ರಣಗಾಳಿಗೆ ಬೆಚ್ಚಿಬಿದ್ದ ಮಲೆನಾಡಿಗರು, ಕಾಫಿನಾಡಲ್ಲಿ ಹೆಚ್ಚಾಯ್ತು ಭೂ ಕುಸಿತ
ಚಿಕ್ಕಮಗಳೂರು, ಆಗಸ್ಟ್.22: ಕಾಫಿನಾಡು ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಸೋನೆ ಮಳೆ ಹಾಗೂ ರಣಗಾಳಿಗೆ ಅಲ್ಲಲ್ಲೇ ಬೆಟ್ಟ-ಗುಡ್ಡ ಹಾಗೂ ಭೂಮಿ ಕುಸಿಯುತ್ತಿದ್ದು, ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ.
ಕಳೆದ ನಾಲ್ಕು ದಿನದಿಂದ ಮಲೆನಾಡಿನಲ್ಲಿ ಮಳೆಯ ಪ್ರಮಾಣ ತಗ್ಗಿದ್ದು, ಗಾಳಿಯ ವೇಗ ಹೆಚ್ಚಾಗಿದೆ. ಎರಡು ತಿಂಗಳ ಕಾಲ ಸುರಿದ ಮಳೆಗೆ ಭೂಮಿಯ ತೇವಾಂಶ ಹೆಚ್ಚಾಗಿದ್ದು ಈಗಿನ ದೈತ್ಯ ಗಾಳಿಯಿಂದ ಭೂಕುಸಿತದ ಪ್ರಕರಣ ಹೆಚ್ಚಾಗಿದೆ.
ಪಶ್ಚಿಮ ಘಟ್ಟದಲ್ಲಿ ನಿಗೂಢ ಸ್ಫೋಟಗಳು, ಕಾದಿದೆಯಾ ಗಂಡಾಂತರ?
ಇಂದು ಬುಧವಾರ ಕೂಡ ಎನ್.ಆರ್.ಪುರ ತಾಲೂಕಿನ ಖಾಂಡ್ಯ ಹೋಬಳಿಯ ಬಿದರು ಗ್ರಾಮದ ಸತೀಶ್ ಭಟ್ ಎಂಬುವರಿಗೆ ಸೇರಿದ ಕಾಫಿ ತೋಟದಲ್ಲಿ ಸುಮಾರು ಒಂದು ಎಕರೆಯಷ್ಟು ಭೂಮಿ ಕುಸಿತವಾಗಿದೆ.
ಕುಸಿದಿರುವ ಮಣ್ಣು ತೋಟದ ಇತರೆ ಭಾಗದ ಮೇಲೆ ಅಪ್ಪಳಿಸಿರುವುದರಿಂದ ಒಂದೂವರೆ-ಎರಡು ಎಕರೆ ಕಾಫಿ, ಅಡಿಕೆ, ಮೆಣಸು ಬೆಳೆ ಸಂಪೂರ್ಣ ನಾಶವಾಗಿದೆ. ಭೂಮಿ ಹಸಿ ಇರೋ ಕಾರಣ ಮಣ್ಣು ಕುಸಿಯುತ್ತಲೇ ಇದ್ದು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ಮಂಗಳವಾರವಷ್ಟೇ ಚಿಕ್ಕಮಗಳೂರು ತಾಲೂಕಿನ ಗಡಿಗ್ರಾಮವಾದ ಸಿದ್ದಾಪುರ ಗ್ರಾಮದಲ್ಲೂ ಸುಮಾರು ಒಂದು ಎಕರೆಯಷ್ಟು ಭೂಮಿ ಕುಸಿದಿದ್ದು ಅಲ್ಲೂ ಸಹಾ ಅಡಿಕೆ, ಕಾಫಿ ಸಂಪೂರ್ಣ ನಾಶವಾಗಿತ್ತು.
ಅಷ್ಟೆ ಅಲ್ಲದೆ ಮಲೆನಾಡಿನಾದ್ಯಂತ ಕೆಲವೆಡೆ ರಸ್ತೆ ಕುಸಿಯುತ್ತಿದ್ದು, ಹಲವು ಗ್ರಾಮಗಳಿಗೆ ದಾರಿ ಇಲ್ಲದಂತಾಗಿದೆ. ಬೆಟ್ಟ-ಗುಡ್ಡಗಳ ಮಣ್ಣು ಭೂಮಿಗೆ ಕುಸಿಯುತ್ತಿದ್ದು, ಸಂಚಾರ ಕೂಡ ಅಸ್ತವ್ಯಸ್ತವಾಗ್ತಿದೆ . ಮಳೆ ಹಾಗೂ ರಣಗಾಳಿಯಿಂದ ಮಲೆನಾಡಿಗರು ಬೆಚ್ಚಿಬಿದ್ದಿದ್ದಾರೆ.
ನಾಲ್ಕು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಕುಸಿತ
ನಾಲ್ಕು ಗ್ರಾಮಗಳಿಗೆ ಸಂಪರ್ಕಿಸುವ ಬೊಗಸೆ - ವಡ್ಡಿ ಗ್ರಾಮದ ರಸ್ತೆ ಕುಸಿದಿದ್ದು, ಸಂಪರ್ಕ ಬಂದ್ ಆಗಿದೆ. ರಸ್ತೆಯ ಒಂದು ಬದಿ ಸಂಪೂರ್ಣ ಕುಸಿದಿದ್ದು, ರಸ್ತೆ ಸಂಪರ್ಕವಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ವಾಹನ ಸಂಚರಿಸಲಾಗದೆ ಕಾಲುನಡಿಗೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಬೊಗಸೆ ವಡ್ಡಿ ಗ್ರಾಮ, ಕಡವಂತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಈ ಅನಾಹುತ ಸಂಭವಿಸಿದೆ.