ಕೊರೊನಾ ಸೋಂಕು ಶಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸುವಂತಿಲ್ಲ
ಬೆಂಗಳೂರು, ಜುಲೈ 15: ಕೊರೊನಾ ಶಂಕಿತ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.ಉಸಿರಾಟ ತೊಂದರೆಯಿಂದ ಬಳಲುತ್ತಿರುವವನ್ನು ಶಂಕಿತರೆಂದು ಪರಿಗಣಿಸಿ, ಕೊವಿಡ್ ವರದಿಗಾಗಿ ಕಾಯದೇ, ಅವರನ್ನು ದಾಖಲಿಸಿಕೊಂಡು ಚಿಕಿತ್ಸೆ ಆರಂಭಿಸಬೇಕು ಎಂದು ತಿಳಿಸಿದೆ.
108ಕ್ಕೆ ಕರೆ ಬಂದಲ್ಲಿ ಸೋಂಕಿತರೇ, ಶಂಕಿತರೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಸೋಂಕಿನ ಪ್ರಾರಂಭಿಕ ಲಕ್ಷಣ ಹೊಂದಿದ್ದರೆ ಅಥವಾ ಲಕ್ಷಣ ರಹಿತರಾಗಿದ್ದರೆ, ಅಂತಹವರನ್ನು ಕೊವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಬೇಕು.
ಆಗಸ್ಟ್ 15ಕ್ಕೆ ಭಾರತಕ್ಕೆ ದೊರೆಯಲಿದೆ ರಷ್ಯಾದ ಕೊರೊನಾ ಲಸಿಕೆ
ಕೊವಿಡ್ ಆರೈಕೆ ಕೇಂದ್ರಗಳಿಗೆ ದಾಖಲಾದ ವ್ಯಕ್ತಿಯ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ನಿಗದಿತ ಆಸ್ಪತ್ರೆಗೆ ಸ್ಥಳಾಂತರಿಸಲು 108 ಆ್ಯಂಬುಲೆನ್ಸ್ ಸೇವೆಯನ್ನು ಪಡೆಯಬೇಕು.
ವ್ಯಕ್ತಿಗೆ ಸಂಬಂಧಿಸಿದ ದಾಖಲೆ ಒದಗಿಸಬೇಕು
ವ್ಯಕ್ತಿಗೆ ಸಂಬಂಧಿಸಿದ ದಾಖಲೆಯನ್ನು 108 ಆರೋಗ್ಯ ಕವಚವು ಬಿಬಿಎಂಪಿಗೆ ಒದಗಿಸಬೇಕು. ನಂತರ ಪಾಲಿಕೆ ರೋಗಿಗೆ ಸಂಖ್ಯೆ ನೀಡಬೇಕು. ಸೋಂಕಿತ ಅಥವಾ ಶಂಕಿತ ನೇರವಾಗಿ ಕೋವಿಡ್ ಆರೈಕೆ ಕೇಂದ್ರಕ್ಕೆ ಬಂದಲ್ಲಿ ದಾಖಲು ಮಾಡಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಸುತ್ತೋಲೆ
ಈ ಕುರಿತು ಸುತ್ತೋಲೆ ಹೊರಡಿಸಿರುವ ಇಲಾಖೆಯ, SARI, ಐಎಲ್ಐಯಿಂದ ಬಳಲುತ್ತಿರುವವರಿಗೆ ಕೂಡಲೇ 108 ಆ್ಯಂಬುಲೆನ್ಸ್ ಒದಗಿಸಬೇಕು. ಆಸ್ಪತ್ರೆಗಳು ಅಂತವರನ್ನು ಶಂಕಿತ ಸೋಂಕಿತರೆಂದು ಪರಿಗಣಿಸಿ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಬೇಕೆಂದು ಸೂಚಿಸಿದೆ.
ಬಿಬಿಎಂಪಿ ಅಧಿಕಾರಿಗಳ ಅನುಮತಿ ಅಗತ್ಯವಿಲ್ಲ
SARI ಸಮಸ್ಯೆಯಿಂದ ಬಳಲುತ್ತಿರುವ ಕೊವಿಡ್ ಅಥವಾ ಬೇರೆ ರೋಗಿಗಳಿಗೆ ಚಿಕಿತ್ಸೆ ನೀಡಲು ಬಿಬಿಎಂಪಿ ಅಧಿಕಾರಿಗಳ ಅನುಮತಿ ಹಾಗೂ ಅಧಿಕೃತ ಪತ್ರಕ್ಕಾಗಿ ಕಾಯುವ ಅಗತ್ಯವಿಲ್ಲ.
ಸರ್ಕಾರ ನಿಗದಿಪಡಿಸಿರುವ ದರದಲ್ಲೇ ಚಿಕಿತ್ಸೆ
ಖಾಸಗಿ ಆಸ್ಪತ್ರೆಗಳು ಶಂಕಿತರನ್ನು ಕೊವಿಡ್ ಪ್ರಕರಣ ಎಂದು ಪರಿಗಣಿಸಿ ಸರ್ಕಾರ ಕೊವಿಡ್ ರೋಗಿಗಳಿಗೆ ನಿಗದಿಪಡಿಸಿರುವ ದರದಲ್ಲೇ ಚಿಕಿತ್ಸೆ ನೀಡಬೇಕೆಂದು ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.