ಹೊಸಕೋಟೆ: ಕಣದಲ್ಲಿರುವ ಈ ಇಬ್ಬರಲ್ಲಿ ಯಾರು ಗೆದ್ದರೂ ಬಿಜೆಪಿ ಸೇಫ್!
ಡಿಸೆಂಬರ್ ಐದರಂದು ನಡೆಯಲಿರುವ ಹದಿನೈದು ಕ್ಷೇತ್ರಗಳ ಅಸೆಂಬ್ಲಿ ಚುನಾವಣೆಯಲ್ಲಿ ಬಹಳಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ಕ್ಷೇತ್ರಗಳಲ್ಲಿ ಹೊಸಕೋಟೆ ಕ್ಷೇತ್ರ ಕೂಡಾ ಒಂದು.
ಕಾರಣ, ಒಂದು ಬಿಜೆಪಿ ಅಭ್ಯರ್ಥಿಯಾಗಿರುವ ಎಂ.ಟಿ.ಬಿ ನಾಗರಾಜ್ ಮತ್ತು ಇನ್ನೊಂದು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಬಿಜೆಪಿಯ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ. ಹೊಸಕೋಟೆ ಕ್ಷೇತ್ರದ ರಾಜಕೀಯ ದಿನದಿಂದ ದಿನಕ್ಕೆ ರಂಗೇರುತ್ತಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾನುವಾರ (ನ 24) ಪಕ್ಷದ ಪರವಾಗಿ ಪ್ರಚಾರ ನಡೆಸಿ ಹೋಗಿದ್ದಾರೆ. ಎಂಟಿಬಿ ನಾಗರಾಜ್ ವಿರುದ್ದ ಹರಿಹಾಯ್ದಿದ್ದಾರೆ. ಇನ್ನು, ಮುಖ್ಯಮಂತ್ರಿ ಯಡಿಯೂರಪ್ಪ, ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡರಿಗೆ ಪ್ರಚಾರಕ್ಕೆ ಇಳಿಯುವಂತೆ ಸೂಚಿಸಿದ್ದಾರೆ.
ನನ್ನ ಪರವಾಗಿ ಪ್ರಚಾರಕ್ಕೆ ಬಚ್ಚೇಗೌಡ್ರು ಬರುವುದಿಲ್ಲ ಎಂದು ಶರತ್ ಬಚ್ಚೇಗೌಡ ಈಗಾಗಲೇ ಹೇಳಿಕೆಯನ್ನು ನೀಡಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ ಇಬ್ಬರಲ್ಲಿ ಯಾರೊಬ್ಬರು ಗೆದ್ದರೂ, ಬಿಜೆಪಿ ಸೇಫ್ ಎನ್ನುವ ಮಾತು ಚಾಲ್ತಿಯಲ್ಲಿದೆ.
ಹೊಸಕೋಟೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ
ಹೊಸಕೋಟೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯಿಂದ ಎಂ.ಟಿ.ಬಿ ನಾಗರಾಜ್, ಕಾಂಗ್ರೆಸ್ಸಿನಿಂದ ಪದ್ಮಾವತಿ ಸುರೇಶ್ ಮತ್ತು ಜೆಡಿಎಸ್ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಶರತ್ ಬಚ್ಬೇಗೌಡ ಕಣದಲ್ಲಿದ್ದಾರೆ. ಮೂವರೂ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ ಪ್ರಚಾರ ಜೋರಾಗಿದೆ, ಆದರೆ, ಕಾಂಗ್ರೆಸ್ ಮತ್ತು ಶರತ್ ಅವರು, ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ.
ಎಂಟಿಬಿಯೊಬ್ಬ ಢೋಂಗಿ, ಅವನಿಗೆ ಮೈಯೆಲ್ಲಾ ವಿಷ ತುಂಬಿದೆ, ಸಿದ್ದರಾಮಯ್ಯ
"ಎಂಟಿಬಿಯೊಬ್ಬ ಢೋಂಗಿ, ಅವನಿಗೆ ದುಡ್ಡಿನ ಮದ, ದುರಂಹಕಾರಿ, ಮೈಯೆಲ್ಲಾ ವಿಷ ತುಂಬಿದೆ" ಎನ್ನುವ ಪದವನ್ನು ಸಿದ್ದರಾಮಯ್ಯ, ಪ್ರಚಾರದ ವೇಳೆ ಬಳಸಿದ್ದಾರೆ. ಇದಕ್ಕೆ ಎಂಟಿಬಿ ತನ್ನದೇ ಧಾಟಿಯಲ್ಲಿ ತಿರುಗೇಟು ನೀಡಿದ್ದಾರೆ. "ಕುರುಬ ಸಮುದಾಯಕ್ಕೆ ಅವರಿಂದ ಏನೂ ಪ್ರಯೋಜನವಾಗಲಿಲ್ಲ" ಎಂದು ತಿರುಗೇಟು ನೀಡಿದ್ದಾರೆ.
ಕಣದಲ್ಲಿರುವ ಮೂವರು ಪ್ರಮುಖರು
ಕಣದಲ್ಲಿರುವ ಮೂವರು ಪ್ರಮುಖರಲ್ಲಿ ಇಬ್ಬರು ಕುರುಬ ಸಮುದಾಯದವರು (ಎಂಟಿಬಿ ಮತ್ತು ಪದ್ಮಾವತಿ), ಇನ್ನು ಶರತ್ ಬಚ್ಚೇಗೌಡ ಒಕ್ಕಲಿಗ ಸಮುದಾಯದವರು. ಕುರುಬ ಸಮುದಾಯದ ಮತ ವಿಭಜನೆಯಾಗುತ್ತದೆ, ಒಕ್ಕಲಿಗರ ಆಶೀರ್ವಾದ ನನ್ನ ಮೇಲಿರುತ್ತೆ ಎನ್ನುವ ಲೆಕ್ಕಾಚಾರವನ್ನು ಶರತ್ ಇಟ್ಟುಕೊಂಡಿದ್ದಾರೆ. ಕಣದಲ್ಲಿರುವ ಮೂವರಲ್ಲಿ ಇಬ್ಬರಲ್ಲಿ ಯಾರು ಗೆದ್ದರೂ ಬಿಜೆಪಿ ಸೇಫ್ ಎನ್ನುವ ಮಾತು ಕೇಳಿಬರುತ್ತಿದೆ.
ಕಣದಲ್ಲಿರುವ ಈ ಇಬ್ಬರಲ್ಲಿ ಯಾರು ಗೆದ್ದರೂ ಬಿಜೆಪಿ ಸೇಫ್
ಎಂ.ಟಿ.ಬಿ ನಾಗರಾಜ್ ಹೇಗೂ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿದ್ದಾರೆ. ಇನ್ನು, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಪಕ್ಷೇತರರಾಗಿ ಕಣಕ್ಕಿಳಿದಿರುವ ಶರತ್ ಬಚ್ಚೇಗೌಡ, ಚುನಾವಣೆಯಲ್ಲಿ ಗೆದ್ದಿದ್ದೇ ಆದರೆ, ಅವರು ಮುಂದೊಂದು ದಿನ ಬಿಜೆಪಿಗೆ ಸೇರದೇ ಇರುತ್ತಾರಾ ಎನ್ನುವ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಹಾಗಾಗಿ, ಎಂಟಿಬಿ ಮತ್ತು ಶರತ್ ಇಬ್ಬರಲ್ಲಿ ಯಾರು ಗೆದ್ದರೂ, ಬಿಜೆಪಿ ಸೇಫ್ ಎನ್ನುವ ಮಾತಿದೆ.
ನನಗೆ ಕುಕ್ಕರ್ ಚಿಹ್ನೆಯನ್ನು ನೀಡಲಾಗಿದೆ, ಶರತ್
"ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಬಲಾಢ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನನಗೆ ಕುಕ್ಕರ್ ಚಿಹ್ನೆಯನ್ನು ನೀಡಲಾಗಿದೆ. ಎಂಟಿಬಿ, ಹೊಸಕೋಟೆಯನ್ನೇ ಖರೀದಿಸಲು ಮುಂದಾಗಿದ್ದಾರೆ. ಎಲ್ಲಾ, ಅಡೆತಡೆಗಳ ನಡುವೆ, ನನಗೆ ಗೆಲವು ಸಿಗಲಿದೆ" ಎಂದು ಶರತ್ ಬಚ್ಚೇಗೌಡ, ವಿಶ್ವಾಸದ ಮಾತನ್ನಾಡಿದ್ದಾರೆ.