ವಿಧಾನ ಮಂಡಲ ಅಧಿವೇಶನದ ಮೊದಲ ದಿನದ ವಿಶೇಷತೆಗಳು!
ಬೆಂಗಳೂರು, ಸೆ. 14: ಹಲವು ವೈಶಿಷ್ಟ್ಯಗಳೊಂದಿಗೆ ಹತ್ತು ದಿನಗಳ ಕಾಲ ನಡೆಯಲಿರುವ ವಿಧಾನ ಮಂಡಲ ಮಳೆಗಾಲದ ಅಧಿವೇಶನ ಸೋಮವಾರ ಆರಂಭವಾಗಿದೆ. ಕಳೆದ ಬಾರಿಯ ಅಧಿವೇಶನದಲ್ಲಿ ಮೊಟ್ಟ ಮೊದಲ ಸೀಟಲ್ಲಿ ಕುಳಿತಿದ್ದ ಯಡಿಯೂರಪ್ಪನವರಿಗೆ ಈ ಬಾರಿ ಕೊನೆಯ ಸಾಲಿನಲ್ಲಿ ಕುಳಿತು ಕಲಾಪದಲ್ಲಿ ಭಾಗಿಯಾಗಿದ್ದರು.
ಜೊತೆಗೆ ಕಳೆದ ಬಾರಿಯ ಅಧಿವೇಶನದಲ್ಲಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್ ಅವರೂ ಕೂಡ ಹಿಂದಿನ ಸಾಲಿಗೆ ಸ್ಥಳಾಂತರವಾಗಿದ್ದಾರೆ. ಇದರೊಂದಿಗೆ ಸದನದಲ್ಲಿ ಹೊಸ ಸಚಿವರ ಸಂಭ್ರಮ ಕಂಡು ಬಂತು. ಅದರಲ್ಲಿಯೂ ಸಚಿವರಾದ ಮುನಿರತ್ನ ಹಾಗೂ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಸದನದ ತುಂಬ ಓಡಾಡಿ ಅಭಿನಂದನೆ ಸ್ವೀಕಾರ ಮಾಡಿದ್ದು ಮತ್ತೊಂದು ವಿಶೇಷವಾಗಿತ್ತು.
ಗಮನ ಸೆಳೆದ ಶಾಸಕ ಅರವಿಂದ ಬೆಲ್ಲದ್!
ಕಾನೂನು ಸಚಿವರಿಗೆ ಮೊದಲ ಸಾಲಿನ ಮೂರನೇ ಸ್ಥಾನ ಕೊಡುವುದು ವಾಡಿಕೆ. ಆದರೆ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರಿಗೆ ಮೊದಲ ಸಾಲಿನ ಮೂರನೇ ಸ್ಥಾನದ ಬದಲು, ಐದನೇಯ ಸ್ಥಾನಕ್ಕೆ ಸ್ಥಳಾಂತರ ಮಾಡಿಕೊಡಲಾಗಿತ್ತು. ಅದರೊಂದಿಗೆ ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿದ್ದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಅವರು ಸದನದ ಕೇಂದ್ರ ಬಿಂದುವಾಗಿದ್ದು ಕೂಡ ಇಂದಿನ ಕಲಾಪದ ವಿಶೇಷಣೆಯಾಗಿತ್ತು.
ಸದನದಲ್ಲಿ ಬಿಜೆಪಿಯ ಎಲ್ಲಾ ಶಾಸಕರನ್ನು ಅರವಿಂದ ಬೆಲ್ಲದ್ ಮಾತನಾಡಿಸಿದರು. ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ಎತ್ತಿನಗಾಡಿಯಲ್ಲಿ ವಿಧಾನಸೌಧಕ್ಕೆ ಬಂದಿದ್ದ ಕಾಂಗ್ರೆಸ್ ನಾಯಕರು ಸದನಕ್ಕೆ ತಡವಾಗಿ ಬಂದರು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕರು ತಡವಾಗಿ ಸದನಕ್ಕೆ ಬಂದಿದ್ದರು.
ವಿಧಾನಸಭೆಯಲ್ಲಿ ಅಗಲಿದ ಗಣ್ಯರ ಸ್ಮರಣೆ!
ಇನ್ನು ವಿಧಾನಸಭೆ ಕಲಾಪ ಆರಂಭವಾಗುತ್ತಲೇ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಇತ್ತೀಚಿಗೆ ಅಗಲಿದೆ ಮಾಜಿ ಸಚಿವರು ಹಾಗೂ ಶಾಸಕರಾದ ಸಿ.ಎಂ. ಉದಾಸಿ, ವಿಶ್ರಾಂತ ಕುಲಪತಿ ಎಂ.ಐ. ಸವದತ್ತಿ, ಮಾಜಿ ವಿಧಾನ ಸಭಾಧ್ಯಕ್ಷ ಕೃಷ್ಣ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಕೇಂದ್ರದ ಮಾಜಿ ಸಚಿವ ಬಾಬಾಗೌಡ ರುದ್ರಗೌಡ ಪಾಟೀಲ್, ಮಾಸಜಿ ಶಾಸಕ ಜಿ. ಮಾದೇಗೌಡ, ಮಾಜಿ ಸಚಿವರು, ಸಂಸದರು ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕೆ.ಬಿ. ಶಾಣಪ್ಪ, ಪ್ರೊ. ಮಮ್ತಾಜ್ ಆಲಿಖಾನ್, ಮಾಜಿ ಸಚಿವ ಎ.ಕೆ. ಅಬ್ದುಲ್ ಸಮದ್, ಮಾಜಿ ಸಂಸದ ಸಿದ್ನಾಳ್, ರಾಜ್ಯ ಸಭೆಯ ಮಾಜಿ ಸದಸ್ಯ ಎಂ. ರಾಜಗೋಪಾಲ್, ಸಾಹಿತಿ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಾ. ಸಿದ್ಧಲಿಂಗಯ್ಯ, ಮಾಜಿ ಶಾಸಕರಾದ ರೇವಣ್ಣ ಸಿದ್ದಪ್ಪ ಕಲ್ಲೂರ್, ಡಾ. ಚಿತ್ತರಂಜನ್ ಕಲ್ಲುಕೋಟಿ, ಜೇಕಪ್, ಸಯ್ಯದ್ ಜುಲ್ಫಿಕರ್ ಹಶ್ಮಿ, ಮಹಮದ್ ಲೈಕೋದ್ದೀನ್, ಮನೋಹರ್ ಕಟ್ಟಿಮನಿ, ಎನ್.ಎಸ್. ಖೇಡ್, ರಾಜಶೇಖರ್ ಸಿಂಧೂರ ಅವರಿಗೆ ಸಂತಾಪ ಸೂಚಿಸಲಾಯಿತು.
ಸ್ವಾತಂತ್ರ್ಯ ಹೋರಾಟಗಾರರಿಗೆ ವಿಧಾನಸಭೆಯಲ್ಲಿ ನಮನ!
ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರಾದ ಸದಾಶಿವರಾವ್ ಬಾಪೂ ಸಾಹೇಬ ಬೋಸ್ಲೆ, ಸೂರಂ ರಾಮಯ್ಯ, ಹೆಚ್.ಎಸ್. ದೊರೆಸ್ವಾಮಿ, ಕನ್ನಡ ನಿಘಂಟು ತಜ್ಞ ಪ್ರೊ. ಜಿ. ವೆಂಕಟ ಸುಬ್ಬಯ್ಯ, ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಎಂ. ಎ. ಹೆಗಡೆ, ಪರಿಸರ ಹೋರಾಟಗಾರ ಡಾ. ಸುಂದರ್ ಬಹುಗುಣ, ಮಿಂಚಿನ ಓಟಗಾರ ಎಂದು ಖ್ಯಾತಿ ಪಡೆದಿದ್ದ ಕ್ರೀಡಾಪಟು ಮಿಲ್ಕಾಸಿಂಗ್, ಹಿರಿಯ ನಟಿ ಜಯಂತಿ, ಮಠಾಧೀಶರಾದ ವಿದ್ಯಾದಿರಾಜ ತೀರ್ಥ ಶ್ರೀಪಾದ ಒಡೆಯರ್, ಹಿರಿಯ ಸಾಹಿತಿ ಡಾ. ವಸಂತ ಕುಷ್ಠಗಿ, ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಮೋಹನ್ ಮಲ್ಲಿಕಾರ್ಜುನ ಶಾಂತನ ಗೌಡ ಅವರಿಗೆ ಸಂತಾಪ ಸಲ್ಲಿಸಿ, ಕೋವಿಡ್ ಸಾಂಕ್ರಾಮಿಕ ರೋಗ ಹಾಗೂ ಪ್ರವಾಹದಿಂದ ಅಗಲಿದವರಿಗೂ ಸಂತಾಪ ಸೂಚಿಸಲಾಯ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಅನೇಕ ಸಚಿವರು ಮಾತನಾಡಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು.
ಪರಿಷತ್ ಕಲಾಪ; ಅಗಲಿದ ಗಣ್ಯರಿಗೆ ಸಂತಾಪ
ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆಯೆ ಅಲ್ಲಿಯೂ ಅಗಲಿದವರಿಗೆ ಸಂತಾಪ ವ್ಯಕ್ತಪಡಿಸಲಾಯಿತು. ಕೋವಿಡ್ - 19ರ 2ನೇ ಅಲೆಯ ಭೀಕರ ಖಾಯಿಲೆಗೆ ಸಾವಿರಾರು ನಾಗರೀಕರು ಸಾವನ್ನಪ್ಪಿರುವುದು ಅತ್ಯಂತ ದುಃಖಕರ ಸಂಗತಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸದನದಲ್ಲಿ ಸಂತಾಪ ವ್ಯಕ್ತಪಡಿಸಿದರು.
ರಾಜ್ಯದ ಹಾಗೂ ರಾಷ್ಟ್ರದ, ರಾಜಕೀಯ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ವಿಜ್ಞಾನ ಕ್ಷೇತ್ರ ಮತ್ತು ಸಮಾಜ ಸೇವೆಯಲ್ಲಿ ತೊಡಗಿದ್ದ, ಹಲವಾರು ಖ್ಯಾತನಾಮರು ಮೃತಪಟ್ಟಿರುವುದು ಹಾಗೂ ಕೋವಿಡ್ ವಾರಿಯರ್ಸ್ಗಳು ಸೇರಿದಂತೆ ವಿಶೇಷವಾಗಿ ತಮ್ಮ ಜೀವನದ ಹಂಗನ್ನು ತೊರೆದು ಹಗಲಿರುಳು ರೋಗಿಗಳ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ವೈದ್ಯರು ಹಾಗೂ ದಾದಿಯರ ನಿಸ್ವಾರ್ಥ ಸೇವೆಯನ್ನು ಬಹಳ ಗೌರವದಿಂದ ಸ್ಮರಿಸುತ್ತದೆ ಎಂದು ಸದನದಲ್ಲಿ ಸಭಾಪತಿ ಹೊರಟ್ಟಿ ತಿಳಿಸಿದರು.
ನಂತರ ಸಭಾ ನಾಯಕ ಕೋಟ ಶ್ರೀನಿವಾಸ ಪ್ರಜಾರಿ ಹಾಗೂ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಅವರು ಸಂತಾ ಸೂಚನೆಯಲ್ಲಿ ಭಾಗವಹಿಸಿ ಮಾತನಾಡಿದರು.
Recommended Video