ದೆಹಲಿ ಭೇಟಿ ರದ್ದುಗೊಳಿಸಲು ಯಡಿಯೂರಪ್ಪಗೆ ಎಚ್.ಕೆ.ಪಾಟೀಲ್ ಪತ್ರ
ಬೆಂಗಳೂರು, ಆಗಸ್ಟ್ 04 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ದೆಹಲಿ ಪ್ರವಾಸವನ್ನು ರದ್ದುಗೊಳಿಸಿ ಮಳೆಯಿಂದ ಹಾನಿಗೊಳಗಾಗಿರುವ ಉತ್ತರ ಕರ್ನಾಟಕ ಭಾಗದ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ಮಾಜಿ ಸಚಿವ ಎಚ್. ಕೆ. ಪಾಟೀಲ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಮತ್ತು ಗದಗ ಕ್ಷೇತ್ರದ ಶಾಸಕ ಎಚ್. ಕೆ. ಪಾಟೀಲ ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಈ ಕುರಿತು ಪತ್ರ ಬರೆದಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿಯವರನ್ನು ಈ ಪ್ರದೇಶಗಳಿಗೆ ಭೇಟಿ ನೀಡುವಂತೆ ಒತ್ತಾಯಿಸಿ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ವಡೋದರಾ, ಅಜ್ಮೇರ್, ಲೂದಿಯಾನ ಭಾಗಶಃ ಜಲಾವೃತ
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವಾರ ಕಳೆದಿದೆ. ಆದರೆ, ಸಚಿವ ಸಂಪುಟ ವಿಸ್ತರಣೆ ಆಗಿಲ್ಲ. ಈ ಬಗ್ಗೆ ಚರ್ಚೆ ನಡೆಸಲು ಯಡಿಯೂರಪ್ಪ ಮೂರು ದಿನಗಳ ದೆಹಲಿ ಭೇಟಿ ಕೈಗೊಂಡಿದ್ದಾರೆ. ಇದಕ್ಕಾಗಿ ಎಚ್. ಕೆ. ಪಾಟೀಲರು ಈ ಪತ್ರವನ್ನು ಬರೆದಿದ್ದಾರೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆ: ರಾಜ್ಯದಲ್ಲಿ ಪ್ರವಾಹ ಭೀತಿ
ಬಿಜೆಪಿ ಸರ್ಕಾರ ರಚನೆಗೊಂಡು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಲಾಗಿದೆ. ಅಧಿಕಾರಿಗಳ ವರ್ಗಾವಣೆ ಆಗುತ್ತಿದೆ. ಆದರೆ, ಸಚಿವ ಸಂಪುಟ ವಿಸ್ತರಣೆ ಆಗಿಲ್ಲ. ಈ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಟ್ವೀಟ್ ಮಾಡಿ ಸರ್ಕಾರದ ಗಮನ ಸೆಳೆದಿದ್ದರು...
ವಿಡಿಯೋ: ಗುಜರಾತ್ ಪ್ರವಾಹ, ಬೀದಿಯಲ್ಲಿ ಈಜಾಡಿದ ಮೊಸಳೆ!
ಪತ್ರದಲ್ಲಿ ಏನಿದೆ?
ಕೃಷ್ಣಾ ಕೊಳ್ಳದ ಪ್ರದೇಶದಲ್ಲಿ ವಿಶೇಷವಾಗಿ ಮಹಾರಾಷ್ಟ್ರ ಭಾಗದಲ್ಲಿ ಹಾಗೂ ಮುಂಬೈ ಕರ್ನಾಟಕದ ಬೆಳಗಾವಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿರುವುದರಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ. ಹಿಪ್ಪರಗಿ, ಆಲಮಟ್ಟಿ, ನಾರಾಯಣಪುರ, ಗೂಗಲ್ ಜಲಾಶಯಗಳು ತುಂಬಿ ತುಳುಕುತ್ತಿದ್ದು, ಜುರಾಲಾ ಹಿನ್ನೀರಿನಿಂದಲೂ ಸಹ ಕರ್ನಾಟಕದ ಗಡಿಭಾಗದ ಬಹುಪಾಲು ಪ್ರದೇಶ ಗಂಭೀರವಾದ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ಇಂದು ಕೃಷ್ಣಾ ನದಿಗೆ 2.3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಕಳೆದ ಒಂದು ವಾರದಿಂದ 1 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ವಿವಿಧ ಜಲಾಶಯಗಳಿಂದ ಬಿಡುಗಡೆಯಾಗಿ ಕಳವಳಕಾರಿಯಾದ ಪ್ರವಾಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ.
37 ಗ್ರಾಮಗಳಲ್ಲಿ ಸಂಕಷ್ಟ
ಕೃಷ್ಣಾ ಹಾಗೂ ಉಪ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ನದಿ ತೀರದ ಹಲವು ವಸತಿ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕಾಗುತ್ತದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪ ವಿಭಾಗದ 37 ಗ್ರಾಮಗಳು ಪ್ರವಾಹದಿಂದಾಗಿ ತೀವ್ರವಾಗಿ ಬಾಧಿತವಾಗಿದ್ದು, 39 ಗ್ರಾಮಗಳು ಭಾಗಶಃ ಬಾಧಿತವಾಗಿದೆ. ಗ್ರಾಮಗಳಲ್ಲಿ ಗಂಭೀರವಾದ ಪರಿಸ್ಥಿತಿ ಇದ್ದು ಪರಿಹಾರ ಕಾರ್ಯಕ್ಕೆ ಸಮರೋಪಾದಿಯಲ್ಲಿ ಸನ್ನದ್ದವಾಗಿರುವ ಅವಶ್ಯಕತೆ ಇದೆ.
ರಸ್ತೆ ಸಂಪರ್ಕ ಕಡಿತಗೊಂಡಿದೆ
ಘಟಪ್ರಭಾ ನದಿ ತೀರದ ಢವಳೇಶ್ವರ, ನಂದಗಾಂವ್ ಹಾಗೂ ಮಿರ್ಜಿ ಸೇತುವೆಗಳ ಮೇಲೆ ಸಂಚಾರ ಸ್ಥಗಿತಗೊಂಡಿದೆ. ಜಮಖಂಡಿ ತಾಲೂಕಿನ ಮುತ್ತೂರು ಕಂಕನವಾಡಿ ಗ್ರಾಮಗಳು ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದ್ದು ಮುತ್ತೂರು-ತುಬಚಿ ಸಂಪರ್ಕ ರಸ್ತೆ ಮುಳುಗಿರುವುದಿಂದ ಗ್ರಾಮಸ್ಥರ ಸಂಚಾರಕ್ಕೆ ವಿಶೇಷ ದೋಣಿಗಳನ್ನು ವ್ಯವಸ್ಥೆ ಮಾಡಬೇಕಿದೆ.
ದೆಹಲಿ ಪ್ರವಾಸವನ್ನು ರದ್ದುಗೊಳಿಸಿ
ಗಂಭೀರ ಪರಿಸ್ಥಿತಿ ಇರುವುದರಿಂದ ತುರ್ತು ಪರಿಹಾರ ಕಾರ್ಯಗಳಿಗೆ ಸನ್ನದ್ಧವಾಗಿರಬೇಕಾದ ನಮ್ಮ ಆಡಳಿತ ಯಂತ್ರ ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ಎದುರಿಸುತ್ತಿಲ್ಲ. ಎನ್. ಡಿ. ಆರ್. ಎಫ್ ತಂಡ ಮತ್ತು ದೋಣಿ ರಕ್ಷಣಾ ತಂಡಗಳನ್ನು ಸನ್ನದ್ಧವಾಗಿಡಬೇಕಿದೆ. ಈ ಪರಿಸ್ಥಿತಿಯ ಹಿನ್ನಲೆಯಲ್ಲಿ ತಾವು ನವದೆಹಲಿಗೆ ಕೈಗೊಳ್ಳುತ್ತಿರುವ ಪ್ರವಾಸವನ್ನು ರದ್ದುಗೊಳಿಸಿ ಆ ಪ್ರದೇಶಗಳಿಗೆ ಭೇಟಿ ನೀಡಿ ಈ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರನ್ನು ಈ ಪ್ರದೇಶಗಳಿಗೆ ಭೇಟಿ ನೀಡುವಂತೆ ಒತ್ತಾಯಿಸಿ.