ಮೋನಿಕಾ ಹತ್ಯೆ : ಗೃಹ ಸಚಿವರಿಗೆ ಮಹಿಳಾ ಆಯೋಗ ಪತ್ರ
ಮಂಡ್ಯ, ಏಪ್ರಿಲ್ 06 : ಮಂಡ್ಯದಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೋನಿಕಾಳ ಮರ್ಯಾದಾ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಆಯೋಗ ಸೂಕ್ತ ಕ್ರಮಕ್ಕಾಗಿ ಗೃಹಸಚಿವ ಡಾ. ಜಿ. ಪರಮೇಶ್ವರರಿಗೆ ಪತ್ರ ಬರೆದಿದೆ.
ಈ ಕುರಿತು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಪತ್ರ ಬರೆದಿದ್ದು, ಚಿಕ್ಕ ಸುಳಿವಿನ ಬೆನ್ನತ್ತಿ ಪ್ರಕರಣ ಭೇದಿಸಬೇಕಾದ ಜಿಲ್ಲಾ ಪೊಲೀಸರು ತಿಮ್ಮನಹೊಸೂರು ಘಟನೆಗೆ ನೇರ ಕಾರಣರಾದರೆಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಇತ್ತೀಚಿನ ಘಟನೆಗಳನ್ನು ಅವಲೋಕಿಸಿದರೆ ಮಹಿಳೆಯರ ಬದುಕುವ ಹಕ್ಕಿಗೆ ಸಂಚಕಾರ ತರುತ್ತಿರುವ ವ್ಯವಸ್ಥೆ ಎದ್ದು ಕಾಣಿಸುತ್ತಿದೆ. ಪೊಲೀಸರು ಸೂಕ್ಷ್ಮವಾಗಿ ವರ್ತಿಸದೆ ಒಂದು ಜೀವವನ್ನು ಕೊಲ್ಲುವಿಕೆಗೆ ದಾರಿ ಮಾಡಿಕೊಟ್ಟರೇನೋ ಎಂದು ಅನಿಸಲಾರಂಭಿಸಿದೆ ಎಂದು ಮಂಜುಳಾ ಮಾನಸ ತಿಳಿಸಿದ್ದಾರೆ. [ಮಂಡ್ಯದ ಮೋನಿಕಾ ಸತ್ತಿದ್ದು ಹೇಗೆ?]
ಪೊಲೀಸರು ಎಡವಿದ್ದರಿಂದಲೇ ದ್ವಿತೀಯ ಪಿಯು ವಿದ್ಯಾರ್ಥಿನಿ ಮೋನಿಕಾಳನ್ನು ಹೆತ್ತವರೇ ಹತ್ಯೆ ಮಾಡುವಂತಾಗಿದೆ. ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ಎಡವಿದೆ ಮತ್ತು ತರಾತುರಿಯಿಂದ ಮೋನಿಕಾಳನ್ನು ಅವರ ಪೋಷಕರಿಗೆ ಒಪ್ಪಿಸಿ ಅವಳ ಕೊಲ್ಲುವಿಕೆಗೆ ದಾರಿ ಮಾಡಿಕೊಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಇಲಾಖೆ ಮೋನಿಕಾ ಪ್ರಕರಣದಲ್ಲಿ ಸ್ವಲ್ಪ ಮುನ್ನೆಚ್ಚರಿಕೆ ವಹಿಸಿ, ಒಂದೆರಡು ದಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರದ ಸ್ವಾಧಾರ ಕೇಂದ್ರಕ್ಕೆ ಆಕೆಯನ್ನು ಒಪ್ಪಿಸಿದ್ದರೆ ಆಕೆಯ ಜೀವ ಉಳಿಯುತ್ತಿತ್ತೇನೋ. [ರಾಮನಗರದಲ್ಲೊಂದು ಮರ್ಯಾದಾ ಹತ್ಯೆ?]
ಘಟನೆ ನಡೆದ ದಿನ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯತೆಯಿಂದ ವರ್ತಿಸಿರುವುದು ಮೇಲ್ನೋಟಕ್ಕೆ ನನ್ನ ಗಮನಕ್ಕೆ ಬಂದಿದೆ. ಇನ್ನು ಮುಂದೆಯಾದರೂ ಪೊಲೀಸ್ ಇಲಾಖೆ ಸೂಕ್ಷ್ಮವಾಗಿ ಇಂತಹ ಪ್ರಕರಣದಲ್ಲಿ ವರ್ತಿಸುವಂತೆ ನಿಮ್ಮ ಸಿಬ್ಬಂದಿಗೆ ಮಾರ್ಗದರ್ಶನ ನೀಡಿ ಎಂದು ಗೃಹ ಸಚಿವ ಜಿ. ಪರಮೇಶ್ವರ್ಗೆ ಪತ್ರ ಮುಖೇನ ಮಂಜುಳಾ ಮಾನಸ ತಿಳಿಸಿದ್ದಾರೆ.