆದ 2018ರಲ್ಲಿ ನಡೆದಿದ್ದ ವಿಧಾನಸಭೆ ಸಾರ್ವತ್ರಿಕ ಚುನಾ ವಣೆಯಲ್ಲಿ ಮರಾಠಾ ಸಮುದಾಯಕ್ಕೆ ಸೇರಿರುವ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರು ಜೆಡಿಎಸ್ ಪಕ್ಷದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. ಪಿಜಿಆರ್ ಸಿಂಧ್ಯಾ ಅವರು ಸೋತರೂ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಮಲ್ಲಿಕಾರ್ಜುನ್ ಖೂಬಾ ಅವರನ್ನೂ ಸೋಲಿಸಿದ್ದರು.
ಹೀಗಾಗಿ ಇದೀಗ ನಿರ್ಣಾಯಕ ಮರಾಠ ಸಮುದಾಯದ ಮತಗಳನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ಬಸವಕಲ್ಯಾಣದಲ್ಲಿ ಬಿವೈ ವಿಜಯೇಂದ್ರ ಅವರು ಮರಾಠ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಬೆಂಗಳೂರಿಗೆ ಹಿಂದಿರುಗಿದ ಬಳಿಕ ಸಿಎಂ ಯಡಿಯೂರಪ್ಪ ಅವರು ಮಹತ್ವದ ಆದೇಶ ಮಾಡಿದ್ದಾರೆ.
ವಿಜಯೇಂದ್ರ ಬಸವಕಲ್ಯಾಣ ಭೇಟಿ!
ಮೊನ್ನೆ ನವೆಂಬರ್ 13 ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮರಾಠ ಸಮುದಾಯದ ಮುಖಂಡರೊಂದಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಹತ್ವದ ಸಭೆ ನಡೆಸಿದ್ದರು. ಸಭೆಯ ಬಳಿಕ ಅಲ್ಲಿನ ಅನುಭವ ಮಂಟಪಕ್ಕೆ ಭೇಟಿ ನೀಡಿದ್ದರು. ಅದರ ಮರುದಿನವೇ ಅಂದರೆ ನಿನ್ನೆ ನವೆಂಬರ್ 14ರಂದು ರಾಜ್ಯ ಬಿಜೆಪಿ ಸರ್ಕಾರ ಮಹತ್ವದ ಎರಡು ಆದೇಶಗಳನ್ನು ಮಾಡಿದೆ.
ಪುತ್ರ ವಿಜಯೇಂದ್ರ ಅವರ ಸಲಹೆಯಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆ ಎರಡು ಆದೇಶಗಳನ್ನು ಮಾಡಿದ್ದಾರೆ ಎನ್ನಲಾಗಿದೆ. ಬಸವಕಲ್ಯಾಣ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ಕೊಡುಗೆಗಳು ಹೀಗಿವೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ
ರಾಜ್ಯದಲ್ಲಿ ಮರಾಠ ಸಮುದಾಯದ ಜನರು ಹೆಚ್ಚಿರುವುದರಿಂದ ಆ ಸಮಾಜದ ಅಭಿವೃದ್ಧಿಗೆ 'ಮರಾಠ ಅಭಿವೃದ್ಧಿ ಪ್ರಾಧಿಕಾರ' ರಚನೆಗೆ ಸಿಎಂ ಯಡಿಯೂರಪ್ಪ ಅವರು ಆದೇಶ ಮಾಡಿದ್ದಾರೆ. ವಿಜಯೇಂದ್ರ ಅವರು ಮರಾಠ ಸಮಾಜದ ಹಿರಿಯರೊಂದಿಗಿನ ಸಭೆಯ ಬಳಿಕ ಯಡಿಯೂರಪ್ಪ ಅವರು ಪ್ರಾಧಿಕಾರ ರಚನೆ ಹಾಗೂ ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ 50 ಕೋಟಿ ರೂಪಾಯಿಗಳನ್ನು ಮೀಸಲಿಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶ ಮಾಡಿದ್ದಾರೆ.
ಜೊತೆಗೆ ಬಸವ ಕಲ್ಯಾಣದಲ್ಲಿ ಅಂಬಿಗರ ಚೌಡಯ್ಯ ಭವನ ನಿರ್ಮಾಣಕ್ಕೆ 2 ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವಂತೆಯೂ ರಾಜ್ಯ ಬಿಜೆಪಿ ಸರ್ಕಾರ ಆದೇಶ ಮಾಡಿದೆ. ಇವೆಲ್ಲವೂ ವಿಜಯೇಂದ್ರ ಅವರ ಬಸವಕಲ್ಯಾಣ ಭೇಟಿಯ ಬಳಿಕ ಆಗಿರುವ ಬೆಳವಣಿಗೆಗಳು ಎಂಬುದು ಗಮನಾರ್ಹ.
ಕೆ.ಆರ್. ಪೇಟೆ, ಶಿರಾ ಬಳಿಕ ಬಸವಕಲ್ಯಾಣ!
ನೆಲೆಯೆ ಇಲ್ಲದ ಮಂಡ್ಯದ ಕೆ.ಆರ್. ಪೇಟೆ ಹಾಗೂ ಶಿರಾ ಕ್ಷೇತ್ರಗಳಲ್ಲಿ ಬಿ.ವೈ. ವಿಜಯೇಂದ್ರ ಅವರು ಕಮಲ ಅರಳುವಂತೆ ಮಾಡಿದ್ದಾರೆ. ಹೀಗಾಗಿಯೇ ಬಸವಕಲ್ಯಾಣ ಕ್ಷೇತ್ರವನ್ನು ಗೆಲ್ಲಲು ಚುನಾವಣೆಗೆ ದಿನಾಂಕ ಪ್ರಕಟಕ್ಕೂ ಮೊದಲೇ ಬಿಜೆಪಿ ಚುನಾವಣಾ ತಯಾರಿ ಆರಂಭಿಸಿದೆ. ಜೊತೆಗೆ ಈ ಬಾರಿ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಬಹುದು ಎಂಬುದು ತೀರ್ಮಾನವಾಗಿಲ್ಲ. ಅಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರಾ? ಅದಕ್ಕೆ ಕಾಲವೇ ಉತ್ತರಿಸಬೇಕಿದೆ!