ಪರೇಶ್ ಮೇಸ್ತಾ ಸಾವು ಆಕಸ್ಮಿಕ ಎಂಬ ಸಿಬಿಐ ವರದಿ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ: ಸಿದ್ದರಾಮಯ್ಯ
ಬೆಂಗಳೂರು, ಅ.4: ಪರೇಶ್ ಮೇಸ್ತಾ ಎಂಬ ಯುವಕನ ಹತ್ಯೆ ನಡೆದಿಲ್ಲ. ಬದಲಾಗಿ ಅದು ಆಕಸ್ಮಿಕ ಸಾವು ಎಂದು ಸಿಬಿಐ ವಿಚಾರಣಾ ವರದಿ ರಾಜ್ಯ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹನ್ನಾವರದ ಪರೇಶ್ ಮೇಸ್ತನದು ಹತ್ಯೆ ಮಾಡಲಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದ ಬಿಜೆಪಿ ಮಾನ ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತನಂತಹ ಅಮಾಯಕ ಯುವಕರ ರಕ್ತದ ಇದೆ. ಬಿಜೆಪಿ ನಾಯಕರೇ ನೀವು ಅನುಭವಿಸುತ್ತಿರುವ ಅಧಿಕಾರದ ಕುರ್ಚಿಗೆ ಮೇಸ್ತನಂತಹ ಯುವಕನ ರಕ್ತದ ಕಲೆ ಅಂಟಿಕೊಂಡಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯಕ್ಕೆ ಸಿಬಿಐ ತನಿಖಾ ವರದಿ
ಹೊನ್ನಾವರದ ಪರೇಶ್ ಮೇಸ್ತಾ ಅವರ ಸಾವು ಹತ್ಯೆಯಲ್ಲ, ಅದು ಆಕಸ್ಮಿಕ ಸಾವು ಎಂದು ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು ಹೊನ್ನಾವರದ ನ್ಯಾಯಾಲಯಕ್ಕೆ ತನಿಖಾ ವರದಿ (ಬಿ ರಿಪೋರ್ಟ್) ಸಲ್ಲಿಕೆ ಮಾಡಿದ್ದಾರೆ. ಪ್ರಕರಣ ಸಂಬಂಧ ಸೋಮವಾರ ವರದಿ ಪರಿಶೀಲಿಸಿ ವಿಚಾರಣೆ ನಡೆಸಿದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ನ್ಯಾಯಪೀಠವು ಮುಂದಿನ ತಿಂಗಳ ನವೆಂಬರ್ 16ಕ್ಕೆ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿತು.
ಕಳೆದ ಐದು ವರ್ಷಗಳ ಹಿಂದೆ 2017ರಂದು ಡಿಸೆಂಬರ್ ಮೊದಲ ವಾರ ಹೊನ್ನಾವರ ಪಟ್ಟಣದಲ್ಲಿ ಕೋಮು ಗಲಭೆ ನಡೆದಿತ್ತು. ಈ ಸಂದರ್ಭದಲ್ಲಿ ಹೊನ್ನಾವರದ ಮೀನುಗಾರ 19 ವರ್ಷದ ಯುವಕ ಪರೇಶ್ ಮೇಸ್ತಾ ನಾಮಪತ್ತೆಯಾಗಿದ್ದ. ಎರಡು ದಿನ ಬಿಟ್ಟು (ಡಿಸೆಂಬರ್ 8ರಂದು) ಹೊನ್ನಾವರದಲ್ಲಿನ ಶನಿ ದೇವಾಲಯ ಸಮೀಪದ ಶಟ್ಟಿ ಕೆರೆಯಲ್ಲಿ ಪರೇಶ್ ಮೇಸ್ತಾ ಯುವಕನ ದೇಹ ಶವ ಪತ್ತೆಯಾಗಿತ್ತು. ಆಗ ಬಿಜೆಪಿ ನಾಯಕರು ಪರೇಶ್ ಮೇಸ್ತ ಕೊಲೆಯಾಗಿದೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಹಿಂದೂ ಯುವಕರ ಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಭಟನೆಗಳನ್ನು ನಡೆಸಿದ್ದರು.