ದೇವಸ್ಥಾನಗಳಿಗೆ ಆಡಳಿತಾಧಿಕಾರಿ ನೇಮಕ ಆದೇಶ ಹಿಂದಕ್ಕೆ, ಸಂಘದಿಂದ ಸ್ವಾಗತ
''ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ'' ಇದರ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ 45 ಕ್ಕೂ ಹೆಚ್ಚು ದೇವಸ್ಥಾನಗಳ ವಿಶ್ವಸ್ತರು ಮತ್ತು ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ದೇವಸ್ಥಾನಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ನಿರ್ಧಾರವು ಶಾಶ್ವತವಾಗಿ ರದ್ದಾಗುವವರೆಗೂ ಹೋರಾಟ ಮುಂದುವರಿಸಲು ನಿರ್ಧರಿಸಲಾಯಿತು.
ಈ ಪತ್ರಿಕಾಗೋಷ್ಠಿಯಿಂದ ರಾಜ್ಯವ್ಯಾಪಿ ಜನಾಂದೋಲನ ಮಾಡುವ ಎಚ್ಚರಿಕೆ ನೀಡಲಾಗಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ಮುಜರಾಯಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರು, ಈ ವಿಷಯದತ್ತ ಶೀಘ್ರವಾಗಿ ಗಮನ ಹರಿಸಿ ಈ ಆದೇಶಕ್ಕೆ ಇದೀಗ ತಡೆ ನೀಡಿದ್ದಾರೆ. ಇದು ಸಂಘಟಿತ ಹಿಂದೂಶಕ್ತಿಯ ವಿಜಯ ಎಂದು 'ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ'ದ ವಕ್ತಾರರಾದ ಗುರುಪ್ರಸಾದ ಗೌಡ ಹೇಳಿದ್ದಾರೆ.
ಧಾರ್ಮಿಕ ದತ್ತಿ ಆಯುಕ್ತರು ಬೆಳಗಾವಿ ಜಿಲ್ಲೆಯ 16 ದೇವಸ್ಥಾನಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದರು; ಅದರ ವಿರುದ್ಧ ಬೆಳಗಾವಿಯಲ್ಲಿ ದೇವಸ್ಥಾನದ ವಿಶ್ವಸ್ತರು ಮತ್ತು ಹಿಂದೂ ಸಮಾಜದಲ್ಲಿ ತೀವ್ರ ಅಸಮಾಧಾನವಿತ್ತು. ಈ ನಿರ್ಧಾರದ ವಿರುದ್ಧ 45 ವಿವಿಧ ದೇವಸ್ಥಾನಗಳ ವಿಶ್ವಸ್ತರು, ಹಿಂದುತ್ವನಿಷ್ಠ ಸಂಘಟನೆಗಳು, ಧಾರ್ಮಿಕ ಸಂಸ್ಥೆಗಳ ಜಂಟಿ ಸಭೆ ನಡೆಸಲಾಗಿತ್ತು. ಅಲ್ಲದೇ ರಸ್ತೆಗಿಳಿದು ಹೋರಾಟ ಮಾಡಲು ನಿರ್ಧಾರವನ್ನು ಬಹಿರಂಗಪಡಿಸಿತ್ತು. ಈ ಸಂದರ್ಭದಲ್ಲಿ ಮಾ. ಶಾಸಕ ಅಭಯ ಪಾಟೀಲ್ ಮತ್ತು ಮಾ. ಶಾಸಕ ಅನಿಲ ಬೆನಕೆ ಕೂಡ ಪ್ರತಿಭಟಿಸಿದರು ಮತ್ತು ನಿರ್ಧಾರವನ್ನು ಹಿಂಪಡೆಯುವಂತೆ ಆಡಳಿತವನ್ನು ಕೇಳಿದರು.
Recommended Video
ಎಲ್ಲರ ಸಂಘಟಿತ ಹೋರಾಟದಿಂದಾಗಿ ಇಂದು ಸರ್ಕಾರಕ್ಕೆ ದೇವಸ್ಥಾನಗಳಿಗೆ ಆಡಳಿತಾಧಿಕಾರಿ ನೇಮಿಸುವ ನಿರ್ಧಾರವನ್ನು ರದ್ದುಪಡಿಸುವ ಆದೇಶವನ್ನು ಹೊರಡಿಸಬೇಕಾಯಿತು. ಇದು ಸಂಘಟಿತ ಹಿಂದೂ ಶಕ್ತಿಯ ವಿಜಯ; ಆದರೆ, ನಿರ್ಧಾರವನ್ನು ತಡೆಹಿಡಿದರೆ ಸಾಕಾಗದು, ಈ ನಿರ್ಧಾರವನ್ನು ಶಾಶ್ವತವಾಗಿ ರದ್ದುಪಡಿಸುವುದು ಹಾಗೆಯೇ ಸರ್ಕಾರವು ಕರ್ನಾಟಕದ 32 ಸಾವಿರ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಬಿಡುಗಡೆ ಮಾಡಿ ಅವುಗಳನ್ನು ಭಕ್ತರಿಗೆ ಹಿಂದಿರುಗಿಸುವವರೆಗೆ ಈ ಹೋರಾಟ ಮುಂದುವರಿಯುವುದು, ಎಂದು 'ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ'ದ ಗುರುಪ್ರಸಾದ ಗೌಡ ಹೇಳಿದರು.