ಕೂಡಲಸಂಗಮದಲ್ಲಿ ಸಂಕ್ರಾಂತಿ ಪುಣ್ಯಸ್ನಾನ ನಿಷೇಧಿಸಿ ಸರ್ಕಾರದ ಆದೇಶ!
ಬೆಂಗಳೂರು, ಜ. 11: ಕೊರೊನಾ ವೈರಸ್ ಸೃಷ್ಟಿಸಿರುವ ಆತಂಕ ಒಂದೆರಡಲ್ಲ. ಕೋವಿಡ್ನಿಂದಾಗಿ ಕಳೆದ ವರ್ಷದ ಬಹುತೇಕ ಹಬ್ಬಗಳನ್ನು ಸಾರ್ವಜನಿಕವಾಗಿ ಆಚರಿಸಲು ಸರ್ಕಾರ ನಿಷೇಧ ಹೇರಿತ್ತು. ಇದೀಗ ಸಂಕ್ರಾಂತಿ ಆಚರಣೆಗೂ ಕೋವಿಡ್ ಅಡ್ಡವಾಗಿದೆ. ಪ್ರತಿವರ್ಷ ಮಕರ ಸಂಕ್ರಾಂತಿಯಂದು ಲಕ್ಷಾಂತರ ಭಕ್ತರು ಕೂಡಲಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದರು. ಆದರೆ ಈ ಬಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮದಲ್ಲಿ ಪುಣ್ಯಸ್ನಾನವನ್ನು ನಿಷೇಧಿಸಲಾಗಿದೆ.
ಈ ಕುರಿತು ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ, ಪ್ರತಿವರ್ಷದಂತೆ ಈ ವರ್ಷವೂ ಕೂಡಲ ಸಂಗಮ ಸುಕ್ಷೇತ್ರಕ್ಕೆ ಮಕರ ಸಂಕ್ರಾಂತಿ ನಿಮಿತ್ತ, ಜನವರಿ 14ರಂದು ಪುಣ್ಯಸ್ನಾನಕ್ಕಾಗಿ ಜೊತೆಗೆ ಶ್ರೀ ಸಂಗಮೇಶ್ವರ ಹಾಗೂ ಶ್ರೀ ಬಸವೇಶ್ವರ ದರ್ಶನಕ್ಕಾಗಿ ರಾಜ್ಯದ ಹಲವು ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಆದರೆ ಈ ವರ್ಷ ಕೋವಿಡ್ 19 ಸಾಂಕ್ರಾಮಿಕ ರೋಗ ತಡೆಗಟ್ಟುವ ಸಲುವಾಗಿ ಸಂಕ್ರಾಂತಿಯಂದು ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದ ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡುವುದನ್ನು ನಿಷೇಧಿಲಾಗಿದೆ ಎಂದು ಕೂಡಲ ಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತರು ಆದೇಶ ಮಾಡಿದ್ದಾರೆ.
ಪ್ರತಿವರ್ಷ ಸಂಕ್ರಾಂತಿಯಂದು ಲಕ್ಷಾಂತರ ಭಕ್ತರು ಕೂಡಲಸಂಗಮದಲ್ಲಿ ಸ್ನಾನ ಮಾಡಿ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಇಷ್ಟಲಿಂಗ ಪೂಜೆ ಮಾಡಿಕೊಳ್ಳುವುದು ಸಂಪ್ರದಾಯ. ಆದರೆ ಈ ಬಾರಿ ಪುಣ್ಯಸ್ನಾನವನ್ನು ನಿಷೇಧಿಸಲಾಗಿದೆ ಎಂದು ಅಭಿವೃದ್ಧಿ ಮಂಡಳಿ ಆದೇಶ ಮಾಡಿದೆ.