ಹಿಂದಿ ಹೇರಿಕೆ: ಬೆಂಕಿಗೆ ತುಪ್ಪ ಸುರಿದ 'ನಮ್ಮ ಕನ್ನಡ'ದ ಕೇಂದ್ರ ಸಚಿವ
ಬೆಂಗಳೂರು, ಸೆ 16: 'ಒಂದು ದೇಶ, ಒಂದು ಭಾಷೆ' ಎನ್ನುವ ಕೇಂದ್ರ ಗೃಹಸಚಿವರ ಹೇಳಿಕೆ, ದಕ್ಷಿಣಭಾರತದಲ್ಲಿ ಅದರಲ್ಲೂ ಪ್ರಮುಖವಾಗಿ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವುದು ಗೊತ್ತೇ ಇದೆ.
ಹಿಂದಿ ಹೇರಿಕೆಯ ವಿಚಾರದಲ್ಲಿ , ರಾಜ್ಯ ಬಿಜೆಪಿ ಮುಖಂಡರು, ಹಾಗಲ್ಲಾ..ಹೀಗೆ.. ಎಂದು ಅಮಿತ್ ಶಾ ಅವರ ಹೇಳಿಕೆಗೆ ಸಮಜಾಯಿಷಿ ನೀಡುತ್ತಿದ್ದಾರೆ. ಅದರಂತೇ, ರೈಲ್ವೇ ಖಾತೆ ರಾಜ್ಯ ಸಚಿವ, ಬೆಳಗಾವಿ ಸಂಸದ ಸುರೇಶ್ ಅಂಗಡಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.
ಅಮಿತ್ ಶಾಗೆ ಬಹಿರಂಗ ಪತ್ರ: "ನಾವು ಕನ್ನಡಿಗರು ಹುಚ್ಚಾಟ ಮಾತ್ರ ಮಾಡೋಕ್ಕೆ ಹೋಗಬೇಡಿ"
" ಕನ್ನಡ ಕಲಿತರೆ ಕರ್ನಾಟಕದಲ್ಲಿ ಮಾತ್ರ ಇರಬಹುದು. ಹಿಂದಿ ಕಲಿತರೆ ದೆಹಲಿಗೆ ಹೋಗಬಹುದು" ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಸಚಿವರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಒಂದು ದೇಶ, ಒಂದೇ ಭಾಷೆ: ಅಮಿತ್ ಶಾ ವಿವಾದ
ಹಿಂದೆ, ಪ್ರಮಾಣವಚನವನ್ನು ಇಂಗ್ಲಿಷ್ ನಲ್ಲಿ ಸುರೇಶ್ ಅಂಗಡಿ ಸ್ವೀಕರಿಸಿದಾಗಲೂ, ಅವರ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಬೆಳಗಾವಿಯಲ್ಲಿ ಇದಕ್ಕೆ ಪ್ರತಿಭಟನೆಯೂ ವ್ಯಕ್ತವಾಗಿತ್ತು. ಸಚಿವರು, ಹಿಂದಿ ಹೇರಿಕೆಯ ವಿಚಾರದಲ್ಲಿ ಹೇಳಿದ್ದೇನು? ಮುಂದಿದೆ.
ನೂತನ ಸಂಸದರ ಪ್ರಮಾಣವಚನ
ನೂತನ ಸಂಸದರ ಪ್ರಮಾಣವಚನದ ವೇಳೆ ಕರ್ನಾಟಕದ ಎಲ್ಲಾ ಸಂಸದರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಸುರೇಶ್ ಅಂಗಡಿ ಇಂಗ್ಲಿಷ್ನಲ್ಲಿ ಮತ್ತು ಅನಂತ್ ಕುಮಾರ್ ಹೆಗಡೆ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಸಂಸದ ಸುರೇಶ್ ಅಂಗಡಿ ಅವರ ಮನೆಗೆ ಮುತ್ತಿಗೆ ಹಾಕಿದ್ದರು.
ಭಾರತವನ್ನು ಒಂದುಗೂಡಿಸುವ ಸಾಮರ್ಥ್ಯ ಹಿಂದಿ ಭಾಷೆಗೆ ಇದೆ
" ಭಾರತವನ್ನು ಒಂದುಗೂಡಿಸುವ ಸಾಮರ್ಥ್ಯ ಹಿಂದಿ ಭಾಷೆಗೆ ಇದೆ. ಜಾಗತಿಕವಾಗಿ ಭಾರತವನ್ನು ಪ್ರತಿನಿಧಿಸಲು ಒಂದು ಭಾಷೆಯನ್ನು ಹೊಂದುವ ಅಗತ್ಯವಿದೆ" ಎಂದು ಅಮಿತ್ ಶಾ ಹೇಳಿದ್ದರು. " ಭಾರತವು ವಿಭಿನ್ನ ಭಾಷೆಗಳ ದೇಶ. ಪ್ರತಿ ಭಾಷೆಗೂ ತನ್ನದೇ ಆದ ಮಹತ್ವವಿದೆ. ಒಂದು ಭಾಷೆಯಿಂದ ದೇಶವನ್ನು ಇಂದು ಒಗ್ಗೂಡಿಸಲು ಸಾಧ್ಯವಿದೆ ಎಂದರೆ ಅದು ಹಿಂದಿ" ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದರು.
ಕನ್ನಡ ಕಲಿತರೆ, ಕರ್ನಾಟಕದಲ್ಲಿ ಮಾತ್ರ ಇರಬಹುದು
ಅಮಿತ್ ಶಾ ಹೇಳಿಕೆಗೆ ರಾಜ್ಯದೆಲ್ಲಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುರೇಶ್ ಅಂಗಡಿ, " ಮಾತೃಭಾಷೆಯಲ್ಲಿ ಕಲಿಯುವ ಹಕ್ಕು ಎಲ್ಲರಿಗೂ ಇದೆ. ಇದನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಕನ್ನಡ ಕಲಿತರೆ, ಕರ್ನಾಟಕದಲ್ಲಿ ಮಾತ್ರ ಇರಬಹುದು. ಹಿಂದಿ ಕಲಿತರೆ, ರಾಷ್ಟ್ರಮಟ್ಟದಲ್ಲಿ ಬೆಳೆಯುವ ಸೌಭಾಗ್ಯ ದೊರೆಯುತ್ತದೆ" ಎಂದು ಹೇಳಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಲಬೇಕೆಂದರೆ ಹಿಂದಿ ಕಲಿಯಬೇಕು
ಮುಂದುವರಿಯುತ್ತಾ, " ನಾವು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಲಬೇಕೆಂದರೆ ಹಿಂದಿ ಕಲಿಯಬೇಕು. ಆಯಾಯ ಪ್ರಾದೇಶಿಕ ಭಾಷೆಯ ಜೊತೆಗೆ ಹಿಂದಿಯನ್ನೂ ಕಲಿಯಬೇಕು ಎನ್ನುವುದು ನನ್ನ ಮತ್ತು ಕೇಂದ್ರ ಸರಕಾರದ ಅಭಿಪ್ರಾಯ" ಎಂದು ರೈಲ್ವೇ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.
ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರತಿಕ್ರಿಯೆ
ಕೇಂದ್ರದ ಹಿಂದಿ ಹೇರಿಕೆಯ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರತಿಕ್ರಿಯೆ ನೀಡಿದ್ದಾರೆ. " ದೇಶದಲ್ಲಿ ನೂರಾರು ಸಮಸ್ಯೆಗಳಿವೆ. ಇದನ್ನು ಸರಿದಾರಿಗೆ ತರಲು ಮೋದಿ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಜನಸಾಮಾನ್ಯರ ಗಮನವನ್ನು ಬೇರಡೆ ಸೆಳೆಯಲು, ಅಮಿತ್ ಶಾ ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಾರೆ" ಎಂದು ಪಿಣರಾಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.