ಗರ್ಭಿಣಿಯರಿಗೆ, ತಾಯಂದಿರಿಗೆ ಬಿಸಿಯೂಟ ಯೋಜನೆ
ಬೆಂಗಳೂರು, ಸೆಪ್ಟೆಂಬರ್ 27: ಗರ್ಭಿಣಿಯರಿಗೆ ಹಾಗೂ ಹಾಲೂಡಿಸುವ ತಾಯಂದಿರಿಗೆ ಈವರೆಗೆ ಐಸಿಡಿಎಸ್ ಯೋಜನೆ ಅಡಿಯಲ್ಲಿ ದಿನಸಿ ನೀಡಲಾಗುತ್ತಿತ್ತು. ಅದರ ಬದಲಿಗೆ ರಾಜ್ಯ ಸರಕಾರವು ಮುಂದಿನ ತಿಂಗಳಿಂದ ಬಿಸಿಯೂಟವನ್ನೇ ನೀಡಲಿದೆ.
ಹುಟ್ಟಿದ ಆರು ನಿಮಿಷಕ್ಕೆ ಈ ಹೆಣ್ಣುಮಗುವಿನ ಹೆಸರಿಗೆ ಆಧಾರ್
'ಮಾತೃಪೂರ್ಣ' ಕಾರ್ಯಕ್ರಮದ ಅಡಿಯಲ್ಲಿ ಇಂಥ ಮಹಿಳೆಯರಿಗೆ ಒಂದು ಹೊತ್ತಿನ ಬಿಸಿಯೂಟವನ್ನು ಅಂಗನವಾಡಿ ಕೇಂದ್ರಗಳ ಮೂಲಕ ವಿತರಿಸುವ ಕಾರ್ಯಕ್ಕೆ ಅಕ್ಟೋಬರ್ ಎರಡರಿಂದ ರಾಜ್ಯದಾದ್ಯಂತ ಚಾಲನೆ ದೊರೆಯಲಿದೆ.
ಆಂಧ್ರ, ತೆಲಂಗಾಣ ನಂತರ ಈ ರೀತಿ ಕಾರ್ಯಕ್ರಮವನ್ನು ಜಾರಿಗೆ ತರುತ್ತಿರುವ ಮೂರನೇ ರಾಜ್ಯ ಕರ್ನಾಟಕ. ಈ ಕಾರ್ಯಕ್ರಮದ ಮೂಲಕ ಹನ್ನೆರಡು ಲಕ್ಷ ಮಹಿಳೆಯರು ಪ್ರಯೋಜನ ಪಡೆಯಲಿದ್ದಾರೆ ಎಬ ನಿರೀಕ್ಷೆ ರಾಜ್ಯ ಸರಕಾರಕ್ಕೆ ಇದೆ. ಹೆರಿಗೆ ನಂತರ ಆರು ತಿಂಗಳ ತನಕ ಬಿಸಿಯೂಟ ವಿತರಿಸಲಾಗುತ್ತದೆ.
ದಿನಸಿ ಪದಾರ್ಥಗಳು ಕೊಟ್ಟರೂ ಅಡುಗೆ ಮಾಡಿಕೊಳ್ಳಬೇಕು, ಕುಟುಂಬದ ಇತರ ಸದಸ್ಯರ ಜತೆಗೆ ಆಹಾರವನ್ನು ಹಂಚಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ತಿಳಿಸಿದ್ದಾರೆ.
ಫಲಾನುಭವಿಯ ಸಂಬಂಧಿಕರು ಟಿಫನ್ ಬಾಕ್ಸ್ ತಂದು, ತೆಗೆದುಕೊಂಡು ಹೋಗಬಹುದು. ಇದು ಗರ್ಭ ಧರಿಸಿ ಎಂಟು ತಿಂಗಳು ಕಳೆದಿರುವ ಹಾಗೂ ಹೆರಿಗೆ ಆದ ನಲವತ್ತೈದು ದಿನದವರೆಗಿನ ಮಹಿಳೆಯರಿಗೆ ಅನ್ವಯ ಆಗುತ್ತದೆ ಎಂದು ಇಲಾಖೆ ನಿರ್ದೇಶಕಿ ಮಾಹಿತಿ ನೀಡಿದ್ದಾರೆ.
ಇನ್ನು ಹದಿನೆಂಟು ವಯಸ್ಸಿಗಿಂತ ಕಡಿಮೆ ಪ್ರಾಯದ ತಾಯಂದಿರಿಗೆ ಕೂಡ ಅಂಗನವಾಡಿಗಳ ಮೂಲಕ ಬಿಸಿಯೂಟ ವಿತರಿಸಲಾಗುತ್ತದೆ. ಈ ರೀತಿ ಚಿಕ್ಕವಯಸ್ಸಿನ ತಾಯಂದಿರಿಗೆ ಊಟ ನಿರಾಕರಿಸುವಂತಿಲ್ಲ. ಹಾಗಂತ ಬಾಲ್ಯವಿವಾಹವನ್ನು ಸರಕಾರ ಪ್ರೋತ್ಸಾಹಿಸುವುದಿಲ್ಲ ಎಂದು ಹೇಳಿದ್ದಾರೆ.
ಆದರೆ, ಈ ಯೋಜನೆ ಜಾರಿಗೆ ತರುವ ಮುಂಚೆ ಅಂಗನವಾಡಿಗಳಿಗೆ ಸೂಕ್ತ ಸೌಲಭ್ಯ ಒದಗಿಸಬೇಕು. ಪಾತ್ರೆಗಳು, ಅಡುಗೆ ಮಾಡುವವರು ಹಾಗೂ ಸಹಾಯಕರು ಬೇಕಾಗುತ್ತಾರೆ ಎಂದು ಕರ್ನಾಟಕ ಅಂಗನವಾಡಿ ನೌಕರರ ಒಕ್ಕೂಟದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಹೇಳಿದ್ದಾರೆ.