ವಿಧಾನಸಭೆ: ಹುಷಾರಾಗಿರಪ್ಪ ಬಿ.ಎಸ್. ಯಡಿಯೂರಪ್ಪ ಅವರನ್ನೇ ಇಳಿಸಿದ್ದಾರೆ!
ವಿಧಾನಸಭೆ, ಸೆ. 15: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪಾರ್ಲಿಮೆಂಟ್ಗೆ ಕಳುಹಿಸುವುದು, ವಿಧಾನಸಭೆ ಕಲಾಪಕ್ಕೆ ಸದಸ್ಯರ ಗೈರು ಹಾಜರಿಗೆ ಸ್ಪೀಕರ್ ಕಾಗೇರಿ ಗರಂ ಆಗಿದ್ದು, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಿಚಾರವಾಗಿ ಸಿಎಂ ಬೊಮ್ಮಾಯಿ ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯೆ ವಾಗ್ಯುದ್ಧ, ಬೆಲೆ ಏರಿಕೆ ಕುರಿತು ಚರ್ಚೆ, ಜೊತೆಗೆ ಹುಷಾರಾಗಿರಿ ಯಡಿಯೂರಪ್ಪ ಅವರನ್ನೇ ಇಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಎಚ್ಚರಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ. ಇವು ಬುಧವಾರ ವಿಧಾನಸಭೆಯಲ್ಲಿ ಕಂಡು ಬಂದ ವಿಶೇಷತೆಗಳು.
ಬೆಲೆ ಏರಿಕೆ ಕುರಿತು ವಿಧಾನಸಭೆಯಲ್ಲಿ ಚರ್ಚೆ ಮಾಡಲು ಸರ್ಕಾರ ಒಪ್ಪಿಕೊಂಡಿತು. ನಿಯಮ 69ರಡಿ ಬೆಲೆ ಏರಿಕೆ ಕುರಿತು ಚರ್ಚೆ ಮಾಡಲು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ಮಾಡಿಕೊಟ್ಟಿದ್ದರು. ಬೆಲೆ ಏರಿಕೆ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ ಹಲವು ಸ್ವಾರಸ್ಯಕರ ಪ್ರಸಂಗಗಳು ನಡೆದವು. ತಮ್ಮ ಅಂಕಿ-ಅಂಶಗಳಿಂದಲೇ ರಾಜ್ಯ ಬಿಜೆಪಿ ಸರ್ಕಾರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದು ಕಂಡು ಬಂತು.
ತೆರಿಗೆಯಿಂದ ಮೋದಿ ಸರ್ಕಾರ ಸಂಗ್ರಹಿಸಿದ್ದೆಷ್ಟು?
ಕಳೆದ ಏಳು ವಷ೯ದಲ್ಲಿ 23 ಲಕ್ಷ ಕೋಟಿ ರೂ. ಪೆಟ್ರೋಲ್ ಮತ್ತು ಡಿಸೇಲ್ ತೆರಿಗೆಯಿಂದ ಸಂಗ್ರಹವಾಗಿದೆ. ಆದರೆ, ಬಾಂಡ್ಗೆ ಕೇವಲ 1.5 ಲಕ್ಷ ರೂ. ಮಾತ್ರ ವೆಚ್ಚ ಮಾಡಲಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ವಿಧಾನಭೆಯಲ್ಲಿ ಬೆಲೆ ಹೆಚ್ಚಳದ ಮೇಲೆ ನಿಲುವಳಿ ಸೂಚನೆ ಮೇಲೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಏಳು ವರ್ಷಗಳಿಂದ ಕೇವಲ ಹಿಂದಿನ ಸರ್ಕಾರದ ಬಾಂಡ್ ಖರೀದಿಯ ಸಾಲ ತೀರಿಸಲಾಗುತ್ತಿದೆ ಎಂದು ಸುಳ್ಳು ಹೇಳುತ್ತ ತೆರಿಗೆ ವಸೂಲಿ ಮಾಡಲಾಗುತ್ತಿದೆ. ಕರ್ನಾಟಕ ಒಂದರಲ್ಲೇ 1.5ಲಕ್ಷ ರೂ ಪೆಟ್ರೋಲ್, ಡಿಸೇಲ್ನಿಂದ ತೆರಿಗೆ ಸಂಗ್ರಹವಾಗಿದೆ. ಕೇಂದ್ರ ಸರ್ಕಾರ 23 ಲಕ್ಷ ಕೋಟಿ ರೂ. ಸಂಗ್ರಹಿಸಿದೆ. ಅಷ್ಟೊಂದು ಹಣ ಎಲ್ಲಿದೆ? ಎಂದು ಪ್ರಶ್ನಿಸಿದರು.
ಇಡ್ಲಿ ವಡೆ ರೇಟ್ ಕೂಡ ಹೆಚ್ಚಾಯ್ತು!
ತಮಿಳುನಾಡು ಮುಖ್ಯಮಂತ್ರಿ ಸ್ಥಳೀಯವಾಗಿ 3 ರೂ. ತೆರಿಗೆ ಕಡಿತ ಮಾಡಿದ್ದಾರೆ. ಅಲ್ಲಿನ ಸಿಎಂಗೆ ಸಾಧ್ಯವಾಗುವುದಾದರೆ, ನಮ್ಮ ಸಿಎಂಗೆ ಯಾಕೆ ಸಾಧ್ಯವಾಗುವುದಿಲ್ಲ. 22 ರೂ ಇದ್ದ ಒಂದು ಪ್ಲೇಟ್ ಇಡ್ಲಿ ವಡೆಗೆ 39 ರೂ. ಕೊಡಬೇಕಾಗಿದೆ. ಒಂದು ಪ್ಲೇಟ್ ದೋಸೆಗೆ 100 ರೂ. ಕೊಡಬೇಕಾಗಿದೆ. 85 ರೂ. ಅಡುಗೆ ಎಣ್ಣೆ 200 ರೂ, ಆಗಿದೆ. ಹೀಗಾದರೆ ಸಾಮಾನ್ಯ ಜನರು ಹೇಗೆ ಬದುಕಲು ಸಾಧ್ಯ ಎಂದು ಸಿದ್ದರಾಮಯ್ಯ ಇದೇ ವೇಳೆ ಪ್ರಶ್ನಿಸಿದರು.
ಮನಮೋಹನ್ ಸಿಂಗ್ ಅವಧಿಯಲ್ಲಿ ಗ್ಯಾಸ್ ಬೆಲೆ 400 ರೂ. ಇತ್ತು. ಈಗ 900 ರೂ. ಆಗಿದೆ. ಪ್ರಧಾನಿ ನರೇಂದ್ರ ಮೋದಿ ನಮ್ಮ ಸಹೋದರಿಯರು ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿ ಕಣ್ಣೀರು ಹಾಕುತ್ತಿದ್ದಾರೆ ಎಂದು ಉಜ್ವಲ ಯೋಜನೆ ಜಾರಿಗೆ ತಂದರು. ಆದರೆ, ಸಬ್ಸಿಡಿ ನಿಲ್ಲಿಸಿರುವುದರಿಂದ ಶೇಕಡಾ 36 ರಷ್ಟು ಗ್ಯಾಸ್ ಬಳಕೆ ನಿಲ್ಲಿಸಿದ್ದಾರೆ ಎಂದು ಹೇಳಿದರು.
ಹುಷಾರಾಗಿರಪ್ಪ ಯಡಿಯೂರಪ್ಪ ಅವರನ್ನೇ ಇಳಿಸಿದ್ದಾರೆ!
ಬೆಲೆ ಏರಿಕೆಯ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿರುವಾಗ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಪಕ್ಷದ ನಾಯಕರ ಪ್ರಶ್ನೆಗಳಿಗೆ ನಾಳೆ ಉತ್ತರ ಕೊಡುತ್ತೇನೆ ಎಂದರು.
ಜೊತೆಗೆ ನಿಮಗೆ ಭಾಷಣ ಬರೆದು ಕೊಟ್ಟವರು ಹಾಗೂ ನಿಮ್ಮ ಹಿಂದೆ ಕಳಿತವರು ನಿಮ್ಮನ್ನು ಸಂಸತ್ತಿಗೆ ಕಳಿಸಲು ಯೋಜನೆ ರೂಪಿಸಿದಂತಿದೆ. ಅದಕ್ಕಾಗಿ ಪಾರ್ಲಿಮೆಂಟ್ ರೇಂಜ್ಗೆ ಭಾಷಣ ಬರೆದು ಕೊಟ್ಟಿದ್ದಾರೆ ಹುಷಾರಾಗಿರಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಿಎಂ ಬೊಮ್ಮಾಯಿ ಕಾಲೆಳೆದರು.
ಆಗ ಸಿದ್ದರಾಮಯ್ಯ, "ನೀನು ಎಸ್.ಆರ್. ಬೊಮ್ಮಾಯಿ ಅವರ ಮಗ ನೀನು ಪೂಣ೯ ಅವಧಿ ಮುಗಿಸಬೇಕೆಂಬ ಆಸೆ ಇದೆ. ಯಡಿಯೂರಪ್ಪ ಅವರನ್ನೇ ಬಿಜೆಪಿಯವರು ಕೆಳಗಿಳಿಸಿದ್ದಾರೆ. ನೀನು ಹುಷಾರಾಗಿರು ಯಾವಾಗ ಕಾಲು ಎಳೆಯುತ್ತಾರೊ ಗೊತ್ತಿಲ್ಲ ಎಂದರು. ಆಗ ಸಿಎಂ ಬೊಮ್ಮಾಯಿ ನನಗೆ ನಮ್ಮ ನಾಯಕರು ಹಾಗೂ ನಮ್ಮ ಶಾಸಕರ ಬೆಂಬಲ ಇದೆ ಎಂದು ಸಿದ್ದರಾಮಯ್ಯರಿಗೆ ತಿರುಗೇಟು ಕೊಟ್ಟಿದ್ದು ವಿಶೇಷವಾಗಿತ್ತು.
Recommended Video
ಸುಬ್ರಮಣಿಯನ್ ಸ್ವಾಮಿ ವಿಷಯದಲ್ಲಿ ವಾಗ್ವಾದ!
ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯ ಬಗ್ಗೆ ಬಿಜೆಪಿಯ ರಾಜ್ಯ ಸಭಾ ಸದಸ್ಯ ಸುಬ್ರಮಣ್ಯ ಸ್ವಾಮಿ ಅವರೇ ವಿರೋಧ ಮಾಡಿದ್ದಾರೆ. ಸೀತೆಯ ನೇಪಾಳದಲ್ಲಿ 53 ರೂ. ರಾವಣ ಲಂಕೆಯಲ್ಲಿ 50 ರೂ. ಆದರೆ, ರಾಮನ ಭಾರತದಲ್ಲಿ 93 ರೂ. ಇದೆ ಎಂದು ಆರೋಪಿಸಿದ್ದಾರೆ ಎಂದು ಸಿದ್ದರಾಮಯ್ಯ ವಿವರಿಸಿದರು.
ಅವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಸುಬ್ರಮಣ್ಯ ಸ್ವಾಮಿ ಒಬ್ಬ ಹವ್ಯಾಸಿ ರಾಜಕಾರಣಿ ಅವರು ಸ್ವಭಾವವೇ ಹಾಗೇ ಅವರು ಯಾವುದೇ ಪಕ್ಷದಲ್ಲಿದ್ದರೂ, ತಮ್ಮ ನಿಲುವು ನೇರವಾಗಿ ಹೇಳುತ್ತಾರೆ. ಹಿಂದೆ ಜನತಾ ಪಕ್ಷದಲ್ಲಿದ್ದಾಗಲೂ ವಿರೋಧ ಮಾಡಿದ್ದರು. ಚಂದ್ರಶೇಖರ ಪ್ರಧಾನಿ ಆಗಿದ್ದಾಗ ನೇರವಾಗಿ ಪ್ರಧಾನಿ ವಿರುದ್ಧವೇ ವಾಗ್ದಾಳಿ ನಡೆಸಿದ್ದರು ಎಂದರು.
ಆಗ ಸಿದ್ದರಾಮಯ್ಯ ಅವರು ನಿಮ್ಮ ಪಕ್ಷದ ವಿರುದ್ಧ ಮಾತನಾಡಿದ್ದಾರೆ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಎಂದರು. ಆಗ ಸಿಎಂ ಬೊಮ್ಮಾಯಿ, "ಯಾವುದೇ ಪಕ್ಷದಲ್ಲಿದ್ದರೂ ಅವರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಅದನ್ನು ಅಲ್ಲಗಳೆಯುವಂತಿಲ್ಲ" ಎಂದರು.