ಪರೀಕ್ಷೆ ತೊರೆದ ವಿದ್ಯಾರ್ಥಿನಿಯರ ಹಿಂದೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೈವಾಡ: ನಾಗೇಶ್
ಬೆಂಗಳೂರು ಏಪ್ರಿಲ್ 22: ರಾಜ್ಯ ಸರ್ಕಾರದ ಆದೇಶದ ನಡುವೆಯೂ ಹಿಜಾಬ್ ಧರಿಸಿ ಉಡುಪಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಆಗಮಿಸಿದ ಇಬ್ಬರು ಹಿಜಾಬ್ ಪರ ಹೋರಾಟಗಾರ್ತಿ ವಿದ್ಯಾರ್ಥಿನಿಯರು ಹಿಜಾಬ್ಗಾಗಿ ಪಟ್ಟು ಹಿಡಿದು ಪರೀಕ್ಷೆ ಬರೆಯದೇ ಮನೆ ಕಡೆ ಮುಖ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯವರೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಈ ಸಂಘಟನೆಯವರು ಹಿಜಬ್ ವಿದ್ಯಾರ್ಥಿನಿಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿರಬಹುದು. ಈ ಮೂಲಕ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದವರೇ ಮಕ್ಕಳನ್ನು ಹಾಳು ಮಾಡಿದ್ದಾರೆ ಎಂದಿದ್ದಾರೆ.
Breaking; ಉಡುಪಿಯಲ್ಲಿ ಹಿಜಾಬ್ಗೆ ಪಟ್ಟು, ಪರೀಕ್ಷೆ ಬರೆಯದ ಆಲಿಯಾ, ರೇಷಂ
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಿಜಾಬ್ ವಿದ್ಯಾರ್ಥಿನಿಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿರಬಹುದು. ಈ ಸಂಘಟನೆಯವರೇ ಮಕ್ಕಳ ಭವಿಷ್ಯವನ್ನು ಹಾಳು ಮಾಡಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗಂಭೀರ ಆರೋಪ ಮಾಡಿದ್ದಾರೆ. ಹಿಜಾಬ್ ಪರ ಹೋರಾಡಿದ ಆರು ವಿದ್ಯಾರ್ಥಿಗಳ ಮನವೊಲಿಸಲು ನಾವು ಪ್ರಯತ್ನ ಮಾಡಿದ್ದೇವೆ. ಆದರೆ ನಾವು ಎಷ್ಟೇ ಪ್ರಯತ್ನಪಟ್ಟರೂ ವಿದ್ಯಾರ್ಥಿಗಳ ಮನ ಕರಗಿಲ್ಲ. ಹೀಗಾಗಿ ಅವರನ್ನು ಬೇರೆ ಸಂಘಟನೆಗಳು ಮನವೊಲಿಸಲು ಮುಂದಾಗಿರಬೇಕು. ಈ ವಿದ್ಯಾರ್ಥಿಗಳ ಹಿಂದೆ ಯಾರಿದ್ದಾರೆನ್ನುವುದೂ ಹೊರಬರುತ್ತಿದೆ.
ನಮಗೆ ಹಿಜಾಬ್ ಪರ ನಿಂತ ಆರು ವಿದ್ಯಾರ್ಥಿಗಳ ಬಗ್ಗೆ ನಾವು ಯೋಚಿಸುತ್ತಿಲ್ಲ. ಏಕೆಂದರೆ ಇಷ್ಟೇಲ್ಲಾ ಸಮಸ್ಯೆಗಳ ನಡುವೆ ಒಂದು ಲಕ್ಷ ಮುಸ್ಲಿಂ ಸಮುದಾಯದ ಮಕ್ಕಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಅದರಲ್ಲಿ 82 ಸಾವಿರ ಜನ ವಿದ್ಯಾರ್ಥಿನಿಯರಿದ್ದಾರೆ. ಇದು ನಿಜಕ್ಕೂ ಸಂತೋಷದ ವಿಷಯ. ಇದರಲ್ಲಿ ಆರು ಜನ ಪರೀಕ್ಷೆ ಬರೆಯುವುದಿಲ್ಲ ಎಂಬುವುದಕ್ಕಿಂತ 82 ಸಾವಿರ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಮುಂದಾಗಿದ್ದಾರೆನ್ನುವುದು ಮುಖ್ಯ. ಇವರನ್ನು ನಾವು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಮಾತ್ರವಲ್ಲದೇ ಸುಪ್ರೀಂ ಕೋರ್ಟ್ ಕೂಡ ಅವರ ವಾದಗಳಿಗೆ ಮನ್ನಣೆ ನೀಡಿಲ್ಲ. ಅಲ್ಲದೇ ಸರ್ಕಾರದ ನಿರ್ಧಾರಗಳು ಸರಿಯಾದ ರೀತಿಯಲ್ಲಿದೆ ಎಂದು ಹೈಕೋರ್ಟ್ ತಿಳಿಸಿದೆ. ಹಿಜಬ್ ಮುಗಿದು ಹೋದಂತಹ ಸಮಸ್ಯೆ ಎಂದರು. ಹಿಜಾಬ್ ಕೇವಲ ಭಾರತದಲ್ಲಿ ಮಾತ್ರ ಎದುರಿಸಲಾಗುತ್ತಿರುವ ಸಮಸ್ಯೆಯಲ್ಲ. ಪ್ರಪಂಚದ ಅನೇಕ ದೇಶಗಳಲ್ಲಿ ಇದೇ ರೀತಿ ಸಮಸ್ಯೆಗಳಿದ್ದು, ಎಲ್ಲಾ ದೇಶಗಳು ಧೈರ್ಯವಾಗಿ ಮುನ್ನುಗ್ಗುತ್ತಿದೆ ಎಂದು ಸಚಿವರು ತಿಳಿಸಿದರು. ಹಿಜಬ್ ಮತ್ತು ಬುರ್ಕಾವನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಕೂಡ ಧರಿಸಬಾರದು ಎಂಬ ನಿರ್ಣಯಗಳನ್ನು ಅನೇಕ ದೇಶಗಳು ಕೈಗೊಳ್ಳಲಾಗಿದೆ. ದುಬೈ ಅಥವಾ ಸೌದಿಯಲ್ಲಿಯೋ ಈ ದೇಶದಲ್ಲಿ ಹಿಜಬ್ ಕಡ್ಡಾಯವಲ್ಲ ಎಂಬ ಬೋರ್ಡ್ ಕೂಡ ಹಾಕಲಾಗಿದೆ. ಇಷ್ಟರ ಮಟ್ಟಿಗೆ ಆ ಸಮಾಜದಲ್ಲಿ ಬದಲಾವಣೆಗಳಾಗುತ್ತಿದೆ ಎಂದು ಸಚಿವ ನಾಗೇಶ್ ತಿಳಿಸಿದರು.
Recommended Video