ರಾಜ್ಯದಿಂದ ಹೊರ ದೇಶಗಳಿಗೆ 220 ಹೋಗಿದ್ದು ಸ್ಯಾಟಲೈಟ್ ಪೋನ್ ಕರೆ!
ಯಾದಗಿರಿಯಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಪೋನ್ ಕರೆ ಹೋಗಿರುವ ಸಂಗತಿ ಬಯಲಾದ ಬೆನ್ನಲ್ಲೇ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂತಹ ಆತಂಕಕಾರಿ ಸಂಗತಿಯನ್ನು ವಿಧಾನಸೌಧದ ಅಧಿವೇಶನದಲ್ಲಿ ಹೊರ ಹಾಕಿದ್ದಾರೆ. ಮುಂಬೈ ಉಗ್ರರ ದಾಳಿಗೆ ಪಾಕಿಸ್ತಾನಿ ಉಗ್ರಗಾಮಿಗಳು ಸ್ಯಾಟಲೈಟ್ ಪೋನ್ ಬಳಕೆ ಮಾಡಿದ್ದರು. ದೇಶದ ಭದ್ರತಾ ಹಿತದೃಷ್ಟಿಯಿಂದ ಭಾರತದಲ್ಲಿ ಸ್ಯಾಟಲೈಟ್ ಪೋನ್ ಬಳಕೆ ನಿಷೇಧಿಸಲಾಗಿದೆ. ಆದರೆ ಗೃಹ ಸಚಿವರು ಸ್ಯಾಟಲೈಟ್ ಬಳಕೆ ಕುರಿತು ನೀಡಿರುವ ಹೇಳಿಕೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಿದೆ.
ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಶಾಸಕ ಯು.ಟಿ. ಖಾದರ್ ಅವರು, ''ಕರಾವಳಿ ಭಾಗದಲ್ಲಿ ಸ್ಯಾಟಲೈಟ್ ಪೋನ್ ಬಳಕೆ ಕುರಿತು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಕರಾವಳಿ ಹಾಗೂ ಇನ್ನಿತರೆ ಭಾಗದಲ್ಲಿ ಸ್ಯಾಟಲೈಟ್ ಪೋನ್ ಬಳಕೆ ಮಾಡುತ್ತಿರುವುದು ಕಳವಳಕಾರಿ ಸಂಗತಿ. ದೇಶದ ಭದ್ರತಾ ವಿಚಾರ ಅಡಗಿದೆ. ಹೀಗಾಗಿ ಸ್ಯಾಟಲೈಟ್ ಪೋನ್ ಬಳಕೆ ಮಾಡಿ ಅನ್ಯ ದೇಶಗಳಿಗೆ ಕರೆ ಮಾಡುವರ ಮೇಲೆ ನಿಗಾ ವಹಿಸಿ ಕ್ರಮ ಜರುಗಸುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ,'' ಎಂದು ಅವರು ತಿಳಿಸಿದ್ದಾರೆ.
ಸ್ಯಾಟಲೈಟ್ ಪೋನ್ ಕಾಲ್: ಯಾದಗಿರಿ ಜಿಲ್ಲೆಯಲ್ಲಿ ಹೈ ಅಲರ್ಟ್!
ಸ್ಥಳೀಯ ಪೊಲೀಸರು, ಕರಾವಳಿ ಕಾವಲು ಪಡೆ ಹಾಗೂ ಇನ್ನಿತರೆ ವಿಶೇಷ ಪೊಲೀಸ್ ಸಿಬ್ಬಂದಿಯವರು ಸ್ಯಾಟಲೈಟ್ ಪೋನ್ ಬಳಕೆ ಮಾಡುವರ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ನಿಷೇಧಿತ ಸ್ಯಾಟಲೈಟ್ ಪೋನ್ ಬಳಕೆ ಮಾಡಿದವರ ವಿರುದ್ಧ ಕಟ್ಟು ಕಟ್ಟಿನ ಕ್ರಮ ಜರುಗಿಸಲು ಸೂಚಿಸಲಾಗಿದೆ. ಸ್ಯಾಟಲೈಟ್ ಪೋನ್ ಬಳಕೆ ಸದ್ದಡಗಿಸಲು ಗೃಹ ಇಲಾಖೆ ಕಟ್ಟು ನಿಟ್ಟಿನ ಕ್ರಮ ಜರುಗಿಸಲಿದೆ. ದೇಶದ ಭದ್ರತಾ ವ್ಯವಸ್ಥೆ ಅಡಗಿದೆ. ರಾಜ್ಯದಿಂದ ಹೊರ ದೇಶಗಳಿಗೆ ಇತ್ತೀಚೆಗೆ 220 ಸ್ಯಾಟಲೈಟ್ ಪೋನ್ ಕರೆಗಳು ಹೋಗಿರುವುದು ದೃಢ ಪಟ್ಟಿದೆ. ಈ ಕುರಿತು ಮಹತ್ವದ ಮಾಹಿತಿ ಸಂಗ್ರಹಿಸಿದ್ದು, ನಿಷೇಧಿತ ಪೋನ್ ಬಳಕೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ:
''ರಾಜ್ಯದಲ್ಲಿ ಬಲವಂತದ ಹಾಗೂ ಆಮಿಷವೊಡ್ಡಿ ಮತಾಂತರ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ, 'ಮತಾಂತರ ನಿಷೇಧ' ಕಾಯಿದೆ ಜಾರಿಗೆ ತರುವ ಚಿಂತನೆ ನಡೆದಿದೆ,'' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ವಿಷಯ ಪ್ರಸ್ತಾಪಿಸಿ, ನನ್ನ ಜಿಲ್ಲೆ ಹಾಗೂ ಮತಕ್ಷೇತ್ರದಲ್ಲಿ ಕೆಲವು ಕ್ರಿಶ್ಚಿಯನ್ ಮಿಷನರಿಗಳು ಬಲವಂತದ ಹಾಗೂ ಆಮಿಷಗಳನ್ನೊಡ್ಡಿ ಮುಗ್ಧ ಜನರನ್ನು ಮತಾಂತರಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿವೆ. ಕೆಲವು ಕುಟುಂಬಗಳೇ ಮುರಿದು ಬಿದ್ದಿವೆ. ಇದನ್ನು ತಡೆಯಲು ಸರಕಾರವು ತಕ್ಷಣದಿಂದಲೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ನನ್ನ ತಾಯಿಯೇ ಮತಾಂತರಿ ಎಂದ ಗೂಳಿಹಟ್ಟಿ:
''ನನ್ನ ತಾಯಿಯನ್ನೇ ಮತಾಂತರಗೊಳಿಸಲಾಗಿದ್ದು, ಕುಟುಂಬದ ಸದಸ್ಯರಲ್ಲಿ ಕಳವಳವುಂಟಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ಸಾವಿರ ಜನರನ್ನು ಮತಾಂತರಗೊಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ, ದಲಿತ, ಹಿಂದುಳಿದ ಹಾಗೂ ಮುಸ್ಲಿಂ ಸಮುದಾಯದ ಜನರೂ ಮತಾಂತರಗೊಂಡಿದ್ದಾರೆ,'' ಎಂದು ಶಾಸಕ ಗೂಳಿಹಟ್ಟಿ ಶೇಖರ್ ಕಳವಳ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ''ರಾಜ್ಯದಲ್ಲಿ ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ. ಆಮಿಶವೊಡ್ಡಿ ಮತಾಂತರ ಮಾಡುವುದು ಕಾನೂನಿಗೆ ವಿರುದ್ಧವಾಗಿದ್ದು, ಪೊಲೀಸರಿಗೆ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಸೂಕ್ತ ಕ್ರಮ ತೆಗೆದುಕೊಳ್ಳಲು ತಿಳಿಸಲಾಗಿದೆ,'' ಎಂದು ಹೇಳಿದರು.
''ಜನತೆಯ ಮುಗ್ಧತೆ, ಅಥವಾ ಇನ್ನಿತರ ಸನ್ನಿವೇಶಗಳನ್ನು ಉಪಯೋಗಿಸಿಕೊಂಡು ಯಾವುದೇ ಸಂಘಟನೆ ಅಥವಾ ಸಂಸ್ಥೆಗಳು ಮತಾಂತರ ಮಾಡುವುದರಿಂದ, ಸಮಾಜದಲ್ಲಿ, ಶಾಂತಿ ಕದಡುವ ಸಂಭವವಿದೆ. ಈ ಕುರಿತು ರಾಜ್ಯ ಸರಕಾರ ಸೂಕ್ತ ಕಾನೂನನ್ನು ಜಾರಿಗೆ ತರಲು ಚಿಂತನೆ ನಡೆದಿದೆ. ಆಮಿಷ ಒಡ್ಡಿ ಮುಗ್ಧ ಜನರನ್ನು ಮತಾಂತರ ಗೊಳಿಸುವ ವ್ಯವಸ್ಥಿತ ಜಾಲವೇ ಇದ್ದು, ಅದನ್ನು ಯಾವರೀತಿ ತಡೆಗಟ್ಟಲು ಸಾಧ್ಯ ಎಂಬುದರ ಬಗ್ಗೆ ಚರ್ಚೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಸೂಕ್ತ ಕಾನೂನನ್ನು ತರಲಾಗುವುದು,'' ಎಂದು ಸಚಿವರು ತಿಳಿಸಿದರು.
ಮಾಜಿ ಗೃಹ ಸಚಿವ ಕೆ ಜೆ ಜಾರ್ಜ್ ಮಧ್ಯ ಪ್ರವೇಶಿಸಿ ಮಾತನಾಡಿದರು. ಬಲವಂತವಾಗಿ ಮತಾಂತರಿಸುವ ಯಾವುದೇ ಪ್ರಯತ್ನಕ್ಕೆ ನಮ್ಮ ವಿರೋಧವಿದೆ. ಆದರೆ, ಯಾವುದೋ ಒಂದು ಸಂಘಟನೆ ತಪ್ಪು ಮಾಡಿದರೆ ಅದನ್ನು ಸಾರ್ವತ್ರಿಕವಾಗಿ ದೂಷಿಸುವುದು ಸರಿಯಲ್ಲ ಎಂದರು. ಇದೆ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ದೇವಾನಂದ್, ತಮ್ಮ ವಿಜಯಪುರ ಜಿಲ್ಲೆಯಲ್ಲಿಯೂ ಮತಾಂತರ ಹಾವಳಿ ಅವ್ಯಾಹತವಾಗಿದ್ದು, ಬಂಜಾರ ಸಮುದಾಯವನ್ನು ಗುರಿ ಮಾಡಿಕೊಂಡಿರುವ ಕೆಲವು ಸಂಘಟನೆಗಳು ಮಾಡುತ್ತಿರುವ ಕೃತ್ಯದಿಂದ ಶಾಂತಿ ಹಾಗೂ ಕುಟುಂಬದ ಸದಸ್ಯರ ನಡುವೆಯೇ ಸಮನ್ವಯ ಕದಡಿ ಹೋಗಿದೆ, ಸರಕಾರ ಈ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದರು.
Recommended Video