ತೆರಿಗೆ ವಿನಾಯಿತಿಗಾಗಿ ಎಚ್.ಕೆ.ಪಾಟೀಲರಿಂದ ನಿರ್ಮಲಾ ಸೀತಾರಾಮನ್ ಗೆ ಪತ್ರ
ಬೆಂಗಳೂರು, ಜನವರಿ 31: ಸಹಕಾರಿ ಬ್ಯಾಂಕ್ಗಳಿಗೆ ತೆರಿಗೆ ವಿನಾಯಿತಿಗಾಗಿ ಎಚ್.ಕೆ.ಪಾಟೀಲ್ ಅವರು ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.
ಸಹಕಾರಿ ಬ್ಯಾಂಕ್ ಮಾತ್ರವಲ್ಲದೆ, ಸಣ್ಣ ಉದ್ದಿಮೆದಾರರಿಗೂ ತೆರಿಗೆ ವಿನಾಯಿತಿ ನೀಡಿರೆಂದು ಎಚ್.ಕೆ.ಪಾಟೀಲ್ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಮನವಿ ಮಾಡಿದ್ದಾರೆ.
ದೇಶದಲ್ಲಿ ಒಟ್ಟು 1550 ನಗರ ಸಹಕಾರಿ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿವೆ, ಕರ್ನಾಟಕದಲ್ಲಿ 264 ನಗರ ಸಹಕಾರಿ ಬ್ಯಾಂಕುಗಳಿವೆ. ಇವುಗಳು ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಸಹಾಯ ಮಾಡುತ್ತಿವೆ. ಮೊದಲಿಗೆ ಸಹಕಾರಿ ಬ್ಯಾಂಕುಗಳಿಗೆ ತೆರಿಗೆ ವಿನಾಯಿತಿ ಇತ್ತು ಆದರೆ ಸೆಕ್ಷನ್ 80(p)(4) ಬಂದಾಗಿನಿಂದಲೂ 30% ತೆರಿಗೆ ಪಾವತಿಸುತ್ತಿವೆ ಎಂದು ಪಾಟೀಲರು ವಿಷಯವನ್ನು ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತಂದಿದ್ದಾರೆ.
ತೆರಿಗೆ ಜೊತೆಗೆ ಸರ್ಚಾರ್ಜ್ ಸಹ ಹಾಕಲಾಗುತ್ತಿದೆ. ಸಹಕಾರಿ ಬ್ಯಾಂಕ್ಗಳು ಸಹ ವಾಣಿಜ್ಯ ಬ್ಯಾಂಕ್ಗಳ ಮಾದರಿಯಲ್ಲಿಯೇ ತೆರಿಗೆ ಪಾವತಿಸುವಂತಾಗಿದೆ. ವಾಣಿಜ್ಯ ಬ್ಯಾಂಕುಗಳಿಗಿಂತಲೂ ಹೆಚ್ಚಿನ ತೆರಿಗೆಯನ್ನು ಸಹಕಾರಿ ಬ್ಯಾಂಕುಗಳು ಪಾವತಿಸುತ್ತಿವೆ ಎಂದು ಅಂಕಿ-ಅಂಶವನ್ನು ಪಾಟೀಲರು ಪತ್ರದಲ್ಲಿ ನೀಡಿದ್ದಾರೆ.
ಇನ್ನೂ ಹಲವು ಅಂಕಿ-ಅಂಶಗಳನ್ನು ಪತ್ರದಲ್ಲಿ ನೀಡಿರುವ ಮಾಜಿ ಸಚಿವರು, ಸಹಕಾರಿ ಬ್ಯಾಂಕುಗಳಿಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ನಾಳೆ ಬಜೆಟ್ ಇದ್ದು ಪಾಟೀಲರು ಈ ಪತ್ರವನ್ನು ಜನವರಿ 10 ರಂದೇ ಹಣಕಾಸು ಸಚಿವರಿಗೆ ಬರೆದಿದ್ದಾರೆ.