ನಿರ್ದೇಶಕ ಇಂದ್ರಜಿತ್ ಲಂಕೇಶ್ ಬರಿ ಮಾತನಾಡಿಲ್ಲ!
ಬೆಂಗಳೂರು, ಸೆ. 03: ರಾಜ್ಯದಲ್ಲಿ ಮತ್ತೆ ಡ್ರಗ್ಸ್ ಮಾಫಿಯಾ ಮಟ್ಟ ಹಾಕುವ ಚರ್ಚೆಗಳು ಶುರುವಾಗಿವೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಾತಿನಿಂದ ಮತ್ತೊಮ್ಮೆ ಶುರುವಾಗಿರುವ ಚರ್ಚೆ, ಕನ್ನಡ ಚಿತ್ರರಂಗದ ಸ್ಟಾರ್ ನಟಿಯನ್ನು ಬೆಂಗಳೂರು ಪೊಲೀಸರು ವಿಚಾರಣೆಗೆ ಒಳಪಡಿಸಲು ನೋಟೀಸ್ ನೀಡುವಲ್ಲಿಗೆ ಬಂದು ನಿಂತಿದೆ. ಇದೇ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ.
Recommended Video
ಆರ್ಟಿ ನಗರದ ನಿವಾಸದಲ್ಲಿ ಮಾತನಾಡಿರುವ ಗೃಹ ಸಚಿವ ಬೊಮ್ಮಾಯಿ ಅವರು, ನಾವು ನಿರಂತರವಾಗಿ ಡ್ರಗ್ಸ್ ಜಾಲದ ಮೇಲೆ ರೇಡ್ ಮಾಡುತ್ತಿದ್ದೇವೆ. ನಮ್ಮ ಪೊಲೀಸರು ಆಧುನಿಕ ತಂತ್ರಜ್ಞಾನದ ಮೂಲಕ ಮಾದಕವಸ್ತು ಎಲ್ಲೆಲ್ಲಿ, ಹೇಗೆ ಸರಬರಾಜು ಆಗುತ್ತಿದೆ ಎಂಬುದನ್ನು ಪತ್ತೆ ಹಚ್ಚಿ, ಪ್ರಕರಣ ದಾಖಲಿಸುತ್ತಿದ್ದಾರೆ.
ಕೆಲವು ಸಿನಿಮಾ ನಟ-ನಟಿಯರೂ ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಸ್ವಯಂ ಹೇಳಿಕೆ ಕೊಟ್ಟವರು (ಇಂದ್ರಜಿತ್ ಲಂಕೇಶ್) ಮಹತ್ವದ ಸುಳಿವನ್ನು ಕೊಟ್ಟಿದ್ದಾರೆ ಎಂದಿದ್ದಾರೆ. ಆ ಮೂಲಕ ಇಂದ್ರಜಿತ್ ಲಂಕೇಶ್ ಅವರು ಬರಿ ಮಾತನಾಡಿಲ್ಲ, ಜೊತೆಗೆ ಸಾಕಷ್ಟು ಮಹತ್ವದ ಮಾಹಿತಿಯನ್ನೂ ಕೊಟ್ಟಿದ್ದಾರೆಂದು ಗೃಹಸಚಿವ ಬೊಮ್ಮಾಯಿ ಅವರು ಪರೋಕ್ಷವಾಗಿ ತಿಳಿಸಿದ್ದಾರೆ.
ಕೇವಲ ಸಿಸಿಬಿ ಮಾತ್ರವಲ್ಲ, ಎಲ್ಲ ಪೊಲೀಸ್ ಸ್ಟೇಶನ್ಗಳ ವ್ಯಾಪ್ತಿಯಲ್ಲಿ ಕ್ರೈಂ ಬ್ರ್ಯಾಂಚ್ ಹೆಚ್ಚು ಜಾಗೃತವಾಗಿರುವಂತೆ ಸೂಚಿಸಿದ್ದೇನೆ. ಕಸ್ಟಮ್ಸ್ ಮತ್ತು ಏರ್ ಪೋರ್ಟ್ ಹಾಗೂ ಬಂದರುಗಳಲ್ಲಿ ಮಾದಕವಸ್ತು ಎಲ್ಲಿಂದ ಸರಬರಾಜು ಆಗುತ್ತಿದೆ ಎಂಬುದನ್ನು ಪತ್ತೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವರೊಂದಿಗೆ ನಮ್ಮ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆಂದು ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ.