ಚಾಮರಾಜನಗರ ಮಹಿಳೆ ತಲೆಯಿಂದ ಕೊಂಬು ಬೇರ್ಪಡಿಸಿದ ವೈದ್ಯರು
ಚಾಮರಾಜನಗರ,ಏಪ್ರಿಲ್,01: ತಲೆಯಲ್ಲಿ ಕೊಂಬು ಮೂಡಿದ್ದ ಚಾಮರಾಜ ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ವೈದ್ಯರ ಶ್ರಮ ಸಂಪೂರ್ಣ ಯಶಸ್ವಿಯಾಗಿದೆ. ಸುಮಾರು ದಿನಗಳಿಂದ ನೋವಿನಿಂದ ಬಳಲುತ್ತಿದ್ದ ಮಹಿಳೆಯ ತೊಂದರೆ ನೀಗಿದಂತಾಗಿದೆ.
ಹೊಸಪೋಡಿನ ನಿವಾಸಿ ಸೋಲಿಗ ಮಹಿಳೆ ಮಾದಮ್ಮ ತಲೆಯಲ್ಲಿ ಕೊಂಬು ಮೂಡಿತ್ತು. ಇದರ ನೋವಿನಿಂದ ತತ್ತರಿಸಿ ಹೋಗಿದ್ದರು. ಜಿಲ್ಲಾಡಳಿತ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮಾದಮ್ಮನ ನೆರವಿಗೆ ಬಂದಿದ್ದು, ಶಸ್ತ್ರ ಚಿಕಿತ್ಸೆಗಾಗಿ ಬುಧವಾರ ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.[ಅಚ್ಚರಿ : ಚಾಮರಾಜನಗರದ ಮಹಿಳೆ ತಲೆಯಲ್ಲಿ ಕೊಂಬು!]
ಗುರುವಾರ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಂಡ ವೈದ್ಯರ ತಂಡ ಕೆಲಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಕೊಂಬನ್ನು ಬೇರ್ಪಡಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ವಾರ್ಡ್ ಗೆ ವರ್ಗಾವಣೆ ಮಾಡಲಾಗಿದೆ. ಮಾದಮ್ಮನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.[ಮಾದೇವಮ್ಮನ ಲಿವಿಂಗ್ ಟುಗೆದರ್ ಸಂಸಾರ!]
ಶಸ್ತ್ರ ಚಿಕಿತ್ಸೆ ಮತ್ತು ಔಷಧಿಯ ಖರ್ಚು ವೆಚ್ಚವನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯೇ ಭರಿಸುತ್ತಿದೆ. ಒಟ್ಟಿನಲ್ಲಿ ಎಲ್ಲರ ಅಚ್ಚರಿಗೆ ಕಾರಣವಾದ ಕೊಂಬನ್ನು ವೈದ್ಯರು ಹೊರತೆಗೆದಿದ್ದು, ಕಳೆದ ಕೆಲವು ವರ್ಷಗಳಿಂದ ಕೊಂಬಿನ ಬೆಳವಣಿಗೆ ಕಾರಣ ನೋವಿನಿಂದ ಬಳಲುತ್ತಿದ್ದ ಮಹಿಳೆಯು ಮುಕ್ತಿ ಹೊಂದಿರುವುದು ಕುಟುಂಬ ಹಾಗೂ ಸಂಬಂಧಿಕರಲ್ಲಿ ಸಂತೋಷ ಮೂಡಿದೆ.