ಡ್ರಗ್ಸ್ ಕುರಿತು ಹೇಳಿಕೆ; ಇಂದ್ರಜಿತ್ ಲಂಕೇಶ್ ವಿಚಾರಣೆ ಮಾಡ್ತೇವೆ
ಬೆಂಗಳೂರು, ಆ. 31: ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಕುರಿತು ಇಂದ್ರಜಿತ್ ಲಂಕೇಶ್ ಅವರ ಹೇಳಿಕೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯ ಹಾಗೂ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾ ಮಟ್ಟ ಹಾಕುವ ನಿಟ್ಟಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಕರೆದಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಹೇಳಿಕೆ ಕೊಟ್ಟಿದ್ದಾರೆ.
Recommended Video
ಇವತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಜೊತೆ ಸಭೆ ನಡೆಸುತ್ತಿದ್ದೇನೆ. ಸಭೆಯಲ್ಲಿ ಡ್ರಗ್ಸ್ ವಿಚಾರವೂ ಚರ್ಚೆ ಆಗಲಿದೆ. ಡ್ರಗ್ಸ್ ಹಾವಳಿಯನ್ನು ಯಾವ ರೀತಿ ನಿಯಂತ್ರಣ ಮಾಡಬಹುದು ಎಂಬ ಬಗ್ಗೆ ಚರ್ಚೆ ಆಗಲಿದೆ. ಇನ್ನಷ್ಟು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡುವ ಬಗ್ಗೆಯೂ ಚರ್ಚೆ ಆಗಲಿದೆ. ಜೊತೆಗೆ ಈ ಕುರಿತು ಮಾತನಾಡಿದ್ದ ಇಂದ್ರಜಿತ್ ಲಂಕೇಶ್ ಅವರನ್ನು ವಿಚಾರಣೆಗೆ ಕರೆದಿದ್ದೇವೆ. ಅವರಿಂದಲೂ ಮಾಹಿತಿ ಕಲೆ ಹಾಕುತ್ತೇವೆ. ನಮ್ಮ ಇಲಾಖೆ ಬಳಿಯೂ ಕೆಲ ಮಾಹಿತಿ ಇದೆ. ಚರ್ಚೆ ಮಾಡಿ, ಒಂದು ನಿರ್ದಿಷ್ಟ ಸೂಚನೆಯನ್ನು ಸಿಸಿಬಿ ಅಧಿಕಾರಿಗಳಿಗೆ ನೀಡುತ್ತೇವೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕಳೆದ ಗುರುವಾರ ಎನ್ಸಿಬಿ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಆಗ ಸೆರೆಸಿಕ್ಕವರಿಂದ ಚಿತ್ರರಂಗದ ನಟ, ನಟಿಯರು, ಸಂಗೀತ ನಿರ್ದೇಶಕರು ಸೇರಿದಂತೆ ಅನೇಕರಿಗೆ ಡ್ರಗ್ಸ್ ಪೂರೈಸುತ್ತಿದ್ದ ವಿಚಾರವನ್ನು ಬಾಯಿ ಬಿಟ್ಟಿದ್ದರು. ಮಕ್ಕಳ ಆಟಿಕೆ ಸೇರಿದಂತೆ ಹಲವು ವಸ್ತುಗಳನ್ನು ಡ್ರಗ್ಸ್ ಕಳ್ಳ ಸಾಗಾಣಿಕೆಗೆ ಬಳಸುವುದಾಗಿಯೂ ಮಾಹಿತಿ ಕೊಟ್ಟಿದ್ದರು.
ಅದಾದ ಬಳಿಕ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಡ್ರಗ್ಸ್ ವಿಚಾರವಾಗಿ ಸ್ಪೋಟಕ ಹೇಳಿಕೆಯನ್ನು ಕೊಟ್ಟಿದ್ದರು. 'ಬಾಲಿವುಡ್ನಲ್ಲಿ ಡ್ರಗ್ಸ್ ಮಾಫಿಯಾ ಇರುವ ಬಗ್ಗೆ ಮಾಹಿತಿ ಕೇಳಿದ್ದೇವೆ. ಕರ್ನಾಟಕದಲ್ಲಿ ನನಗೆ ಗೊತ್ತಿರುವಂತಹ ನಟರು, ಸ್ಟಾರ್ ನಟರು ಯಾರು ಕೂಡ ಇಂಥದ್ದನ್ನು ಮಾಡಲ್ಲ. ಅವರು ಇಂಥದ್ದನ್ನು ಮಾಡಿದ್ದಾರೆ ಎಂಬ ಅನುಭವ ನನ್ನ ಗಮನಕ್ಕೆ ಬಂದಿಲ್ಲ. ಆದರೆ, ಯುವ ನಟ-ನಟಿಯರು, ಬಹುಬೇಗ ಪ್ರಚಾರ ಗಳಿಸಿದವರು ಈ ಥರದ ರೇವ್ ಪಾರ್ಟಿಗಳಲ್ಲಿ ಸೇರುತ್ತಾರೆ ಎಂದು ನಾನು ಕೂಡ ಕೇಳಿದ್ದೇನೆ. ನನಗೂ ಹಲವಾರು ಘಟನೆಗಳು ಗೊತ್ತಿವೆ. ನನಗೆ ಭದ್ರತೆ ನೀಡಿದರೆ, ಈ ಬಗ್ಗೆ ಹೇಳಬಹುದು. ಅದರಲ್ಲೂ ನಟಿಯರು ಹೆಚ್ಚಾಗಿ ಇದರಲ್ಲಿ ಇದ್ದಾರೆ' ಎಂದು ಸ್ಪೋಟಕ ಮಾಹಿತಿಯನ್ನು ಇಂದ್ರಜಿತ್ ಲಂಕೇಶ್ ಕೊಟ್ಟಿದ್ದರು.