ಕೆಂಪಯ್ಯ ತಮ್ಮ ಹುದ್ದೆಯಲ್ಲಿ ಮುಂದುವರೆಯುವಂತಿಲ್ಲ!
ಬೆಂಗಳೂರು, ಮಾರ್ಚ್ 28 : ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಗೆ ಬಂದಿದೆ. ಆದ್ದರಿಂದ, ಕೆಂಪಯ್ಯ ಅವರು ಗೃಹ ಸಚಿವರ ಸಲಹೆಗಾರರಾಗಿ ಮುಂದುವರೆಯುವಂತಿಲ್ಲ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. 'ಮುಖ್ಯಮಂತ್ರಿ ಅಥವ ಇತರ ಸಚಿವರಿಗೆ ನೇಮಕಗೊಂಡಿದ್ದ ರಾಜಕೀಯ ಮತ್ತು ಇತರ ಸಲಹೆಗಾರರು ತಮ್ಮ ಹುದ್ದೆಯಲ್ಲಿ ಮುಂದುವರೆಯುವಂತಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೆಂಪಯ್ಯರನ್ನು ವಿವಾದಗಳು ಸದಾ ಕಾಡುವುದೇಕೆ?
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಕೆಂಪಯ್ಯ ಅವರು ಗೃಹ ಸಚಿವರ ಸಲಹೆಗಾರರಾಗಿ ಮುಂದುವರೆಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವು. ಇದರಿಂದ ಪೊಲೀಸ್ ಇಲಾಖೆ ಅಧಿಕಾರಿಗಳು ಹಸ್ತಕ್ಷೇಪವಿಲ್ಲದೇ ಕೆಲಸ ಮಾಡುವುದು ಅಸಾಧ್ಯ ಎಂದು ದೂರಿದ್ದವು.
ಬುಧವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಸಂಜೀವ್ ಕುಮಾರ್ ಅವರು, 'ರಾಜಕೀಯ ಮತ್ತು ಇತರ ಸಲಹೆಗಾರರು ಮುಂದುವರೆಯುವಂತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ' ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಮೇ 12ರಂದು ಮತದಾನ ನಡೆಯಲಿದ್ದು, ಮೇ 15ರಂದು ಫಲಿತಾಂಶ ಪ್ರಕಟವಾಗಲಿದೆ.
ನಕಲಿ ಜಾತಿ ಪ್ರಮಾಣ ಪತ್ರ ಆರೋಪ, ಕೆಂಪಯ್ಯಗೆ ಕ್ಲೀನ್ ಚಿಟ್
1981ನೇ ಬ್ಯಾಚ್ ಐಪಿಎಸ್ ಅಧಿಕಾರಿ ಕೆಂಪಯ್ಯ ಅವರು 2009ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ 2014ರಲ್ಲಿ ಅವರನ್ನು ಗೃಹ ಸಚಿವರ ಸಲಹೆಗಾರರಾಗಿ ನೇಮಿಸಲಾಗಿದೆ.