ಉಪಚುನಾವಣೆಗೆ ಮುನ್ನ ಬಚ್ಚೇಗೌಡ್ರ ವಿರುದ್ದ ಎಂಟಿಬಿ ನಾಗರಾಜ್ ಸ್ಪೋಟಕ ಆರೋಪ
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಂಡ ನಂತರ ಎಲ್ಲರಿಗಿಂತ ಹೆಚ್ಚು ಸುದ್ದಿಯಲ್ಲಿರುವ ಅನರ್ಹ ಶಾಸಕರಲ್ಲಿ ಮಂಚೂಣಿಯಲ್ಲಿ ಬರುವ ಹೆಸರು ಹೊಸಕೋಟೆಯ ಮಾಜಿ ಶಾಸಕ ಎಂ.ಟಿ.ಬಿ ನಾಗರಾಜ್.
ಕಾಂಗ್ರೆಸ್ ಬಿಡಲು ಕಾರಣರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮತ್ತು ಕೃಷ್ಣಭೈರೇಗೌಡರ ವಿರುದ್ದ ವಾಗ್ದಾಳಿ ನಡೆಸುತ್ತಿರುವ ಎಂಟಿಬಿ, ಕ್ಷೇತ್ರದ ತಮ್ಮ ಕಟ್ಟಾ ವಿರೋಧಿ, ಸಂಸದ ಬಿ.ಎನ್.ಬಚ್ಚೇಗೌಡರ ವಿರುದ್ದವೂ ಸಿಟ್ಟು ಹೊರಹಾಕುತ್ತಲೇ ಇದ್ದರು.
ಬಚ್ಚೇಗೌಡರ ಪುತ್ರ, ಶರತ್ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯಲು ಒಪ್ಪದೇ ಇರುವುದರಿಂದ, ಚಿಂತಾಕೃತರಾಗಿರುವ ಎಂಟಿಬಿ, ಬಿಜೆಪಿಯ ಒಕ್ಕಲಿಗ ಸಮುದಾಯದ ಇತರ ನಾಯಕರ ಮೂಲಕ, ಮನವೊಲಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಆದರೆ, ಇದ್ಯಾವುದೂ ವರ್ಕೌಟ್ ಆಗುವ ಹಾಗೇ ಕಾಣಿಸುತ್ತಿಲ್ಲ.
ಹೊಸಕೋಟೆವರೆಗೆ ಮೆಟ್ರೋ ವಿಸ್ತರಣೆ: ಯಡಿಯೂರಪ್ಪ ಆಶ್ವಾಸನೆ
ಬಿಜೆಪಿ ಟಿಕೆಟ್ ನೀಡದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆಂದು ಶರತ್ ಬಚ್ಚೇಗೌಡ ಸ್ಪಷ್ಟ ಪಡಿಸಿರುವುದರಿಂದ, ಎಂಟಿಬಿ ನಾಗರಾಜ್, ತಮ್ಮ ಬೆಂಬಲಿಗರೊಬ್ಬರ ಮನೆಯಲ್ಲಿ ಆಡಿರುವ ಮಾತು, ಈಗ ವೈರಲ್ ಆಗಿದೆ.
ನನ್ನ ಮಗ ನನ್ನ ಮಾತನ್ನು ಕೇಳುತ್ತಿಲ್ಲ
"ನನ್ನ ಮಗ ನನ್ನ ಮಾತನ್ನು ಕೇಳುತ್ತಿಲ್ಲ. ಅವನ ದಾರಿ ಅವನಿಗೆ" ಎಂದು ಬಚ್ಚೇಗೌಡ್ರು, ಮಗ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ನಿಗಮ ಮಂಡಳಿ, ಇತರ ಹುದ್ದೆಗಳನ್ನು ನೀಡಿ, ಶರತ್ ಕೋಪವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದರು.
ಎಂ.ಟಿ.ಬಿ ನಾಗರಾಜ್ ಮಾತನಾಡುತ್ತಿದ್ದ ವಿಡಿಯೋ ವೈರಲ್
ಬೆಂಬಲಿಗರ ಮನೆಯಲ್ಲಿ ಎಂ.ಟಿ.ಬಿ ನಾಗರಾಜ್ ಮಾತನಾಡುತ್ತಿದ್ದ ವಿಡಿಯೋವಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ, ಆಪರೇಷನ್ ಕಮಲದ ವಿಚಾರವನ್ನು ಪ್ರಸ್ತಾವಿಸಿದ್ದಾರೆ. ಯಡಿಯೂರಪ್ಪ ತಮ್ಮ ಬಳಿ ಮಾತನಾಡಿದ್ದು, ಎಲ್ಲವೂ ಸಂಸದ ಬಚ್ಚೇಗೌಡ್ರ ಸಮ್ಮುಖದಲ್ಲೇ ಮಾತುಕತೆ ನಡೆಯುತು ಎಂದು ಎಂಟಿಬಿ ಹೇಳಿದ್ದಾರೆ.
ಯಡಿಯೂರಪ್ಪ ಮುಂದೆ ಒಪ್ಪಿಗೆ
ಶರತ್ ಬಚ್ಚೇಗೌಡರನ್ನು ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ಅಥವಾ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಮಾತುಕತೆ ನಡೆದಿತ್ತು. ಶಾಸಕರಾಗಲೇ ಬೇಕೆಂದು ಶರತ್ ಹಠಕ್ಕೆ ಬಿದ್ದರೆ, ದೊಡ್ಡಬಳ್ಳಾಪುರದಿಂದ ಸ್ಪರ್ಧಿಸಲು ಅನುವು ಮಾಡಿಕೊಡುವ ಮಾತುಕತೆ ನಡೆದಿತ್ತು. ಇದಕ್ಕೆ, ಬಚ್ಚೇಗೌಡ್ರೇ ಸಾಕ್ಷಿಯಾಗಿದ್ದರು ಮತ್ತು ಯಡಿಯೂರಪ್ಪ ಮುಂದೆ ಇದಕ್ಕೆ ಒಪ್ಪಿಗೆಯನ್ನೂ ಸೂಚಿಸಿದ್ದರು.
ಎಂಟಿಬಿ ನಾಗರಾಜ್, ತಮ್ಮ ಬೆಂಬಲಿಗರ ಮುಂದೆ ನೋವು
ಬಚ್ಚೇಗೌಡರು ಈಗ ತಮ್ಮ ಮಾತಿನ ಮೇಲೆ ನಿಲ್ಲುತ್ತಿಲ್ಲ. ವಿನಾಕಾರಣ ತೊಂದರೆ ಮಾಡುತ್ತಿದ್ದಾರೆ. ಅಂದೇ ಬಚ್ಚೇಗೌಡ್ರು ಒಪ್ಪದಿದ್ದರೆ, ನಾನು ಕಾಂಗ್ರೆಸ್ ಬಿಟ್ಟು ಬರುತ್ತಲೇ ಇರಲಿಲ್ಲ. ಅಂದು ಒಪ್ಪಿಕೊಂಡು, ಈಗ ತೊಂದರೆ ಮಾಡುತ್ತಿರುವುದು, ಸರಿಯಲ್ಲ ಎಂದು ಎಂಟಿಬಿ ನಾಗರಾಜ್, ತಮ್ಮ ಬೆಂಬಲಿಗರ ಮುಂದೆ ನೋವು ತೋಡಿಕೊಂಡಿದ್ದಾರೆ.
ಎಂಟಿಬಿ ವರ್ಸಸ್ ಬಚ್ಚೇಗೌಡ
ಶರತ್ ಬಚ್ಚೇಗೌಡ ಅವರನ್ನು ಸಮಾಧಾನಪಡಿಸಲೆಂದು ಯಡಿಯೂರಪ್ಪ ಅವರಿಗೆ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ ಇದನ್ನು ಸ್ವೀಕರಿಸಲು ಶರತ್ ನಿರಾಕರಿಸಿದ್ದರು. 'ಮುಂಬರುವ ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಿಶ್ಚಯಿಸಿರುವ ಕಾರಣ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಲು ಸಾಧ್ಯವಿಲ್ಲ' ಎಂದು ಶರತ್ ಬಚ್ಚೇಗೌಡ, ಬಿಎಸ್ವೈಗೆ ತಿರುಗೇಟು ನೀಡಿದ್ದರು.