ಮಹತ್ವದ ಬೆಳವಣಿಗೆ: ಸಿಎಂ ಯಡಿಯೂರಪ್ಪ ಭೇಟಿ ಮಾಡಿದ ಜೆಡಿಎಸ್ ನಾಯಕ!
ಬೆಂಗಳೂರು, ಜ. 27: ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಇದೇ ಜನವರಿ 29 ರಂದು ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಕುರಿತು ನಿನ್ನೆ (ಜ.26) ಜೆಡಿಎಸ್ ವಿಧಾನ ಪರಿಷತ್ ಸದಸ್ಯರ ಸಭೆ ನಡೆದಿದ್ದು, ಸಭೆಯಲ್ಲಿನ ನಿರ್ಧಾರದಂತೆ ಇವತ್ತು (ಜ. 27) ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.
Recommended Video
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಪದಚ್ಯುತ ಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ನಲ್ಲಿ ಹೈಡ್ರಾಮಾ ನಡೆದಿತ್ತು. ಉಪ ಸಭಾಪತಿಯಾಗಿದ್ದ ಜೆಡಿಎಸ್ ಪಕ್ಷದ ಎಸ್.ಎಲ್. ಧರ್ಮೇಗೌಡ ಅವರು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಹತ್ಯೆ ಕುರಿತು ತನಿಖೆ ನಡೆಸಲು ನೇಮಕ ಮಾಡಿದ್ದ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರ ನೇತೃತ್ವದ ಸದನ ಸಮಿತಿ ತನ್ನ ಮಧ್ಯಂತರ ವರದಿಯನ್ನು ಸಭಾಪತಿಗಳಿಗೆ ಕೊಟ್ಟಿದೆ. ಈ ಮಧ್ಯೆ ಉಪ ಸಭಾಪತಿ ಸ್ಥಾನಕ್ಕೆ ಚುನಾವನೆ ಎದುರಾಗಿದೆ.
ಇದೇ ಸಂದರ್ಭದಲ್ಲಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಉಪ ಸಭಾಪತಿ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಕುರಿತು ಸಿಎಂ ಜೊತೆಗೆ ಮಾತನಾಡಿದ್ದಾರೆ.
ಸಿಎಂ ಭೇಟಿ ಮಾಡಿದ ಬಸವರಾಜ್ ಹೊರಟ್ಟಿ
ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ನಡೆಯುವ ಉನಾವಣೆಯಲ್ಲಿ ಅಭ್ಯರ್ಥಿಯನ್ನು ಹಾಕದಿರಲು ಜೆಡಿಎಸ್ ನಾಯಕರು ನಿರ್ಧಾರ ಮಾಡಿದ್ದಾರೆ. ನಿನ್ನೆ ನಡೆದಿದ್ದ ಜೆಡಿಎಸ್ ವಿಧಾನ ಪರಿಸತ್ ಸದಸ್ಯರ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಸವರಾಜ್ ಹೊರಟ್ಟಿ ಅವರು ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ಅವರು ಸಿಎಂ ಭೇಟಿ ಬಳಿಕ ಮಾಹಿತಿ ನೀಡಿದ್ದು, ಮಾಜಿ ಪ್ರಧಾನಿ ದೇವೇಗೌಡ ಅವರು ಸೇರಿದಂತೆ ಎಲ್ಲರೂ ಚರ್ಚಿಸಿ ಈ ಬಾರಿ ಸಭಾಪತಿ ಸ್ಥಾನ ಕೇಳುವ ನಿರ್ಧಾರವನ್ನು ಮಾಡಲಾಗಿದೆ. ಉಪ ಸಭಾಪತಿ ಸ್ಥಾನವನ್ನು ಬಿಜೆಪಿಯವರಿಗೆ ಬಿಡೋಣ ಎಂದು ಚರ್ಚಿಸಲಾಗಿದೆ. ಅದೇ ವಿಚಾರವಾಗಿ ಯಡಿಯೂರಪ್ಪ ಅವರನ್ನು ಭೇಟಿ ಮಾಡುವಂತೆ ದೇವೇಗೌಡರು ಹೇಳಿದ್ದರು. ಅದರಂತೆ ಭೇಟಿಯಾಗಿದ್ದೆ ಎಂದಿದ್ದಾರೆ.
ಜೆ.ಪಿ. ನಡ್ಡಾರಿಗೆ ಬಯೊಡೆಟಾ ಕಳಿಸಿದ ಜೆಡಿಎಸ್
ಜೆಡಿಎಸ್ ಬೇಡಿಕೆ ಕುರಿತು ವಿಧಾನ ಪರಿಷತ್ ಬಿಜೆಪಿ ಸದಸ್ಯರ ಸಭೆ ನಡೆಸಿ ಅಂತಿಮ ತೀರ್ಮಾನ ತೆಗದುಕೊಳ್ಳುವುದಾಗಿ ಸಿಎಂ ಯಡಿಯೂರಪ್ಪ ಅವರು ಜೆಡಿಎಸ್ಗೆ ಭರವಸೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಹೊರಟ್ಟಿ ಅವರು, ಜೆಡಿಎಸ್ ವರಿಷ್ಠ ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ನನ್ನ ಬಯೋಡೆಟಾ ಕಳುಹಿಸಿಕೊಡುವಂತೆ ಜೆ.ಪಿ ನಡ್ಡಾ ಅವರು ಕೇಳಿದ್ದರು, ನಾವು ಬಯೊಡೆಟಾ ಕಳುಹಿಸಿದ್ದೇವೆ. ಎಲ್ಲರೂ ಚರ್ಚಿಸಿ ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.
ಉಪ ಸಭಾಪತಿ ಸ್ಥಾನಕ್ಕೆ ಸ್ಪರ್ಧೆ ಮಾಡಲ್ಲ
ತಮ್ಮ ಮೇಲೆ ಎಲ್ಲರೂ ವಿಶ್ವಾಸ ಇಟ್ಟಿದ್ದಾಗಿ ಬಸವರಾಜ್ ಹೊರಟ್ಟಿ ಅವರು ತಿಳಿಸಿದ್ದಾರೆ. ಜೊತೆಗೆ ಉಪ ಸಭಾಪತಿ ಸ್ಥಾನಕ್ಕೆ ನಾವು ಸ್ಪರ್ಧೆ ಮಾಡಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಏನು ತೀರ್ಮಾನ ಮಾಡುತ್ತಾರೆ ನೋಡಬೇಕು. ಬಿಜೆಪಿ ವಿಧಾನ ಪರಿಷತ್ ಸದಸ್ಯರ ಸಭೆಯ ಬಳಿಕ ಏನು ಹೇಳುತ್ತಾರೆ ಎಂಬುದನ್ನು ಕಾಯ್ದು ನೋಡುತ್ತೇವೆ. ಬಿಜೆಪಿ ನಮ್ಮ ಬೇಡಿಕೆಗೆ ಒಪ್ಪದಿದ್ದಲ್ಲಿ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ನಾವು ಚರ್ಚೆ ಮಾಡಿಲ್ಲ ಎಂದು ಬಸವರಾಜ್ ಹೊರಟ್ಟಿ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಜೆಡಿಎಸ್ ಬೆಂಬಲ ಅಗತ್ಯ
ವಿಧಾನ ಪರಿಷತ್ ಸಭಾಪತಿ ಅಥವಾ ಉಪ ಸಭಾಪತಿ ಸ್ಥಾನ ಪಡೆಯಲು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಜೆಡಿಎಸ್ ಬೆಂಬಲ ಬೇಕೆ ಬೇಕು. ಹೀಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಎದುರು ಸಭಾಪತಿ ಸ್ಥಾನಕ್ಕಾಗಿ ಜೆಡಿಎಸ್ ಬೇಡಿ ಇಟ್ಟಿದೆ.
ವಿಧಾನ ಪರಿಷತ್ನಲ್ಲಿ ಆಡಳಿತ ಪಕ್ಷ ಬಿಜೆಪಿಗೆ ಬಹುಮತವಿಲ್ಲ. ಸದ್ಯ ವಿಧಾನ ಪರಿಷತ್ನಲ್ಲಿ ಬಿಜೆಪಿಯ 31 ಸದಸ್ಯರಿದ್ದಾರೆ. ಕಾಂಗ್ರೆಸ್ ಪಕ್ಷದಿಂದ 28, ಜೆಡಿಎಸ್ 14 ಹಾಗು ಒಬ್ಬ ಪಕ್ಷೇತರ ಸದಸ್ಯರೂ ಹಾಗು ಸಭಾಪತಿ ಸೇರಿದಂತೆ ಒಟ್ಟು 75 ಸಂಖ್ಯಾ ಬಲವಿದೆ. ಸಭಾಪತಿ ಅಥವಾ ಉಪ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆದಲ್ಲಿ ಗೆಲ್ಲುವ ಅಭ್ಯರ್ಥಿಗೆ ಕನಿಷ್ಠ 38 ಸದಸ್ಯರ ಬೆಂಬಲ ಬೇಕು.