ಶಿಕ್ಷಣ ಸಂಸ್ಥೆಗಳಲ್ಲಿ ಮೊಬೈಲ್ ನಿಷೇಧವೇ? ಸಚಿವ ಅಶ್ವಥ್ ನಾರಾಯಣ ಪ್ರತಿಕ್ರಿಯೆ ಹೀಗೆ
ಬೆಂಗಳೂರು, ಫೆಬ್ರವರಿ 11: ರಾಜ್ಯದಲ್ಲಿ ಹಿಜಾಬ್ ವಿವಾದವು ಹೆಚ್ಚಳ ಆಗುತ್ತಿರುವ ನಡುವೆಯೇ ರಾಜ್ಯದ ಕಾಲೇಜುಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲಾಗುತ್ತದೆಯೇ ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿದೆ. ಈ ವಿಚಾರದಲ್ಲಿ ಕರ್ನಾಟಕ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವಥ್ ನಾರಾಯಣ ಶುಕ್ರವಾರ ಸ್ಪಷ್ಟನೆಯನ್ನು ನೀಡಿದ್ದಾರೆ.
ರಾಜ್ಯದಲ್ಲಿ ಹಿಜಾಬ್ ವಿವಾದದ ಹಿನ್ನೆಲೆಯಿಂದಾಗಿ ರಾಜ್ಯದ ಕಾಲೇಜುಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲಾಗುತ್ತದೆಯೇ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರ್ನಾಟಕದ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವಥ್ ನಾರಾಯಣ, "ಡಿಜಿಟಲ್ ಕಲಿಕೆಯು ಅಧ್ಯಯನ ಪ್ರಕ್ರಿಯೆಯ ಭಾಗವಾಗಿರುವುದರಿಂದ ಕಾಲೇಜುಗಳಲ್ಲಿ ಮೊಬೈಲ್ ಫೋನ್ಗಳ ಬಳಕೆಯನ್ನು ನಿಷೇಧ ಮಾಡಲು ಸಾಧ್ಯವಿಲ್ಲ," ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಹಿಜಾಬ್ ನಿಷೇಧಕ್ಕೆ ಕೇರಳ ರಾಜ್ಯಪಾಲರ ಬೆಂಬಲ
ಹಿಜಾಬ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗುವುದು ಎಂಬ ಊಹಾಪೋಹಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಇತ್ತೀಚಿನ ದಿನಗಳಲ್ಲಿ ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್, ಟ್ಯಾಬ್ ಮುಂತಾದ ಆಧುನಿಕ ಗ್ಯಾಜೆಟ್ಗಳು ಬೋಧನೆ-ಕಲಿಕೆ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿವೆ. ಪರಿಸ್ಥಿತಿ ಹೀಗಿರುವಾಗ ಮೊಬೈಲ್ ಬಳಕೆಯನ್ನು ಹೇಗೆ ನಿಷೇಧಿಸಲು ಸಾಧ್ಯ," ಎಂದು ಪ್ರಶ್ನಿಸಿದ್ದಾರೆ.
ಯಾವುದೇ ವದಂತಿಗಳಿಗೆ ಕಿವಿಕೊಡದಂತೆ ಸಚಿವರ ಸಲಹೆ
"ವಿದ್ಯಾರ್ಥಿಗಳು ಅಥವಾ ಪೋಷಕರು ಇಂತಹ ವದಂತಿಗಳನ್ನು ನಂಬಬಾರದು. ಆಧುನಿಕ ಗ್ಯಾಜೆಟ್ಗಳನ್ನು ಬಳಸಿಕೊಂಡು ಎಲ್ಲಾ ಹಂತದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಸರ್ಕಾರದ ಗುರಿಯಾಗಿದೆ. ಅದರಂತೆ ಸಂಸ್ಥೆಗಳಲ್ಲಿ ಮೊಬೈಲ್ ಬಳಕೆಯನ್ನು ಮುಂದುವರಿಸಲಾಗುವುದು. ರಾಜ್ಯದ ಕಾಲೇಜುಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧ ಮಾಡುವುದಿಲ್ಲ," ಎಂದು ಕರ್ನಾಟಕ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವಥ್ ನಾರಾಯಣ ಸ್ಪಷ್ಟನೆ ನೀಡಿದ್ದಾರೆ.
ಪೊಲೀಸರ ಧ್ವಜ ಮೆರವಣಿಗೆ
ಹಿಜಾಬ್ ವಿವಾದ ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗುತ್ತಿರುವ ನಡುವೆ ಕರ್ನಾಟಕ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಉಡುಪಿ, ದಕ್ಷಿಣ ಕನ್ನಡ, ವಿಜಯಪುರ, ಧಾರವಾಡ ಮತ್ತು ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಧ್ವಜ ಮೆರವಣಿಗೆ ನಡೆಸಿದ್ದಾರೆ. ಸಶಸ್ತ್ರ ಪೊಲೀಸರ ಎರಡು ತಂಡಗಳು ಹುಬ್ಬಳ್ಳಿಯ ಸೂಕ್ಷ್ಮ ಪ್ರದೇಶಗಳಲ್ಲಿ ಧ್ವಜ ಮೆರವಣಿಗೆ ನಡೆಸಿವೆ. ಕೋಮು ಸೂಕ್ಷ್ಮ ವಿಜಯಪುರದಲ್ಲೂ ಪೊಲೀಸರು ಮೆರವಣಿಗೆ ನಡೆಸಿದರು. ಹಿಜಾಬ್ ವಿವಾದ ಗಲಾಟೆ ಆರಂಭವಾದ ಉಡುಪಿಯಲ್ಲೂ ಪೊಲೀಸ್ ಪಥಸಂಚಲನ ನಡೆದಿದೆ.
ಹಿಜಾಬ್ ಧರಿಸಿದರೆ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಯೇ ಎಂದು ಶಿಕ್ಷಕರಿಗೆ ಹೇಗೆ ತಿಳಿಯುತ್ತದೆ?: ಅಸ್ಸಾಂ ಸಿಎಂ
ಕರ್ನಾಟಕ ಹೈಕೋರ್ಟ್ ತನ್ನ ಅಂತಿಮ ಆದೇಶದವರೆಗೆ ಹಿಜಾಬ್ ಮತ್ತು ಕೇಸರಿ ಶಾಲು ಎರಡನ್ನೂ ನಿಷೇಧಿಸಿ ಮಧ್ಯಂತರ ಆದೇಶವನ್ನು ನೀಡಿದೆ. ಈ ಹಿನ್ನೆಲೆ ವಿದ್ಯಾರ್ಥಿನಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಸುಪ್ರೀಂ ಕೋರ್ಟ್ ತುರ್ತು ವಿಚಾರಣೆಯನ್ನು ನಿರಾಕರಿಸಿದೆ. ಅಗತ್ಯ ಬಂದರೆ ಮಧ್ಯ ಪ್ರದೇಶ ಮಾಡಲಾಗುವುದು, ಈ ವಿಚಾರವನ್ನು ರಾಷ್ಟ್ರ ಮಟ್ಟಕ್ಕೆ ತರಬೇಡಿ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
Recommended Video
ಇನ್ನು ಹಿಜಾಬ್ ವಿವಾದ ಇನ್ನೂ ಸರಿಯಾದ ರೀತಿಯಲ್ಲಿ ಇತ್ಯರ್ಥಕ್ಕೆ ಬರದಿರುವ ಕಾರಣದಿಂದಾಗಿ ರಾಜ್ಯದಲ್ಲಿ ಕಾಲೇಜುಗಳಿಗೆ ರಜೆಯನ್ನು ವಿಸ್ತರಣೆ ಮಾಡಲಾಗಿದೆ. "ರಾಜ್ಯದಲ್ಲಿ ಹಿಂಸಾಚಾರ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ವಿಶ್ವವಿದ್ಯಾಲಯ, ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಕಾಲೇಜು, ಡಿಪ್ಲೋಮಾ ಕಾಲೇಜುಗಳಿಗೆ ಅನ್ವಯವಾಗುವಂತೆ ನೀಡಿರುವ ರಜೆಯನ್ನು ಫೆ.16 ವರೆಗೆ ಮುಂದುವರೆಸಲಾಗಿದೆ," ಎಂದು ಕರ್ನಾಟಕ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವಥ್ ನಾರಾಯಣ ಶುಕ್ರವಾರ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಇನ್ನು ರಾಜ್ಯಾದ್ಯಂತ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದಿಂದ ಮುಚ್ಚಲ್ಪಟ್ಟಿದ್ದ 10 ನೇ ತರಗತಿಯನ್ನು ಸೋಮವಾರದಿಂದ ಪ್ರಾರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. (ಒನ್ಇಂಡಿಯಾ ಸುದ್ದಿ)