2018ರಲ್ಲಿ ಧೂಳೆಬ್ಬಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭಾಷಣಗಳ ಹೈಲೆಟ್ಸ್
Recommended Video
ಕಿಂಗ್ ಮೇಕರ್ ಆಗುತ್ತೇನೆ ಎಂದು ಚುನಾವಣಾ ಸಭೆಯಲ್ಲಿ ಏನು ಹೇಳುತ್ತಿದ್ದರೋ, 38ಕ್ಷೇತ್ರವನ್ನು ಗೆದ್ದಿದ್ದ ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿ ಹುದ್ದೆ ಮನೆಬಾಗಿಲಿಗೆ ಹುಡುಕಿಕೊಂಡು ಬಂದಿತ್ತು. ಇದಕ್ಕೇ ಅನ್ನೋದು ನೋಡಿ ಅದೃಷ್ಟಾ.. ಅಂತ..
ತಂದೆಯಿಂದ ರಾಜಕೀಯವನ್ನು ಸಹೋದರ ರೇವಣ್ಣನಿಗಿಂತ ಹೆಚ್ಚು ಕರಗತ ಮಾಡಿಕೊಂಡಿರುವ ಕುಮಾರಸ್ವಾಮಿ ಉತ್ತಮ ಭಾಷಣಕಾರರೂ ಕೂಡಾ.. ಕನ್ನಡದ ಮೇಲೆ ಉತ್ತಮ ಹಿಡಿತವನ್ನು ಹೊಂದಿರುವ ಕುಮಾರಸ್ವಾಮಿ ಅವರ ಭಾಷಣದ ಶೈಲಿ, ಬೇರೆ ರಾಜಕಾರಣಿಗಳಿಗಿಂತ ವಿಭಿನ್ನ..
"ಇಲ್ಲಿ ನೆರೆದಿರ್ತಕ್ಕಂತಹ ಜನ್ರಲ್ಲಿ ನಾನು ಈ ಸಂದರ್ಭದಲ್ಲಿ ಒಂದೇ ಒಂದು ಮಾತು ಹೇಳೋಕೆ ಇಷ್ಟ ಪಡ್ತೀನಿ.. ಇವತ್ತು ಏನು ಸುಳ್ವಾಡಿ ಘಟನೆಯ ಚರ್ಚೆ ನಡೆದಿರ್ತಕ್ಕಂತಹ ಈ ಸಂದರ್ಭದಲ್ಲಿ, ದೇವರ ಪ್ರಸಾದಕ್ಕೆ ವಿಷ ಹಾಕಿದವರು ಯಾರೇ ಇರ್ಲಿ..ಅವ್ರ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಈ ವೇದಿಕೆಯ ಮೂಲಕ ಹೇಳೋಕೆ ಇಷ್ಟಪಡ್ತೀನಿ" ಕುಮಾರಸ್ವಾಮಿ ಭಾಷಣದ ಶೈಲಿ ಹೀಗಿರುತ್ತೆ..
ವರ್ಷಾಂತ್ಯದ ವಿಶೇಷ : ಕರ್ನಾಟಕದ ಸರ್ಕಾರದ ಯೋಜನೆಗಳು
ಮೇ ತಿಂಗಳಲ್ಲಿ ನಡೆದ ಅಸೆಂಬ್ಲಿ ಚುನಾವಣೆಗೆ ಮುನ್ನ, ಪಕ್ಷದ ಪರ ಸಮಾವೇಶದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಹಲವು ಗಂಭೀರ ಮತ್ತು ವಿವಾದಕಾರಿ ವಿಚಾರಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದ್ದರು. ಮುಖ್ಯಮಂತ್ರಿಯಾದ ನಂತರವೂ ಅವರು ಮಾಡಿದ ಕೆಲವು ಭಾಷಣಗಳು ವೈರಲ್ ಆಗಿದ್ದವು.
2018ರಲ್ಲಿ ರಾಜ್ಯದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಡಿದ ಕೆಲವೊಂದು ಭಾಷಣದ (ಸಾರ್ವಜನಿಕ ಸಭೆ ಮತ್ತು ಅಸೆಂಬ್ಲಿಯೊಳಗೆ) ಆಯ್ದ ಅಂಶಗಳನ್ನು ಕೆಳಗೆ ಮುಂದುವರಿಸಲಾಗಿದೆ..
ಮಳವಳ್ಳಿಯಲ್ಲಿ ಸಭೆ ಅ 26
ಇಸ್ರೇಲ್ ದೇಶಕ್ಕೆ ಹೋಗಿದ್ದಾಗ, ನಾನು ಬದುಕಿ ಉಳಿದಿದ್ದೇ ದೊಡ್ಡದು. ನಾನು ಹೆಚ್ಚುದಿನ ಬದುಕಿರಲಾರೆ. ಆದರೆ, ಎಷ್ಟು ದಿನ ಬದುಕಿರುತ್ತೇನೋ, ಅಷ್ಟು ದಿನ ನನ್ನ ಕೈಯಲ್ಲಾದಷ್ಟು ಸಹಾಯವನ್ನು ನೊಂದವರಿಗೆ ಮಾಡುತ್ತೇನೆ. ನಾವು ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಎಲ್ಲಾ ಭರವಸೆಗೆ ಕಟಿಬದ್ದನಾಗಿದ್ದೇನೆ. ಆದರೆ, ಕಾಂಗ್ರೆಸ್ ಜೊತೆ ಮೈತ್ರಿ ಸರಕಾರ ಇರುವುದರಿಂದ, ಕೆಲವೊಂದು ಕೊಂಚ ವಿಳಂಬವಾಗಬಹುದು - ಮಳವಳ್ಳಿಯಲ್ಲಿ ಸಭೆ (ಅ 18).
2018ರ ಕರ್ನಾಟಕದ ಪ್ರಮುಖ ರಾಜಕೀಯ ಬೆಳವಣಿಗೆಗಳು
ಬಿಜೆಪಿ ವಿರುದ್ಧ ದಂಗೆ ಏಳುವಂತೆ ನಾನೇ ರಾಜ್ಯದ ಜನರಿಗೆ ಕರೆ ಕೊಡುತ್ತೇನೆ
ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ಮಾಡಿದರೆ ನಾವು ಕೈಕಟ್ಟಿ ಕೂರುವುದಿಲ್ಲ, ತಕ್ಕ ಶಾಸ್ತಿ ಮಾಡುತ್ತೇವೆ, ಬಿಜೆಪಿ ವಿರುದ್ಧ ದಂಗೆ ಏಳುವಂತೆ ನಾನೇ ರಾಜ್ಯದ ಜನರಿಗೆ ಕರೆ ಕೊಡುತ್ತೇನೆ. ಯಡಿಯೂರಪ್ಪ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು, ಅವರು, ಯಡಿಯೂರಪ್ಪ ಕಮಿಷನ್ ಜನಕ, ಅವರು ಸರ್ಕಾರದ ಯಾವುದೇ ಕೆಲಸ ಮಾಡಿಸುವಾಗಲೂ ಕಮಿಷನ್ ಹಿಡಿದುಕೊಂಡು ಯೋಜನೆ ಜಾರಿ ಮಾಡುತ್ತಿದ್ದರು - ಹಾಸನದಲ್ಲಿ ಕಾರ್ಯಕರ್ತರ ಸಭೆ (ಸೆ 18).
ಸಂಪುಟ ವಿಸ್ತರಣೆ : ಒನ್ ಇಂಡಿಯಾ ಸಮೀಕ್ಷೆಯಲ್ಲಿ ಓದುಗರು ಹೇಳಿದ್ದೇನು?
ಸ್ವಾತಂತ್ರ್ಯೋತ್ಸವ ಭಾಷಣ- ಬೆಂಗಳೂರು
ಸಾಲಮನ್ನಾದಿಂದ ಬಹಳಷ್ಟು ರೈತರಿಗೆ ಅನುಕೂಲವಾಗಿದೆ. ಆಧುನಿಕ ಕೃಷಿಯ ಬಗ್ಗೆ ರೈತರಿಗೆ ಮಾಹಿತಿ ನೀಡಲು ರೈತ ಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುವುದು. ರೈತರನ್ನು ಚಿಂತೆಯಿಂದ ದೂರವಿರುವಂತೆ ಮಾಡಲು ಶತಪ್ರಯತ್ನ ಮಾಡುತ್ತಿದ್ದೇನೆ. ರೈತರ ಆತ್ಮಹತ್ಯೆಯ ಸುದ್ದಿ ಪ್ರತೀ ಬಾರಿ ಬಿದ್ದಾಗಲೂ, ನನ್ನ ಕುಟುಂಬದವರನ್ನು ಕಳೆದುಕೊಂಡಷ್ಟು ದುಃಖವಾಗುತ್ತದೆ. ನಮ್ಮದು ಮಾನವೀಯ ಮುಖವುಳ್ಳ ಸರಕಾರ - ಸ್ವಾತಂತ್ರ್ಯೋತ್ಸವ ಭಾಷಣ- ಬೆಂಗಳೂರು (ಆ 2018).
ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಕಾಂಗ್ರೆಸ್ ಶಾಸಕರ ಪಟ್ಟಿ
ನೋವುಗಳನ್ನು ನುಂಗಿ ವಿಷಕಂಠನಂತೆ ಬದುಕುತ್ತಿದ್ದೇನೆ
ನೀವೆಲ್ಲಾ ನಿಮ್ಮ ಅಣ್ಣತಮ್ಮ ಇಂದು ಸಿಎಂ ಆಗಿದ್ದಾನೆ ಎನ್ನುವ ಸಂತೋಷದಲ್ಲಿದ್ದೀರಿ.. ಆದರೆ ನಾನು ಸಂತೋಷದಲ್ಲಿ ಇಲ್ಲ. ಮುಖ್ಯಮಂತ್ರಿಯಾಗಬೇಕು ಎನ್ನುವ ಬಯಕೆ ಇದ್ದದ್ದು, ಸಿಎಂ ಆಗಿ ಮೆರೆಯಬೇಕೂಂತ ಅಲ್ಲ. ನಮಗೆ ಬಹುಮತ ಬಂದಿಲ್ಲ, ನಮ್ಮನ್ನು ಅವಕಾಶವಾದಿ ಎಂದು ವಿರೋಧಿಗಳು ಜರಿಯುತ್ತಿದ್ದಾರೆ. ಈ ಎಲ್ಲಾ ನೋವುಗಳನ್ನು ನುಂಗಿ ವಿಷಕಂಠನಂತೆ ಬದುಕುತ್ತಿದ್ದೇನೆ. ಕಾರ್ಯಕರ್ತರ ಸಮಾವೇಶ - ಬೆಂಗಳೂರು (ಜು 2018).
ಕೆಲವೊಮ್ಮೆ ಅಸಂಬದ್ದ ಪ್ರಶ್ನೆಗಳನ್ನೂ ಕೇಳುತ್ತಾರೆ
ಮಾಧ್ಯಮದವರು ನನ್ನನ್ನೂ ಸೇರಿ ಸಚಿವರುಗಳನ್ನು ಸಂದರ್ಶಿಸಲು ಪ್ರತಿಯೊಬ್ಬರ ಚೇಂಬರಿಗೆ ಹೋಗಬೇಕಾಗುತ್ತದೆ. ಕೆಲವೊಮ್ಮೆ ಅಸಂಬದ್ದ ಪ್ರಶ್ನೆಗಳನ್ನೂ ಕೇಳುತ್ತಾರೆ. ಮಳೆ,ಬಿಸಿಲಿನಿಂದ ರಕ್ಷಣೆ ಕೊಡುವ ದೃಷ್ಟಿಯಿಂದ, ಎಲ್ಲಾ ರೀತಿಯ ಸೌಲಭ್ಯಗಳಿರುವ ಕೋಣೆಯನ್ನು ನೀಡುವ ಉದ್ದೇಶವನ್ನು ಹೊಂದಿದ್ದೇನೆ. ಕಾರಿಡಾರ್ ನಲ್ಲಿ ಮಾಧ್ಯಮದವರು ಮೈಕ್ ಹಿಡಿದುಕೊಂಡು ಸುತ್ತಾಡಿಕೊಂಡು ಇರುತ್ತಾರೆ ಎನ್ನುವ ಟೀಕೆಟಿಪ್ಪಣಿ ಬಂದಿರುವ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಬೆಂಗಳೂರು (ಜು 2018)
ನಾನು ಕಾಂಗ್ರೆಸ್ ಪಕ್ಷದ ಖುಣದಲ್ಲಿದ್ದೇನೆ
'ನಮಗೆ ಜನರ ಆಶೀರ್ವಾದ ಇಲ್ಲದೇ ಇದ್ದರೂ, ಪುಣ್ಯಾತ್ಮ ರಾಹುಲ್ ಗಾಂಧಿ ನೋಡೋಣ ಎಂದು ನಂಬಿಕೆ ಇಟ್ಟು ನಮಗೆ ಅಧಿಕಾರವನ್ನು ಕೊಟ್ಟಿದ್ದಾರೆ'. ರೈತರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ದೊರಕಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಾನು ಕಾಂಗ್ರೆಸ್ ಪಕ್ಷದ ಖುಣದಲ್ಲಿದ್ದೇನೆ, ಸಾಲಮನ್ನಾದ ಬಗ್ಗೆ ಮಾತನಾಡುವ ನೀವು, (ಉ.ಕರ್ನಾಟಕದ ರೈತರು) ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದೀರಾ - ಮಂಡ್ಯದಲ್ಲಿ ಭಾಷಣ (ಜೂ 2018)
ವಿಶ್ವಾಸಮತ ಯಾಚನೆ ಸಂದರ್ಭ
ನಮ್ಮನ್ನು ಬಿಟ್ಟು ಇನ್ನೊಬ್ಬರಿಗೆ ಸರಕಾರ ರಚಿಸಲು ಅವಕಾಶ ನೀಡುವುದಿಲ್ಲ ಎನ್ನುವ ಮಾತನ್ನು ಮಾನ್ಯ ಯಡಿಯೂರಪ್ಪನವರು ಹೇಳುತ್ತಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆ, ಅವರು ಹಿರಿಯರಿದ್ದಾರೆ. ಅವರು ಈ ಮಾತು, ಸರಿಯೋ ತಪ್ಪೋ ಎನ್ನುವುದನ್ನು ಅವರ ವಿವೇಚನೆಗೆ ಬಿಡುತ್ತೇನೆ. ನಾವು ಎಂದೂ ಅಧಿಕಾರವನ್ನು ಬಯಸಿ ಹೋದಂತವರಲ್ಲ. ನಾನಿವತ್ತು ವಿಚಿತ್ರವಾದ ಸನ್ನಿವೇಶದಲ್ಲಿದ್ದೇನೆ, ಸಿಎಂ ಹುದ್ದೆ ಸಿಗುತ್ತೆ ಎಂದ ಕೂಡಲೇ ನಾನು ಓಡಿ ಬಂದಿದ್ದೇನೆ ಎನ್ನುವ ಭಾವನೆ ಯಾರಲ್ಲಾದರೂ ಇದ್ದರೆ, ಅದನ್ನು ವಾಪಸ್ ತೆಗೆದುಕೊಳ್ಳಿ - ವಿಶ್ವಾಸಮತ ಯಾಚನೆ ಸಂದರ್ಭ (ಮೇ 2018).
ಚುನಾವಣಾ ಸಭೆ - ರಾಮನಗರ
ರಾಮನಗರ ಮತ್ತು ನನ್ನ ನಡುವಿನ ಸಂಬಂಧ ತಾಯಿಮಗನ ಹಾಗೆ. ಇಲ್ಲಿನ ತಾಯಿಯೊಬ್ಬರು ನನ್ನ ಗಲ್ಲ ಸವರಿ, ಯಾಕಪ್ಪಾ ರಾಮನಗರ ಬಿಟ್ಟು, ಸಾತನೂರಿಗೆ ಹೋದೆ ಎಂದು ನನ್ನನ್ನು ಹಿಂದೊಮ್ಮೆ ಕೇಳಿದ್ರು. 2004ರಲ್ಲೇ ಜನ ಮುಖ್ಯಮಂತ್ರಿ ಎಂದು ನನ್ನನ್ನು ಕೂಗುತ್ತಿದ್ದರು. ಜನರ ಬಾಯಿಯಿಂದ ಬರುವ ಮಾತು ಅಷ್ಟು ಸುಲಭವಲ್ಲ. ವಿರೋಧಿಗಳು ನನಗೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ. ಒಂದಂತೂ ಸತ್ಯ, ನಾನು ಮಣ್ಣಾಗುವುದೇ ರಾಮನಗರದಲ್ಲಿ. ರಾಜ್ಯದ ಪ್ರತೀ ಮನೆಮನೆಯಲ್ಲೂ ಕುಮಾರಣ್ಣನ ಫೋಟೋ ಹಾಕಬೇಕು, ಆ ರೀತಿ ಆಡಳಿತ ಕೊಡ್ತೀನಿ - ಚುನಾವಣಾ ಸಭೆ - ರಾಮನಗರ (ಮಾ 2018).
ಕುಮಾರಪರ್ವ - ಯಲಹಂಕ
ಈ ಕಾರ್ಯಕ್ರಮವನ್ನು ಯಶಸ್ಸುಗೊಳಿಸಿದಂತಹ ಪುಣ್ಯಾತ್ಮ ತಂದೆ ತಾಯಿಗಳಿಗೆ ನನ್ನ ನಮಸ್ಕಾರ. ನನ್ನ ಎರಡನೇ ಹೃದಯ ಶಸ್ತ್ರಚಿಕಿತ್ಸೆ ಆದ ಮೇಲೆ, ಜಿ ಟಿ ದೇವೇಗೌಡ್ರು ನೇತೃತ್ವದಲ್ಲಿ ಚಾಮುಂಡೇಶ್ವರಿ ಅಸೆಂಬ್ಲಿ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆರಂಭ ಮಾಡಿದೆವು. ಅಲ್ಲಿಂದ ಆರಂಭವಾದ ಕಾರ್ಯಕ್ರಮದ ಮೂಲಕ ಹಲವಾರು ಜಿಲ್ಲೆಗೆ ಬಂದೆ. ಈ ಬಾರಿ ನಿನಗೆ ಅವಕಾಶ ಕೊಡ್ತೀವಿ ಅಂತ ಈ ರಾಜ್ಯದ ಜನತೆ ನನಗೆ ಹರಸಿದ್ದಾರೆ. ಈ ರಾಜ್ಯ ಉಳಿಯಬೇಕಾದರೆ ನೀನು ನಮಗೆ ಬೇಕಪ್ಪಾ ಎನ್ನುವ ಮಾತನ್ನು ಹೇಳಿದ್ದಾರೆ. ನಿಮ್ಮ ಆಶೀರ್ವಾದವೇ ನನಗೆ ಎರಡನೇ ಜನ್ಮವನ್ನು ನೀಡಿದ್ದು - ಯಲಹಂಕದಲ್ಲಿ ಕುಮಾರಪರ್ವ ಸಮಾರೋಪ ಸಭೆ (ಫೆ 2018).
ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ
ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ, ಕಾಂಗ್ರೆಸ್ ಮತ್ತು ಬಿಜೆಪಿಯನ್ನು ನೋಡಿದ್ರಿ, ನಮಗೊಂದು ಅವಕಾಶ ಕೊಡಿ. ಈ ಒಂದೈದು ವರ್ಷ ಈ ಹುಡುಗ ಏನು ಮಾಡುತ್ತಾನೆ ನೋಡೋಣ, ನಿಮ್ಮ ಹೃದಯದಲ್ಲಿ ನಮ್ಮ ಮನೆ ಮಗ ಇದ್ದಾನೆ ಅಂತ ಒಂದು ಅವಕಾಶ ಕೊಡಿ. ನಾನು ಹೇಳಿದ ಕೆಲಸ ಮಾಡದಿದ್ದರೆ, ಶರ್ಟ್ ಹಿಡಿದು ನನ್ನನ್ನು ಕೇಳಿ. ನನ್ನ ಆರೋಗ್ಯಕ್ಕಿಂತ, ಆರೂವರೆ ಕೋಟಿ ಜನರ ಬಾಳು ಮುಖ್ಯ. ನಾನು ನಿಮಗಾಗಿ ಬದುಕುತ್ತಿದ್ದೇನೆ. ನಡಹಳ್ಳಿಯವರನ್ನು ಆಯ್ಕೆ ಮಾಡಿ ಕಳುಹಿಸಿ, ನಮಗೆ ಆಶೀರ್ವಾದ ಮಾಡಿ. ಚುನಾವಣಾ ಸಭೆ - ಮುದ್ದೇಬಿಹಾಳ (ಫೆ 2018).