ಅಕ್ರಮ ಧಾರ್ಮಿಕ ಕಟ್ಟಡ ಎಂದರೇನು? ಗೃಹ ಸಚಿವರ ಊರಲ್ಲೊಂದು ತಾಜಾ ಉದಾಹರಣೆ!
ಶಿವಮೊಗ್ಗ, ಅ. 11: ಅಕ್ರಮ ಧಾರ್ಮಿಕ ಕಟ್ಟಡಗಳ ತೆರವು ಸಂಬಂಧ ಸುಪ್ರೀಂಕೋರ್ಟ್ ತೀರ್ಪುನ್ನು ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ತವರು ಕ್ಷೇತ್ರದಲ್ಲಿ ಅನುಷ್ಠಾನ ಮಾಡಲಾಗದೇ ತಾರತಮ್ಯ ಎಸಗಿರುವ ಪ್ರಸಂಗ ಬೆಳಕಿಗೆ ಬಂದಿದೆ.
ಅಕ್ರಮ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ರಾಜ್ಯದಲ್ಲಿ 1997 ರಿಂದ ಈಚೆಗೆ ನಿರ್ಮಾಣವಾಗಿದ್ದ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ರಾಜ್ಯದಲ್ಲಿ ದೊಡ್ಡ ವಿವಾದಕ್ಕೆ ನಾಂದಿ ಹಾಡಿತ್ತು. ಮೈಸೂರಿನಲ್ಲಿ ದೊಡ್ಡ ವಿವಾದವೇ ಭುಗಿಲೆದ್ದಿತ್ತು. ಆದರೆ, ಗೃಹ ಸಚಿವ ಅರಗ ಜ್ಞಾನೇಂದ್ರರ ತವರು ಕ್ಷೇತ್ರದಲ್ಲಿ ಅಕ್ರಮವಾಗಿ ತಲೆಯೆತ್ತಿರುವ ಧಾರ್ಮಿಕ ಕಟ್ಟಡ ತೆರವುಗೊಳಿಸುವಲ್ಲಿ ಶಿವಮೊಗ್ಗ ಜಿಲ್ಲಾಡಳಿತ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ನೆಲಸಮಕ್ಕೆ ಅರ್ಹತೆ ಪಡೆದ ಕಟ್ಟಡವನ್ನು ಹಾಗೆಯೇ ಬಿಡಲಾಗಿದೆ. ಇದು ಕೂಡ ಅಕ್ರಮ ಎಂದು ಗೊತ್ತಿದ್ದರೂ ವೋಟ್ ಬ್ಯಾಂಕ್ ರಾಜಕಾರಣವೀಗ ಇಲ್ಲಿ ಜೋರಾಗಿಯೇ ನಡೆಯುತ್ತಿದೆ. ಹಿಂದೆ, ನಂದಿತಾ ಪ್ರಕರಣದ ಮಾದರಿಯಲ್ಲಿಯೇ ಇದನ್ನು ಮುಂದಿನ ಚುನಾವಣೆಯಲ್ಲಿ ಭಾವನೆಗಳನ್ನು ಕೆರಳಿಸುವ ವಿಚಾರವನ್ನಾಗಿ ಮಾಡುವ ಎಲ್ಲಾ ತಯಾರಿಗಳೂ ತೆರೆಮರೆಯಲ್ಲಿ ಕಾಣಿಸುತ್ತಿದೆ.
ಏನಿದು ವಿವಾದ?
ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ, 1997 ರಿಂದ ಈಚೆಗೆ ತಲೆಯೆತ್ತಿರುವ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವಂತೆ ಸುಪ್ರೀಂಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಎಲ್ಲಾ ರಾಜ್ಯಗಳು ಈ ತೀರ್ಪನ್ನು ಪಾಲನೆ ಮಾಡುವ ಸಂಬಂಧ ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿರುವ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿದೆ. ಆದರೆ, ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿನಿಧಿಸುವ ತೀರ್ಥಹಳ್ಳಿ ಕ್ಷೇತ್ರದಲ್ಲಿ ಅಕ್ರಮ ಧಾರ್ಮಿಕ ಕಟ್ಟಡವೊಂದು ದೊಡ್ಡ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಸುಪ್ರೀಂಕೋರ್ಟ್ ತೀರ್ಪು ಈ ಅಕ್ರಮ ಕಟ್ಟಡಕ್ಕೆ ಅನ್ವಯ ವಾಗುವುದಿಲ್ಲವೇ? ಎಂದು ಸಾರ್ವಜನಿಕರೇ ಪ್ರಶ್ನೆ ಮಾಡುವಂತಾಗಿದೆ.
ಬಾಳೇಬೈಲಿನಲ್ಲಿ ಪೈ ಲೇಔಟ್:
ತೀರ್ಥಹಳ್ಳಿ ತಾಲೂಕಿನ ಪುರ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಪ್ರದೇಶದ ಹೆಸರು ಬಾಳೇ ಬೈಲು. ಶಿವಮೊಗ್ಗ ಆಗುಂಬೆ ರಸ್ತೆಯಲ್ಲಿ ತೀರ್ಥಹಳ್ಳಿ ಹಾದು ಹೋಗುವಾಗ ಸಿಗುವ ವಿಸ್ತರಣೆಗೊಂಡ ನಗರ ಪ್ರದೇಶವಿದು. ಇಲ್ಲಿನ ಪೈ ಲೇಔಟ್ ನಲ್ಲಿ ಇತ್ತೀಚೆಗೆ ತಲೆಯೆತ್ತಿರುವ ಧಾರ್ಮಿಕ ಕಟ್ಟಡದ ಕಥೆಯಿದು. ಇಲ್ಲಿನ ಪೈ ಲೇಔಟ್ ನಲ್ಲಿನ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಕೊಂಕಣಿ ಸಮುದಾಯದ ಆರಾಧ್ಯ ದೇವರ ಹೆಸರಿನಲ್ಲಿ ಧಾರ್ಮಿಕ ಕಟ್ಟಡ ನಿರ್ಮಾಣ ಮಾಡಲಾಗಿದೆ. ವಸತಿ ಪ್ರದೇಶದಲ್ಲಿ ನಿರ್ಮಿಸಿರುವ ಧಾರ್ಮಿಕ ಕಟ್ಟಡದಲ್ಲಿ ಯಾವಾಗಲೂ ಧ್ವನಿವರ್ಧಕ ಹಾಕಲಾಗುತ್ತದೆ. ಗೋವಾ ಬಿಟ್ಟರೆ ದೇಶದ ಬೇರೆಲ್ಲೂ ಈ ತಾಯಿ ನೆಲೆಸಿಲ್ಲ ಎಂದು ಬಿಂಬಿಸುತ್ತಿದ್ದು, ಪ್ರತಿ ನಿತ್ಯ ನೂರಾರು ಮಂದಿ ಧಾರ್ಮಿಕ ಕಟ್ಟಡಕ್ಕೆ ಬಂದ ಹೋಗುತ್ತಿದ್ದಾರೆ. ಇದರಿಂದ ದಿನೇ ದಿನೇ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಈ ಕುರಿತು ಸ್ಥಳೀಯ ನಿವಾಸಿಗಳು ಸ್ಥಳೀಯ ಪುರಪಂಚಾಯ್ತಿ ಸದಸ್ಯರಿಗೆ ದೂರು ನೀಡಿದ್ದಾರೆ. ಅಧಿಕಾರಿಗಳಿಗೂ ಮನವಿ ಕೊಟ್ಟಿದ್ದಾರೆ. ಆದರೆ ಈ ದೇವಾಲಯವನ್ನು ಸುಪ್ರೀಂಕೋರ್ಟ್ ತೀರ್ಪಿನ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಪರಿಶೀಲಿಸುವ ಗೋಜಿಗೂ ಅಧಿಕಾರಿಗಳು ಹೋದಂತೆ ಕಾಣುತ್ತಿಲ್ಲ. ಒಂದು ಈ ದೇಗುಲದ ಉಳಿವಿನ ಹಿಂದೆ ಕೊಂಕಣಿ ವೋಟ್ ಬ್ಯಾಂಕ್ ರಾಜಕಾರಣ ಅಡಗಿದೆ ಎಂಬ ಮಾತು ಕೇಳಿ ಬರುತ್ತಿವೆ. ಎಲ್ಲಾ ಕಡೆ ಅಕ್ರಮ ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡಿಸುತ್ತಿರುವ ಗೃಹ ಸಚಿವರು ಯಾಕೆ ತಮ್ಮ ಕ್ಷೇತ್ರದಲ್ಲಿ ಸುಪ್ರೀಂ ತೀರ್ಪನ್ನು ಅನುಷ್ಠಾನ ಮಾಡುತ್ತಿಲ್ಲ ಎಂಬ ಪ್ರಶ್ನೆ ಎದ್ದಿದೆ.
ಕೊಂಕಣಿ ಸಮುದಾಯದ ಹೆಸರಿನಲ್ಲಿ:
"ಬಾಳೇಬೈಲಿನ ಪೈ ಲೇಔಟ್ ನಲ್ಲಿ ಕೊಂಕಣಿ ಸಮುದಾಯ ಪ್ರತಿನಿಧಿಸುವ ದೇವರ ಹೆಸರಿನಲ್ಲಿ ರಸ್ತೆಗೆ ಹೊಂದಿಕೊಂಡಂತೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಖಾಸಗಿ ಬಡಾವಣೆಯ ನಿವೇಶನದಲ್ಲಿ ಧಾರ್ಮಿಕ ಕಟ್ಟಡ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಆಗುತ್ತಿರುವ ಬಗ್ಗೆ ದೂರು ನೀಡಿದ್ದಾರೆ. ಈ ದೂರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇಲ್ಲಿನ ಅಕ್ರಮ ಕಟ್ಟಡದಿಂದ ಸಾರ್ವಜನಿಕರಿಗೆ ತೊಂದರೆ ಆಗಿರುವ ಬಗ್ಗೆ ದೂರು ಬಂದಿದೆ ಎಂಬುದು ನಿಜ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕಟ್ಟಿದ ಕಟ್ಟಡಗಳನ್ನು ನೆಲಸಮ ಮಾಡುವುದಕ್ಕಿಂತಲೂ ಇದು ಗೊತ್ತಿದ್ದೂ ಅವಕಾಶ ನೀಡಿದ ಅಧಿಕಾರಿಗಳ ಮೇಲೆ ಕ್ರಮ ಜರಗಿಸಬೇಕು. ತೀರ್ಥಹಳ್ಳಿ ತಾಲೂಕಿನ ಕೆರೆ ಅಂಗಳದ ಸರ್ಕಾರಿ ಜಮೀನು ಕಬಳಿಸಿದ್ದಾರೆ. ಲಕ್ಷಾಂತರ ವೆಚ್ಚ ಮಾಡಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಮೊದಲೇ ಇದು ಸರ್ಕಾರಿ ಭೂಮಿ ಎಂದು ಮನೆ ಕಟ್ಟುವುದನ್ನ ನಿಲ್ಲಿಸಿದ್ದರೆ ಚೆನ್ನಾಗಿರುತ್ತಿತ್ತು. ಅಧಿಕಾರಿಗಳು ಮಾಡಿದ ತಪ್ಪಿಗೆ ಈಗ ಜನರು ಅನಾವಶ್ಯಕ ಸಮಸ್ಯೆ ಎದರುಸುವುಂತಾಗಿದೆ," ಎಂದು ಸ್ಥಳೀಯ ನಗರಸಭೆ ಸದಸ್ ರಹಮತುಲ್ಲಾ ಅಸಾದಿ 'ಒನ್ ಇಂಡಿಯಾ ಕನ್ನಡ'ಕ್ಕೆ ಸ್ಪಷ್ಟನೆ ನೀಡಿದ್ದಾರೆ.
Recommended Video
ಈ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಲು 'ಒನ್ ಇಂಡಿಯಾ ಕನ್ನಡ' ಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಮುಂದೊಂದು ದಿನ ಇದೇ ವಿಚಾರ ಸ್ಥಳೀಯ ಚುನಾವಣೆಯ ಭಾವನಾತ್ಮಕ ಸಂಘರ್ಷಕ್ಕೆ ಕಾರಣವಾಗಬಹುದು. ಈ ಕುರಿತು ಅಧಿಕಾರಿಗಳು ಹಾಗೂ ಖುದ್ದು ಗೃಹಸಚಿವರು ತುರ್ತಾಗಿ ಗಮನಹರಿಸಬೇಕಿದೆ.