ಪ್ರಮಾಣವಚನ ಸ್ವೀಕರಿಸಿ ಬಿಎಸ್ವೈ ಆಶೀರ್ವಾದ ಪಡೆಯಲು ಬಂದ ಶರತ್ ಬಚ್ಚೇಗೌಡ, ಆದರೆ...
Recommended Video
ಉಪಚುನಾವಣೆಯಲ್ಲಿ ಆಯ್ಕೆಯಾದ ಶಾಸಕರು, ಭಾನುವಾರ (ಡಿ 22) ಪ್ರಮಾಣವಚನ ಸ್ವೀಕರಿಸಿದರು. ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಅಶೋಕ್, ಸುರೇಶ್ ಕುಮಾರ್ ಸೇರಿದಂತೆ, ಹೆಚ್ಚಿನ ಸಂಪುಟ ಸಹದ್ಯೋಗಿಗಳು ಭಾಗವಹಿಸಿದ್ದರು. ಪ್ರಮಾಣವಚನ ಸ್ವೀಕರಿಸಿದವರಲ್ಲಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಕೂಡಾ ಒಬ್ಬರು.
ಕಾರ್ಯಕ್ರಮದ ನಿರೂಪಕರು, 'ಶರತ್ ಬಚ್ಚೇಗೌಡ, ಹೊಸಕೋಟೆ ಕ್ಷೇತ್ರ' ಎಂದು ಹೇಳುತ್ತಿದ್ದಂತೆಯೇ, ಅವರ ಬೆಂಬಲಿಗರಿಂದ ಭಾರೀ ಕರತಾಡನ ವ್ಯಕ್ತವಾಯಿತು.
ವಿಧಾನಸೌಧದಲ್ಲಿ 13 ಶಾಸಕರಿಂದ ಪ್ರಮಾಣವಚನ
ತಿಳಿಕಂದು ಬಣ್ಣದ ಸೂಟ್ ನಲ್ಲಿ ಆಗಮಿಸಿದ್ದ ಶರತ್, ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅಭಿಮಾನಿಗಳ ಜೈಕಾರ, ಶಿಳ್ಳೆಗೆ, ಶರತ್, ಕೆಲವು ಸೆಕೆಂಡ್, ಪ್ರಮಾಣವಚನ ನಿಲ್ಲಿಸಬೇಕಾಯಿತು. ಇದಾದ ನಂತರ, ಶರತ್, ಸಿಎಂ ಬಳಿ ತೆರಳಿದರು.
ಮುಖ್ಯಮಂತ್ರಿ ಮತ್ತು ಕ್ಯಾಬಿನೆಟ್ ಸಚಿವರು
ಪ್ರಮಾಣವಚನ ಸ್ವೀಕರಿಸಿದ ನಂತರ ಎಲ್ಲಾ ಶಾಸಕರು, ಮುಖ್ಯಮಂತ್ರಿ ಮತ್ತು ಕ್ಯಾಬಿನೆಟ್ ಸಚಿವರ ಬಳಿ ಹೋದರು. ಅದರಂತೆಯೇ, ಶರತ್ ಬಚ್ಚೇಗೌಡ ಕೂಡಾ ಯಡಿಯೂರಪ್ಪನವರ ಆಶೀರ್ವಾದ ಪಡೆಯಲು ಮುಂದಾದರು. ಆದರೆ, ಬಿಎಸ್ವೈ ಅವರ ಕಡೆ ತಿರುಗಿಯೂ ನೋಡಲಿಲ್ಲ.
ಶರತ್ ಬಚ್ಬೇಗೌಡ ಪ್ರಮಾಣವಚನ
ಶರತ್ ಬಚ್ಬೇಗೌಡ ಬರುತ್ತಿದ್ದಂತೆಯೇ ಯಡಿಯೂರಪ್ಪ ಬಾಂಕ್ವೆಟ್ ಹಾಲ್ ನಿಂದ ಹೊರಟರು. ಅಲ್ಲೇ ಇದ್ದ ಸಚಿವ ಅಶೋಕ್, ಶರತ್ ಅವರನ್ನು ನೋಡಿ ಮುಗುಳ್ನಕ್ಕಿ ಅವರೂ ಅಲ್ಲಿಂದ ಹೊರಟರು. ಇದರಿಂದ ಇರಿಸುಮುರಿಸು ಉಂಟಾದರೂ, ಶರತ್, ತಮ್ಮ ಬೆಂಬಲಿಗರು ಇದ್ದ ಕಡೆ ನಡೆದರು.
ಫೋಟೋ ಸೆಷನ್ ನಲ್ಲಿ ಭಾಗವಹಿಸಲು ಶರತ್ ನಿರಾಕರಣೆ
ಪ್ರಮಾಣವಚನ ಮುಗಿದ ನಂತರ, ನೂಕುನುಗ್ಗಲು ಉಂಟಾಗಿತ್ತು. ಆ ವೇಳೆ, ಶರತ್, ಮುಖ್ಯಮಂತ್ರಿಗಳ ಬಳಿ ಹೋದರು. ಆದರೆ, ಬಿಎಸ್ವೈ ತಿರುಗಿಯೂ ನೋಡಲಿಲ್ಲ. ಇದಾದ ನಂತರ, ಪ್ರತ್ಯೇಕವಾಗಿ ಫೋಟೋ ಸೆಷನ್ ನಲ್ಲಿ ಭಾಗವಹಿಸಲು ಶರತ್ ಬಚ್ಚೇಗೌಡ ನಿರಾಕರಿಸಿದರು.
ನಾನು ಬಿಜೆಪಿಯ ಗರಡಿಯಲ್ಲಿ ಪಳಗಿದವನು
ಪ್ರಮಾಣವಚನದ ನಂತರ ಮಾತಾನಾಡಿದ ಶರತ್, "ನಾನು ಬಿಜೆಪಿಯ ಗರಡಿಯಲ್ಲಿ ಪಳಗಿದವನು. ಅಲ್ಲಿಂದಲೇ ನಾನು ರಾಜಕೀಯ ಕಲಿತದ್ದು. ಇಂದು, ಬಿಜೆಪಿ ಶಾಸಕರ ಜೊತೆ, ನಾನೂ ಪ್ರಮಾಣವಚನ ಸ್ವೀಕರಿಸಿದ್ದೇನೆ. ಚುನಾವಣೆಯ ವೇಳೆ ಎದುರಾಳಿಗಳು ಎನ್ನುವ ಪ್ರಶ್ನೆ ಬರುತ್ತದೆ. ಈಗ ನಾನು ಕ್ಷೇತ್ರದ ಶಾಸಕ, ಅಭಿವೃದ್ದಿಯೇ ನನ್ನ ಆದ್ಯತೆ" ಎಂದು ಶರತ್ ಹೇಳಿದರು.
ಜನರು ನನ್ನನ್ನು ಆಶೀರ್ವದಿಸಿದ್ದಾರೆ
"ಜನರು ನನ್ನನ್ನು ಆಶೀರ್ವದಿಸಿದ್ದಾರೆ. ಮೊದಲ ಬಾರಿಗೆ ಶಾಸಕನಾಗಿದ್ದೇನೆ. ಹೊಸಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ನಾನು ಶ್ರಮಿಸಲಿದ್ದೇನೆ" ಎಂದು ಹೇಳಿರುವ ಶರತ್, ಬಿಜೆಪಿ ಸೇರುವ ಬಗ್ಗೆ ಎದುರಾದ ಪ್ರಶ್ನೆಗೆ ಉತ್ತರಿಸಿದ ರೀತಿ, ಮಾತೃಪಕ್ಷಕ್ಕೆ ವಾಪಸ್ ತೆರಳಲಿದ್ದಾರೆಯೇ ಎನ್ನುವ ಸಂಶಯ ಕಾಡುವಂತಿತ್ತು.