ಪ್ರಜಾಕೀಯದ ಬೆಳಕಿನ ದಾರಿಯಲ್ಲಿ ಉಪೇಂದ್ರ ಎಂಬ ಭರವಸೆ
ಉಪೇಂದ್ರ ಬಗ್ಗೆ ಇರುವ ನಿರೀಕ್ಷೆಗೆ ಮೊನ್ನೆಮೊನ್ನೆ ನಡೆದ ಪಕ್ಷದ ಉದ್ಘಾಟನಾ ಕಾರ್ಯಕ್ರಮ ಇನ್ನೊಂದಿಷ್ಟು ರೆಕ್ಕೆ-ಪುಕ್ಕ ಹಚ್ಚಿದೆ. ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ ಎಂಬ ಪ್ರಾದೇಶಿಕ ಪಕ್ಷ ಆರಂಭಿಸಿದ್ದಾರೆ ಉಪೇಂದ್ರ. ಅವರ ಮಾತುಗಳಲ್ಲಿ ಭರವಸೆ ಇಟ್ಟು ನಡೆಯುವುದಾದರೆ ಏನೆಲ್ಲ ಬದಲಾವಣೆಗಳು ಆಗಬಹುದು ಎಂಬ ಬಗ್ಗೆಯೂ ಸಕಾರಾತ್ಮಕವಾಗಿ ಯೋಚಿಸಿ ನೋಡೋಣ ಎಂಬ ಪ್ರೇರಣೆಯೊಂದು ಮನಸ್ಸಿನೊಳಗಿನಿಂದ ಗುದ್ದಿಕೊಂಡು ಬರುತ್ತಿದೆ.
ಭ್ರಷ್ಟಾಚಾರಕ್ಕೆ ಕುಮ್ಮಕ್ಕು, ಉಪೇಂದ್ರ ವಿರುದ್ಧ ಬಿತ್ತು ಕೇಸ್
ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಬಗ್ಗೆ ಜನರಲ್ಲಿ ಒಂದು ಭರವಸೆ ಇದೆ. ಆ ವಿಚಾರದಲ್ಲಿ ಕರ್ನಾಟಕವನ್ನು ಕೂಡ ಪಕ್ಕಕ್ಕೆ ಸರಿಸುವಂತಿಲ್ಲ. ಆದರೂ ಯಾವಾಗೆಲ್ಲ ಇಲ್ಲಿನ ನೆಲ-ಜಲದ ಪ್ರಶ್ನೆ ಬರುತ್ತದೋ ಆಗೆಲ್ಲ ರಾಷ್ಟ್ರೀಯ ಪಕ್ಷಗಳ ಮರ್ಜಿಯನ್ನು ಎದುರು ನೋಡುತ್ತಾ ಕೂರುವ ಸನ್ನಿವೇಶ ಇದೆ. ಅದು ಬದಲಾಗಬೇಕು.
ಪಾರದರ್ಶಕ ಆಡಳಿತ ನೀಡುವುದೇ ಕೆಪಿಜೆಪಿ ಸಿದ್ಧಾಂತ
ರಾಜ್ಯದಲ್ಲಿ ಜೆಡಿಎಸ್ ಪ್ರಾದೇಶಿಕ ಪಕ್ಷ ಇರುವಾಗ ಮತ್ತೊಂದು ಏಕೆ ಎಂಬ ಪ್ರಶ್ನೆ ಎದುರಾಗಬಹುದು. ಆದರೆ ಉಪೇಂದ್ರ ಕೆಲವೊಂದನ್ನು ಹೊಸತಾಗಿಯೂ ಹಲವು ಹಳೆ ವಿಚಾರವನ್ನು ಪರಿಣಾಮಕಾರಿಯಾಗಿಯೂ ಮಾತನಾಡುತ್ತಿದ್ದಾರೆ. ಉಪೇಂದ್ರ ಹೇಳುತ್ತಿರುವ ಈ ವಿಚಾರಗಳು ಬದಲಾವಣೆಯ ಬೋರ್ಡಿನಡಿ ಕಾಣಿಸುತ್ತಿರುವುದರಿಂದ ಇವೆಲ್ಲ ಒಳ್ಳೆ ಅಂಶಗಳು ಎಂದು ಪಟ್ಟಿ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ.
ಇಂದಿನ ವ್ಯವಸ್ಥೆ ಬದಲಾವಣೆಗೆ ಹೊಸಬರೇ ಬೇಕು, ಉಪೇಂದ್ರ ಸಂದರ್ಶನ
ಕೆಲವು ವಿಚಾರಗಳನ್ನು ನಮಗೇಕೆ ಬೇಕ್ರಿ ಎಂಬ ಧೋರಣೆ ತೋರಿಸ್ತೀವಿ. ಆದರೆ ಉಪೇಂದ್ರ ಪ್ರಯತ್ನದ ಬಗ್ಗೆ ನಮ್ಮ ಅಭಿಪ್ರಾಯವನ್ನಾದರೂ ಒಂದು ಕಡೆ ಸಿಗುವಂತೆ ಮಾಡೋಣ. ಆಶಾದಾಯಕ ಎನಿಸುವಂಥ ಆಲೋಚನೆಗಳ ಪಟ್ಟಿ ಇಲ್ಲಿದೆ.
ಚುನಾವಣೆ ಖರ್ಚು ನಿಲ್ಲಬೇಕು
ಖಂಡಿತಾ ಇದು ಹೊಸ ಆಲೋಚನೆ ಏನಲ್ಲ. ಆದರೆ ಒಂದು ರಾಜಕೀಯ (ಪ್ರಜಾಕೀಯ) ಪಕ್ಷವಾಗಿ ಅದರ ಮೊದಲ ಹೆಜ್ಜೆಯೇ ಖರ್ಚಿಲ್ಲದ ಕಡೆಯದಾದರೆ, ಬೇರು ಗಟ್ಟಿಯಾದಂತೆಯೇ ಅಲ್ಲವೆ? ಈ ವಿಚಾರದಲ್ಲಿ ಉಪೇಂದ್ರ ಅವರಿಗೆ ಸ್ಪಷ್ಟತೆ ಇದೆ. ಚುನಾವಣೆ ವೆಚ್ಚವೇ ಭ್ರಷ್ಟಾಚಾರದ ತಾಯಿ ಬೇರು. ಅದನ್ನು ಕಡಿದು ಹಾಕಿದರೆ ಆ ನಂತರದ ಫಲದಲ್ಲಿ ಒಳಿತನ್ನು ಕಾಣಬಹುದು.
ಕಾರ್ಮಿಕರು ಬೇಕು
ಭಾರತದಲ್ಲೇ ರಾಜಕಾರಣ ಅಂದರೆ ಜನ ಸೇವಕರು, ಸಮಾಜ ಸೇವಕರು, ಜನ ನಾಯಕರು ಕಾಣುತ್ತಾರೆ. ಅಂತಹವರ ಬಟ್ಟೆ ಚೂರು ಅಲುಗಾಡದೆ ಗರಿಗರಿಯಾಗಿರುತ್ತದೆ. ಜನರ ಮಧ್ಯೆ ಅಷ್ಟಾಗಿ ಕಾಣಿಸಿಕೊಳ್ಳದ, ಹಲವು ಬಾರಿ ಫೋನಿನ ಸಂಪರ್ಕಕ್ಕೂ ಸಿಗದ ಜನ ಸೇವಕರು- ಜನ ನಾಯಕರಿಗಿಂತ ತಮ್ಮ ಕರ್ತವ್ಯ ಅರಿತ, ಅದಕ್ಕಾಗಿ ಸಂಬಳ ಪಡೆವ ಕಾರ್ಮಿಕರು ಬೇಕು. ಜನರ ಮಧ್ಯೆಯೇ ಅವರಿರಬೇಕು ಎಂಬ ಆಲೋಚನೆ ಚೆನ್ನಾಗಿದೆ.
ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮುಖ್ಯ
ಸರಕಾರದ ಯೋಜನೆಗಳು ಜಾರಿಗೆ ಬಂದ ಮೇಲಷ್ಟೇ ಜನರ ಗಮನಕ್ಕೆ ಬರುತ್ತದೆ. ಈ ವಿಚಾರದಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಎಂಬುದೇ ಕಡಿಮೆ ಆಗಿದೆ. ಆದರೆ ಉಪೇಂದ್ರ ಅವರು ಸಾರ್ವಜನಿಕರು ಸರಕಾರದ ನಿರ್ಧಾರದಲ್ಲಿ ಪಾಲ್ಗೊಳ್ಳುವ ಬಗ್ಗೆ ಗಂಭೀರವಾಗಿ ಮಾತನಾಡುತ್ತಿದ್ದಾರೆ.
ಈಗಾಗಲೇ ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯ ಇದೆ
ಉಚಿತ ಶಿಕ್ಷಣ, ಆರೋಗ್ಯದ ಬಗ್ಗೆ ಹೇಳುತ್ತಿರುವ ಉಪೇಂದ್ರ ಅವರಿಗೆ ಈಗಾಗಲೇ ಅಂಥ ವ್ಯವಸ್ಥೆ ಇದೆ ಎಂಬುದರ ಬಗ್ಗೆ ಏಕೆ ಮನದಟ್ಟಾಗಿಲ್ಲವೋ? ಈ ವಿಚಾರದಲ್ಲಿ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಬೇಕು ಹಾಗೂ ಅದಕ್ಕಾಗಿ ಸರಕಾರದಿಂದ ಹಣ ಮೀಸಲಿಟ್ಟು, ನೇಮಕಾತಿಗಳು ಆಗಬೇಕು. ಜನರ ನಂಬಿಕೆ ಹೆಚ್ಚಾಗಬೇಕು. ಈ ವಿಚಾರದಲ್ಲಿ ಆಲೋಚನೆ ಇನ್ನೂ ಪರಿಣಾಮಕಾರಿ ಆಗಬೇಕು.
ಆಲೋಚನೆ ಸ್ವೀಕರಿಸುವ ಯೋಚನೆಯೇ ದೊಡ್ಡದು
ಯಾರದೇ ಆಲೋಚನೆಯಾದರೂ ಸಮಸ್ಯೆಗೆ ಅದು ಪರಿಹಾರ ಎನಿಸುವುದಾದರೆ ಅದು ಸ್ವೀಕರಿಸಬೇಕು ಎಂಬುದೇ ತುಂಬ ದೊಡ್ಡ ಮಾರ್ಪಾಟು ಎಂಬುದರಲ್ಲಿ ಎರಡು ಮಾತಿಲ್ಲ. ವಿರೋಧ ಪಕ್ಷ ಎಂಬ ಕಾರಣಕ್ಕೆ ಟೀಕಿಸಬೇಕು ಅಂತಲೇ ಟೀಕೆ ಮಾಡುತ್ತಿರುವ ಮನಸ್ಥಿತಿ ಕಾಣುತ್ತಿರುವ ಕಾಲ ಘಟ್ಟದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಒಳ್ಳೆ ಪ್ರಯತ್ನ.
ಸ್ಮಾರ್ಟ್ ವಿಲೇಜ್ ಬೇಕು
ಸ್ಮಾರ್ಟ್ ಸಿಟಿಯಲ್ಲ, ಸ್ಮಾರ್ಟ್ ವಿಲೇಜ್ ಬೇಕು ಎಂಬ ಉಪೇಂದ್ರ ಅವರ ಮಾತು ನೂರಕ್ಕೆ ನೂರು ನಿಜ. ಭಾರತ ಹಳ್ಳಿಗಳ ದೇಶ. ನಿಜವಾಗಲೂ ಸವಲತ್ತು ಸೌಲಭ್ಯಗಳು ತಲುಪಬೇಕಿರುವುದು ಹಳ್ಳಿಗಳಿಗೆ ಎಂಬ ಮಾತು ತೆಗೆದುಹಾಕುವುದಕ್ಕೆ ಸಾಧ್ಯವೇ ಇಲ್ಲ.
ಜನಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವುದು ಹೇಗೆ?
ಮತದಾರರಿಗೆ ತಾವು ಆರಿಸಿದ ಜನ ಪ್ರತಿನಿಧಿಯ ಬಗ್ಗೆ ಅಸಮಾಧಾನ ಆದರೆ ವಾಪಸ್ ಕರೆಸಿಕೊಳ್ಳುವ ಬಗ್ಗೆ ತುಂಬ ಹಿಂದಿನಿಂದಲೂ ಮಾತು ಕೇಳಿಬರುತ್ತಿದೆ. ನಮ್ಮ ಪಕ್ಷದಿಂದ ಯಾರೇ ಅಸಮಾಧಾನಕ್ಕೆ ಕಾರಣವಾದರೂ ಜನರೇ ವಿಚಾರಿಸಿಕೊಳ್ಳಿ ಎಂಬ ಉಪೇಂದ್ರರ ಮಾತು ಭರವಸೆ ಹುಟ್ಟಿಸುವಂತಿದೆ. ಆದರೆ ಇದನ್ನು ಸಾಧ್ಯ ಮಾಡುವುದು ಹೇಗೆ ಎಂಬ ಸ್ಪಷ್ಟತೆ ಇರಬೇಕಿತ್ತು.
ಆಡಳಿತದಲ್ಲಿ ಪಾರದರ್ಶಕತೆ
ಯಾವುದೇ ಸರಕಾರ ಯೋಜನೆಗಳನ್ನು ಜನ ಹಿತಕ್ಕಾಗಿಯೇ ಜಾರಿಗೆ ತರುತ್ತದೆ. ಆದರೆ ಅದನ್ನು ಅನುಷ್ಠಾನ ಮಾಡಬೇಕಾದವರು ಅಧಿಕಾರಿಗಳು. ಈ ಬಗ್ಗೆ ಉಪೇಂದ್ರ ಪಾರದರ್ಶಕತೆ ಎಂಬ ಮಾತನಾಡುತ್ತಿದ್ದಾರೆ. ತಮ್ಮ ಪಕ್ಷದ ಸಿದ್ಧಾಂತವೇ ಆಡಳಿತದಲ್ಲಿ ಪಾರದರ್ಶಕತೆ ಎನ್ನುತ್ತಿದ್ದಾರೆ. ಈ ವಿಚಾರ ಒಪ್ಪುವಂಥದ್ದೇ. ಆದರೆ ಯಾವ ರೀತಿಯ ಪಾರದರ್ಶಕತೆ, ಹೇಗೆ ಪರಿಣಾಮಕಾರಿ ಆಡಳಿತ ಎಂಬುದನ್ನು ವಿವರಿಸಬೇಕಿದೆ.