ಚಾಲಕನ ಮೊಬೈಲ್ ಬಳಸಿ ಆದಿತ್ಯ ಆಳ್ವಾ ಸಿಕ್ಕಿಬಿದ್ದಿದ್ದು ಹೇಗೆ ?
ಬೆಂಗಳೂರು, ಜನವರಿ 11: ಸಿಸಿಬಿ ಪೊಲೀಸರು ಸ್ವಲ್ಪ ಯಾಮಾರಿದ್ದರಿಂದ ಬರೋಬ್ಬರಿ ಐದು ತಿಂಗಳ ಕಾಲ ಯಾರ ಕಣ್ಣಿಗೂ ಬೀಳದೇ ಆದಿತ್ಯ ಆಳ್ವಾ ಚಳ್ಳೆ ಹಣ್ಣು ತಿನ್ನಿಸಿದ್ದ. ಆದರೆ ಆಳ್ವಾನ ಕಾರು ಚಾಲಕನಿಗೆ ಗಾಳ ಹಾಕಿ ಆದಿತ್ಯ ಆಳ್ವಾಗೆ ಸಿಸಿಬಿ ಪೊಲೀಸರು ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ ಜಾಲ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಆದಿತ್ಯ ಆಳ್ವಾ ಬಂಧನದ ರೋಚಕ ಕಹಾನಿಯಿದು.
ಆಳ್ವಾ ಹೌಸ್ ಆಫ್ ಲೈಫ್
ಪ್ರತಿಷ್ಠಿತರ ಜತೆ ಸಂಪರ್ಕ ಹೊಂದಿದ್ದ ಆದಿತ್ಯ ಆಳ್ವಾ ಕಳೆದ ಐದು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ. ದಿವಂಗತ ಜೀವರಾಜ್ ಆಳ್ವಾ ಅವರ ಪುತ್ರ ಆದಿತ್ಯ ಆಳ್ವಾ ನಟ ವಿವೇಕ್ ಓಬೆರಾಯ್ ಅವರ ಬಾಮೈದ. ಡ್ರಗ್ ಜಾಲದ ಪ್ರಮುಖ ಆರೋಪಿ ವೀರೇನ್ ಖನ್ನಾ ಬಂಧನದ ವೇಳೆ ಆದಿತ್ಯಾ ಆಳ್ವಾ ತನ್ನ ಐಶರಾಮಿ ಬಂಗಲೆ ಹೌಸ್ ಆಫ್ ಲೈಫ್ ನಲ್ಲಿ ಪೇಜ್ -3 ಪಾರ್ಟಿ ಗಳನ್ನು ಆಯೋಜಿಸುತ್ತಿದ್ದ. ವೀರೇನ್ ಖನ್ನಾ ಬಂಧನದ ಬಳಿಕ ಆದಿತ್ಯ ಆಳ್ವಾ ಡ್ರಗ್ ಜಾಲದಲ್ಲಿ ಸಿಲುಕಿರುವ ಸಂಗತಿ ಹೊರ ಬಿದ್ದಿತ್ತು. ಇದೇ ಹಂತದಲ್ಲಿ ಹೆಬ್ಬಾಳದಲ್ಲಿದ್ದ ಆದಿತ್ಯ ಆಳ್ವಾ ಹೌಸ್ ಆಫ್ ಲೈಫ್ ಬಂಗಲೆ ಮೇಲೆ ದಾಳಿ ನಡೆಸಿ ಗಾಂಜಾ ಮತ್ತು ಸಿಂಥೆಟಿಕ್ ಡ್ರಗ್ ವಶಪಡಿಸಿಕೊಂಡಿದ್ದರು. ಆಗ ಎಸ್ಕೇಪ್ ಆಗಿದ್ದ ಆಳ್ವಾ ಮತ್ತೆ ಸಿಕ್ಕಿಬಿದ್ದಿದ್ದು ಸೋಮವಾರ ರಾತ್ರಿ ತಮಿಳುನಾಡಿನ ಚೆನ್ನೈ ಸಮೀಪದ ರೆಸಾರ್ಟ್ ನಲ್ಲಿ.
ಸ್ಯಾಂಡಲ್ ವುಡ್ ಡ್ರಗ್ ಕೇಸ್: ಆದಿತ್ಯ ಆಳ್ವ ಚೆನ್ನೈನಲ್ಲಿ ಬಂಧನ
ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದ
ದೆಹಲಿ ಹಾಗೂ ಮುಂಬೈನತ್ತ ತೆರಳಿದ್ದ ಎರಡು ಸಲ ಸಿಸಿಬಿ ಪೊಲೀಸರಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದ. ಇದರಿಂದ ಎಚ್ಚೆತ್ತ ಆದಿತ್ಯ ಆಳ್ವಾ ತನ್ನ ಮೊಬೈಲ್ ಬಳಕೆ ಮಾಡುವುದನ್ನೇ ಬಿಟ್ಟಿದ್ದ. ಹೀಗಾಗಿ ಸಿಸಿಬಿ ಪೊಲೀಸರಿಗೆ ಇದು ತಲೆ ನೋವಾಗಿತ್ತು. ಮುಂಬಯಿನಲ್ಲಿರುವ ವಿವೇಕ್ ಓಬೆರಾಯ್ ಮನೆಲ್ಲಿ ಶೋಧ ನಡೆಸಿದ್ದರೂ ಸಿಕ್ಕಿರಲಿಲ್ಲ. ಇದು ಸಿಸಿಬಿ ಪೊಲೀಸರಿಗೆ ತಲೆನೋವಾಗಿತ್ತು. ಸುಮಾರು ಐದು ತಿಂಗಳಿನಿಂದ ಸಿಸಿಬಿ ಪೊಲೀಸರಿಗೆ ಸುಳಿವೆ ಇಲ್ಲದ ಹಾಗೆ ಆಳ್ವಾ ಐಶರಾಮಿ ಜೀವನ ನಡೆಸುತ್ತಿದ್ದ.
ಆಳ್ವಾ ಕಾರು ಚಾಲಕಮೊಬೈಲ್ ಸುಳಿವು
ಆದಿತ್ಯಾ ಆಳ್ವಾ ಮೊಬಲ್ ಬಳಕೆ ಮಾಡುತ್ತಿಲ್ಲ ಎಂಬ ಸಂಗತಿ ತಿಳಿದ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಆತನ ಚಾಲಕನ ಬಗ್ಗೆ ಮಾಹಿತಿ ಜಾಲಾಡಿದರು. ಕಾರು ಚಾಲಕನಾಗಿ ಮಹೇಶ್ ಟಾಪ ಇರುವ ಬಗ್ಗೆ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಪುನೀತ್ ಮಾಹಿತಿ ಸಂಗ್ರಹಿಸಿದ್ದರು. ಅದರ ಜಾಡು ಹಿಡಿದು ಕಾಯುತ್ತಿದ್ದರು. ಇದೇ ಮೊಬೈಲ್ ಆದಿತ್ಯ ಆಳ್ವಾ ಬಳಸುತ್ತಿದ್ದ ವಿಷಯವನ್ನು ಸಿಸಿಬಿ ಪೊಲೀಸರು ಸಂಗ್ರಹಿಸಿದ್ದರು.
ಇತ್ತೀಚೆಗೆ ದೆಹಲಿಯಲ್ಲಿ ಆಳ್ವಾ ಕಾರು ಚಾಲಕನ ಸಿಮ್ ಆಕ್ಟೀವ್ ಆಗಿತ್ತು. ಡೆಲ್ಲಿಗೆ ಹೋಗುವಷ್ಟರಲ್ಲಿ ಮತ್ತೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದಾದ ಬಳಿಕ ಮತ್ತೆ ಚೆನ್ನೈನಲ್ಲಿ ಮೊಬೈಲ್ ಆನ್ ಆಗಿತ್ತು. ಇದರ ಮಾಹಿತಿ ಹಿಡಿದು ಕೂತಿದ್ದ ಸಿಸಿಬಿ ಪೊಲೀಸರು ಚೆನ್ನೈಗೆ ತೆರಳಿದ್ದರು. ಬೀಚ್ ಪಕ್ಕದ ರೆಸಾರ್ಟ್ ನಲ್ಲಿ ಮೊಬೈಲ್ ಆನ್ ಆಗಿದ್ದನ್ನ ಖಚಿತಪಡಿಸಿಕೊಂಡು ಅದಕ್ಕೆ ಸಿಸಿಬಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಸುಮಾರು ಹೊತ್ತು ಆಳ್ವಾ ನ ಚಲನವಲನ ಪತ್ತೆ ಮಾಡಿದ್ದಾರೆ. ಮಹೇಶ್ ಟಪನ ಬೆನ್ನು ಬಿದ್ದ ಸಿಸಿಬಿ ಪೊಲೀಸರಿಗೆ ಆದಿತ್ಯ ಆಳ್ವಾ ಕೂಡ ಸಿಕ್ಕಿಬಿದ್ದಿದ್ದಾನೆ. ಸೋಮವಾರ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಆಳ್ವಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವೈದ್ಯಕೀಯ ಪರೀಕ್ಷೆ
ಬಂಧಿತ ಆರೋಪಿ ಆದಿತ್ಯ ಆಳ್ವಾನನ್ನು ಸಿಸಿಬಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಕರೆದೊಯ್ದಿದ್ದಾರೆ. ಪರೀಕ್ಷೆ ಬಳಿಕ ನ್ಯಾಯಾಲಯದಲ್ಲಿ ಹಾಜರು ಪಡಿಸಿ ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ. ಡ್ರಗ್ ಸೇವನೆ ಹಾಗೂ ಮಾರಾಟ ಜಾಲದ ಬಗ್ಗೆ ಆಳ್ವಾನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಲಿದ್ದು, ಆಳ್ವಾ ಬಂಧನ ಮತ್ತಷ್ಟು ಮಂದಿಗೆ ನಡುಕ ಹುಟ್ಟಿಸಿದೆ.
ಆದಿತ್ಯ ಆಳ್ವಾ ಬಂಧನ ಸುದ್ದಿ ಸ್ಯಾಂಡಲ್ ವುಡ್ ನಟಿಯರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಆಳ್ವಾ ಪ್ರತಿಷ್ಠಿತ ಪಾರ್ಟಿಗಳಲ್ಲಿ ಸುಮಾರು ಜನ ಪಾಲ್ಗೊಳ್ಳುತ್ತಿದ್ದರು. ರಾಗಿಣಿ ಸೇರಿದಂತೆ ಅನೇಕ ನಟಿಯರು ಆಳ್ವಾ ಪಾರ್ಟಿಯಲ್ಲಿ ಪಾಳ್ಗೊಳ್ಳುತ್ತಿದ್ದರು. ವೀರೇನ್ ಖನ್ನಾ ಮತ್ತು ರಾಹುಲ್ ತೋನ್ಸೆ ಡ್ರಗ್ ಸರಬರಾಜು ಮಾಡುತ್ತಿದ್ದರು. ಈ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ನಟಿಮಣಿಯರಿಗೆ ಇದೀಗ ಆತಂಕ ಶುರುವಾಗಿದೆ.