ಬಾಂಬ್ ಬೆದರಿಕೆ: ಇಂದು ಆದಿತ್ಯ ರಾವ್- ಅಂದು ಮಟ್ಟಣ್ಣನವರ್!
ಬೆಂಗಳೂರು, ಜನವರಿ 22 : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ. ಕರ್ನಾಟಕದಲ್ಲಿ ಕಳೆದ ಎರಡು ದಿನಗಳಿಂದ ಬಹು ಚರ್ಚಿತವಾಗಿದ್ದ ವಿಚಾರ ಆರೋಪಿ ಶರಣಾಗತಿಯೊಂದಿಗೆ ಮತ್ತೊಂದು ಆಯಾಯಮಕ್ಕೆ ತಿರುಗಿಕೊಂಡಿದೆ.
ಕನ್ನಡದ ಸುದ್ದಿ ಮಾಧ್ಯಮಗಳ ತೆರೆಯನ್ನು ಆವರಿಸಿಕೊಂಡಿದ್ದ ಬಾಂಬ್ ಇಟ್ಟಿದ್ದು ಯಾರು?, ಸಿಸಿಟಿವಿ ದೃಶ್ಯಾವಳಿಗಳು, ಪ್ರಕರಣದ ಮರು ಸೃಷ್ಟಿ, ರಿಯಾಲಿಟಿ ಚೆಕ್, ನಮ್ಮಲ್ಲೇ ಮೊದಲು, ನಮ್ಮನ್ನು ಉಳಿದ ಚಾನೆಲ್ ಫಾಲೋ ಮಾಡ್ತಾರೆ, ಸೂಪರ್ exclusive ಎಂಬ ಎಲ್ಲಾ ಸಂಪಾದಕೀಯ ಆಯಾಮಾಗಳಿಗೆ ಬುಧವಾರ ತೆರೆ ಬಿದ್ದಿದೆ.
ಬಾಂಬ್ ಇಟ್ಟ ಪ್ರಕರಣ : ಗಿರೀಶ್ ಮಟ್ಟಣ್ಣನವರ್ ಖುಲಾಸೆ
ಸದ್ಯದ ಮಾಹಿತಿ ಪ್ರಕಾರ ಬಾಂಬ್ ಇಟ್ಟ ಆರೋಪಿ ಮಣಿಪಾಲ ಮೂಲದ ಆದಿತ್ಯರಾವ್. ಡಿಜಿ&ಐಜಿಪಿ ಮುಂದೆ ಶರಣಾದ ಆತ ಪೊಲೀಸರ ವಶದಲ್ಲಿದ್ದಾನೆ. ಈತ ಬಾಂಬ್ ತಯಾರಿಸಿದ್ದು ಹೇಗೆ, ಇಟ್ಟಿದ್ದು ಏಕೆ? ಎಂಬುದು ಇನ್ನೂ ಹೊರಬೀಳಬೇಕಿದೆ ಮತ್ತು ಅದಷ್ಟೆ ಈಗ ಪ್ರಕರಣದಲ್ಲಿ ಉಳಿದಿರುವ ಕುತೂಹಲಕಾರಿ ವಿಚಾರ.
ಆದಿತ್ಯರಾವ್ ಶರಣು; ಮಂಗಳೂರು ಪೊಲೀಸರು ಹೇಳಿದ್ದೇನು?
ಕರ್ನಾಟಕದ ಮಟ್ಟಿಗೆ ಇಂತಹ ಬಾಂಬ್ ಬೆದರಿಕೆಗಳು, ಬಾಂಬ್ ಸ್ಫೋಟ ಪ್ರಕರಣಗಳು ಹೊಸ ವಿಚಾರಗಳೇನಲ್ಲ. ಆಗಾಗ ಅನುಮಾಸ್ಪದ ಬ್ಯಾಗ್ ಪತ್ತೆ, ಹುಸಿ ಬಾಂಬ್ ಬೆದರಿಕೆ ಕರೆ, ಕುಡಿದ ಮತ್ತಿನಲ್ಲಿ ಬೆದರಿಕೆ ಕರೆಗಳು ಹೀಗೆ ಆಗಾಗ ಬಾಂಬ್ ಸುತ್ತ ಆತಂಕ ಮೂಡಿಸುವ ಸುದ್ದಿಗಳು ಮುಖ್ಯವಾಹಿನಿಯಲ್ಲಿ ಸದ್ದು ಮಾಡಿಕೊಂಡು ಬಂದಿವೆ. ಕರ್ನಾಟಕದ ಆಡಳಿತ ಕೇಂದ್ರ ವಿಧಾನಸೌಧಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿತ್ತು ಎಂಬುದನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಬೇಕು.
2010ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಸ್ಫೋಟ, 2013ರಲ್ಲಿ ಮಲ್ಲೇಶ್ವರದ ಬಿಜೆಪಿ ಕಚೇರಿಯ ಬಳಿ ನಡೆದ ಸ್ಫೋಟ, 2014ರ ಡಿಸೆಂಬರ್ನಲ್ಲಿ ಬೆಂಗಳೂರಿನ ಚರ್ಚ್ ಸ್ಟ್ರೀಟ್ನಲ್ಲಿ ನಡೆದ ಸ್ಫೋಟ, 2016ರಲ್ಲಿ ಮೈಸೂರು ನ್ಯಾಯಾಲಯದ ಶೌಚಾಲಯದಲ್ಲಿ ನಡೆದ ಸ್ಫೋಟ ಕರ್ನಾಟಕದಲ್ಲಿ ಹೆಚ್ಚು ಆತಂಕ ಸೃಷ್ಟಿಸಿದ ಪ್ರಕರಣಗಳಾಗಿವೆ.
ಆರೋಪಿ ಆದಿತ್ಯ ಈ ಮುನ್ನ ಎಲ್ಲೆಲ್ಲಿ ಕೆಲಸ ಮಾಡಿದ್ದ?
ಮೈಸೂರಿನ ಅಂಚೆ ಕಚೇರಿ, ಮಂಗಳೂರು ಇನ್ಫೋಸಿಸ್ ಕಚೇರಿ, ಬಸ್ ನಿಲ್ದಾಣ, ವಿಮಾನದಲ್ಲಿ ಬಾಂಬ್ ಇದೆ ಮುಂತಾದ ಪ್ರಕರಣಗಳು ರಾಜ್ಯದಲ್ಲಿ ಹಲವಾರು ನಡೆದಿವೆ. ಈ ಸುದ್ದಿಗಳು ಬಂದಾಗ ಆ ಕ್ಷಣದಲ್ಲಿ ಆತಂಕ ಉಂಟಾಗುತ್ತದೆ. ಬಳಿಕ ಪರಿಸ್ಥಿತಿ ತಿಳಿಗೊಳ್ಳುತ್ತ ಬಂದಿದೆ.
ಎಲ್ಲಾ ಹುಸಿ ಬಾಂಬ್ ಕರೆಗಳ ಹಿಂದೆ ಯಾವುದೋ ಒಂದು ಉದ್ದೇಶವಿರುತ್ತದೆ. ಅದರಲ್ಲಿ ಜನರನ್ನು ಕೊಲ್ಲುವ ಉದ್ದೇಶ ಇಲ್ಲದಿದ್ದರೂ ಆತಂಕ ಸೃಷ್ಟಿಸುವ ಪ್ರಯತ್ನ ನಡೆದಿರುತ್ತದೆ ಎಂಬುದು ಹಲವಾರು ಪ್ರಕರಣಗಳಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬೇಕಿರುವುದು ಗಿರೀಶ್ ಮಟ್ಟಣ್ಣನವರ್ ಪ್ರಕರಣ.
ಕನ್ನಡದಲ್ಲಿ ಸುದ್ದಿ ಮಾಧ್ಯಮಗಳ ಭರಾಟೆ ಇಷ್ಟು ಇಲ್ಲದ ದಿನಗಳಲ್ಲಿ ಬಾಂಬ್ ಕರೆಯೊಂದು ಸಂಚಲನ ಉಂಟು ಮಾಡಿತ್ತು. ಬಳಿಕ ಅದು ಹುಸಿ ಬಾಂಬ್ ಕರೆ ಎಂಬುದು ನಂತರ ಸಾಬೀತಾಗಿತ್ತು. ಈ ಮೂಲಕ ಗಿರೀಶ್ ಮಟ್ಟಣ್ಣನವರ್ ಹೆಸರು ಕರ್ನಾಟಕದ ಜನರಿಗೆ ಚಿರಪರಿಚಿತವಾಯಿತು. ಪೊಲೀಸ್ ಅಧಿಕಾರಿಯಾಗಿದ್ದ ಗಿರೀಶ್ ಮಟ್ಟಣ್ಣನವರ್ ಶಾಸಕರ ಭವನದಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿ ರಾಜ್ಯದ ಜನರು ಒಮ್ಮೆ ಅವರತ್ತ ತಿರುಗಿ ನೋಡುವಂತೆ ಮಾಡಿದ್ದರು. ಸದ್ಯ ಅವರೀಗ ಬಿಜೆಪಿ ಸೇರಿ ಸಕ್ರಿಯ ರಾಜಕಾರಣಿಯಾಗಿದ್ದಾರೆ.
ಅದು 2003ರ ನವೆಂಬರ್ 1. ಬೆಂಗಳೂರಿನ ವಿಧಾನಸೌಧ ಪಕ್ಕದಲ್ಲಿರುವ ಶಾಸಕರ ಭವನದದ 5 ಮಹಡಿಯಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಕರೆ ಬಂದ ಹಿನ್ನಲೆಯಲ್ಲಿ ತಪಾಸಣೆ ನಡೆಸಲಾಗಿತ್ತು. ನಂತರ ಹುಸಿ ಬಾಂಬ್ ಬೆದರಿಕೆ ಎಂಬುದು ತಿಳಿಯಿತು. ಈ ಸಂಬಂಧ ತನಿಖೆ ಕೈಗೊಂಡಾಗ ಗಿರೀಶ್ ಮಟ್ಟಣ್ಣನವರ್ ಹಾಗೂ ಇತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.
ಭ್ರಷ್ಟ ಅಧಿಕಾರಿಗಳನ್ನು ಬೆದರಿಸಲು ಅಂದು ಪೊಲೀಸ್ ಅಧಿಕಾರಿಯಾಗಿದ್ದ ಗಿರೀಶ್ ಮಟ್ಟಣ್ಣನವರ್ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದರು. ಈ ಪ್ರಕರಣದ ಸುಧೀರ್ಘ ವಿಚಾರಣೆ ನಡೆದು 2016ರಲ್ಲಿ ಎಲ್ಲರನ್ನೂ ಖುಲಾಸೆಗೊಳಿಸಲಾಗಿದೆ. ಇದೀಗ ಆದಿತ್ಯ ರಾವ್ ಹೆಸರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಪ್ರಕರಣದಲ್ಲಿ ಕೇಳಿ ಬಂದಿದೆ. ಈ ಪ್ರಕರಣದ ತಾರ್ಕಿಕ ಅಂತ್ಯ ಹೇಗಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.