ಸಂಪುಟ ವಿಸ್ತರಣೆ, ಸಮನ್ವಯ ಸಮಿತಿ ಬಗ್ಗೆ ಶುಕ್ರವಾರ ತೀರ್ಮಾನ: ಸಿಎಂ
ಬೆಂಗಳೂರು, ಮೇ 31: ಸಿದ್ದರಾಮಯ್ಯ ಸರಕಾರದಲ್ಲಿ ಗೃಹ ಇಲಾಖೆಗೆ ಸಲಹೆಗಾರರಾಗಿ ನೇಮಕಗೊಂಡಿದ್ದವರು ಮಾಜಿ ಐಪಿಎಸ್ ಅಧಿಕಾರಿ ಕೆಂಪಯ್ಯ. ಕಾಂಗ್ರೆಸ್ ಸರಕಾರದಲ್ಲಿ ಸಿದ್ದರಾಮಯ್ಯ ಮತ್ತು ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೊರತುಪಡಿಸಿ ಅತೀ ಹೆಚ್ಚು ಟೀಕೆಗೆ, ಚರ್ಚೆಗೆ ಒಳಗಾದವರು ಕೆಂಪಯ್ಯ. ಸದ್ಯ ಅವರ ಸಲಹೆಗೆ ತಿಲಾಂಜಲಿ ನೀಡಲು ಸಿಎಂ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸುವಂತೆ ಕಾಣಿಸುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಅವರು ಇಂದು ಹೇಳಿಕೆ ನೀಡಿದ್ದಾರೆ.
ಗೃಹ ಇಲಾಖೆಗೆ ಸಲಹೆಗಾರರ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಇಂದು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಸಂಪುಟ : ಯಾವ ಖಾತೆ ಯಾರಿಗೆ?
"ಜೊತೆಗೆ ಸಂಪುಟ ವಿಸ್ತರಣೆ ಬಗ್ಗೆ ನಾಳೆ (ಶುಕ್ರವಾರ) ಸಂಜೆ ಮೊದಲು ಜಂಟಿ ಸುದ್ದಿಗೋಷ್ಠಿ ನಡೆಸಲಾಗುವುದು. ಸುದ್ದಿಗೋಷ್ಠಿಯಲ್ಲಿ ನಡೆಸಿ ಸಂಪುಟ ವಿಸ್ತರಣೆ ಮತ್ತು ಸಮನ್ವಯ ಸಮಿತಿ ಸೇರಿದಂತೆ ಎಲ್ಲಾ ವಿಷಯಗಳ ಮಾಹಿತಿ ನೀಡುತ್ತೇವೆ," ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈಗಾಗಲೇ ಸಂಪುಟ ವಿಸ್ತರಣೆ ಬಗ್ಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮತ್ತು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಚರ್ಚೆ ಮಾಡಿದ್ದಾರೆ. ನಾಳೆ ಬೆಂಗಳೂರಿಗೆ ಬಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡರ ಜೊತೆಗೆ ಅವರು ಚರ್ಚೆ ನಡೆಸಲಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಇದೆಂಥ ಸಮ್ಮಿಶ್ರ ಸರ್ಕಾರ? ಕರ್ನಾಟಕ ರಾಜಕೀಯ ಕಲಸುಮೇಲೋಗರ
ಇದೇ ಸಂದರ್ಭದಲ್ಲಿ ಸಚಿವರ ಪ್ರಮಾಣ ವಚನ ಯಾವಾಗ ಎಂಬುದನ್ನೂ ಘೋಷಿಸುತ್ತೇವೆ ಎಂಬುದಾಗಿ ಎಚ್ಡಿಕೆ ತಿಳಿಸಿದ್ದಾರೆ. ಇದೇ ವೇಳೆ ಅವರು ನಮ್ಮ ಅಧಿಕಾರಿಗಳು ದಕ್ಷವಾಗಿ ಕಲಸ ಮಾಡುತ್ತಾರೆ. ಆಡಳಿತ ಯಂತ್ರವನ್ನು ಇನ್ನಷ್ಟು ವೇಗಗೊಳಿಸಬೇಕಿದೆ ಎಂದಿದ್ದಾರೆ.