ಕರ್ನಾಟಕ ಕಾರಾಗೃಹಗಳ ಸ್ಥಿತಿಗತಿ ಕುರಿತು ವರದಿ ನೀಡಲು ಹೈಕೋರ್ಟ್ ಸೂಚನೆ
ಬೆಂಗಳೂರು, ಏಪ್ರಿಲ್ 16: ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳಿಗೆ ಕಲ್ಪಿಸಿರುವ ಮೂಲ ಸೌಕರ್ಯ, ವಾಸ್ತವ ಸ್ಥಿತಿ ಕುರಿತು ತುರ್ತು ಗಮನ ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳು ಮೂಲ ಸೌಕರ್ಯವಿಲ್ಲದೇ ನಿಕೃಷ್ಟ ಜೀವನ ಸಾಗಿಸುತ್ತಿರುವ ಬಗ್ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ಚಾಟಿ ಬೀಸಿದೆ.
ಕಾರಾಗೃಹಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಕೈದಿಗಳನ್ನು ತುಂಬಿರುವ ಬಗ್ಗೆ, ಅಸ್ವಚ್ಛತೆ, ಶುಚಿ ಇಲ್ಲದ ಆಹಾರ, ವೈದ್ಯಕೀಯ ಸೌಲಭ್ಯ ಕುರಿತು ತುರ್ತು ಗಮನ ಹರಿಸುವಂತೆ ಮುಖ್ಯ ನ್ಯಾಯಮೂರ್ತಿಗಳು ನಿರ್ದೇಶನ ನೀಡಿದ್ದಾರೆ. ಇನ್ನು ಕಾರಾಗೃಹಗಳ ಜೈಲು ಆಸ್ಪತ್ರೆಗಳಲ್ಲಿ ಖಾಲಿಯಿರುವ ಹುದ್ದೆಗಳು, ಅವನ್ನು ತುಂಬಲು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ವಿವರಗಳನ್ನು ಹೈಕೋರ್ಟ್ ಹೇಳಿದೆ. ಅರ್ಜಿಯ ವಿಚಾರಣೆಯನ್ನು ಜೂ. 4ಕ್ಕೆ ನ್ಯಾಯಾಲಯ ಮುಂದೂಡಿದೆ. ಕೊರೋನಾ ಭೀತಿ ಎದುರಾದ ಬೆನ್ನಲ್ಲೇ ನ್ಯಾಯಾಲಯ ಕಾರಾಗೃಹಗಳ ಕೈದಿಗಳ ಆರೋಗ್ಯ ರಕ್ಷಣೆ ವಿಚಾರದಲ್ಲಿ ನಿರ್ದೇಶನ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ನಾಂದಿ ಹಾಡಿದೆ.
ಹತ್ತು ಕೈದಿಗಳಿಗೆ ಒಂದು ಟಾಯ್ಲೆಟ್
ಹೈಕೋರ್ಟ್ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಿದಂತೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ನಿಯಮದ ಪ್ರಕಾರ ಅರು ಮಂದಿಗೆ ಒಂದು ಶೌಚಾಲಯ ನೀಡಬೇಕು. ಆದರೆ ವಾಸ್ತವದಲ್ಲಿ ಹತ್ತು ಕೈದಿಗಳು ಒಂದು ಶೌಚಾಲಯ ಬಳಸುತ್ತಿದ್ದಾರೆ. ಮಾದರಿ ಕಾರಾಗೃಹ ನಿಯಮಗಳ ಪ್ರಕಾರ ಪ್ರತಿ ಹತ್ತು ಕೈದಿಗಳಿಗೆ ಒಂದು ಶುಚಿತ್ವದ ಸ್ನಾನದ ಗೃಹ ಕಲ್ಪಿಸಬೇಕು. ಆದರೆ ಬೆಂಗಳೂರು ಕಾರಾಗೃಹದಲ್ಲಿ ಹದಿನೈದು ಕೈದಿಗಳಿಗೆ ಒಂದು ಶುಚಿತ್ವ ಇಲ್ಲದ ಸ್ನಾನಗೃಹ ಕಲ್ಪಿಸಲಾಗಿದೆ. ಶೌಚಾಲಯ ಮಾತ್ರವಲ್ಲ, ಕಾರಾಗೃಹ ಸೆಲ್ಗಳು ಕೂಡ ಸ್ವಚ್ಛತೆಯಿಲ್ಲದೇ ಸಾಂಕ್ರಾಮಿಕ ರೋಗ ಹರಡುವ ತಾಣವಾಗಿ ರೂಪಾಂತರಗೊಂಡಿವೆ.
ಕಾರಾಗೃಹಗಳಲ್ಲಿ ತುಂಬಿ ತುಳುಕುತ್ತಿವೆ
ಕಾರಾಗೃಹದಲ್ಲಿ ಇರುವ ಸೆಲ್ಗಳು ಇಷ್ಟು ವಿಸ್ತೀರ್ಣ ಹೊಂದಿವೆ. ಯಾವ ರೀತಿಯ ಸೆಲ್ಗಳು ಇವೆ. ಒಂದು ಸೆಲ್ನಲ್ಲಿ ಮಾದರಿ ಕಾರಾಗೃಹ ನಿಯಮದ ಪ್ರಕಾರ ಎಷ್ಟು ಕೈದಿಗಳನ್ನು ಇರಿಸಬೇಕು ಎಂಬುದರ ಬಗ್ಗೆ ಹೈಕೋರ್ಟ್ ವಿವರ ಕೇಳಿದೆ. ಆದರೆ ಕಾರಾಗೃಹ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಕೈದಿಗಳನ್ನು ತುಂಬಲಾಗಿದೆ. ಕೈದಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಸೆಲ್ ನಿರ್ಮಾಣದ ಪ್ರಸ್ತಾವನೆ ಸರ್ಕಾರದ ಹಂತದಲ್ಲಿ ಕಡತ ಬಾಕಿ ಇರುವ ಬಗ್ಗೆ ಪ್ರಸ್ತಾಪಿಸಲಾಗಿದೆ.
ತಜ್ಞರ ವರದಿ ಕೊಡಲು ಸೂಚನೆ
ರಾಜ್ಯದ ಕಾರಾಗೃಹಗಳಲ್ಲಿ ಇರುವ ಕೈದಿಗಳಿಗ ಗುಣಮಟ್ಟದ ಆಹಾರ ನೀಡಲಾಗುತ್ತಿದೆಯೇ ? ಗುಣಮಟ್ಟದ ಆಹಾರ ತಯಾರಿಕೆ, ಆಹಾರ ಗುಣಮಟ್ಟ ಕಾಯ್ದುಕೊಳ್ಳಲು ಕೈಗೊಂಡಿರುವ ಕ್ರಮಗಳ ಬಗ್ಗೆ ತಜ್ಞರ ವರದಿ ನೀಡುವಂತೆ ನ್ಯಾಯಾಲಯ ಸೂಚಿಸಿದೆ. ಯಾವ ರೀತಿಯ ಆಹಾರ ನೀಡಲಾಗುತ್ತಿದೆ. ಎಷ್ಟು ಪ್ರಮಾಣ ನೀಡಲಾಗುತ್ತಿದೆ. ಕಾರಾಗೃಹಗಳಲ್ಲಿ ಇರುವ ಅಡುಗೆ ಮನೆಗಳು ಮೂಲ ಸೌಲಭ್ಯದಿಂದ ಕೂಡಿವೆಯೇ ? ಕಿಚನ್ ಗಳಲ್ಲಿ ಊಟ ತಯಾರಿಸುತ್ತಿರುವ ನುರಿತ ಅಡುಗೆ ತಯಾರಕರ ವಿವರ ಕುರಿತ ವರದಿ ನೀಡಲು ಸೂಚಿಸಲಾಗಿದೆ.
Recommended Video
ಸ್ನೇಹಿತರ ಭೇಟಿಗೂ ಮುಕ್ತ ಕಾಲವಕಾಶ
ಇನ್ನು ಕೈದಿಗಳನ್ನು ನೋಡಲು ಹೋಗುವ ಕುಟುಂಬದವರಿಗೆ ಹಾಗೂ ಸ್ನೇಹಿತರು ಭೇಟಿ ಮಾಡಲು ಯಾವ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ ಎಂಬುದರ ಬಗ್ಗೆ ಸುಪ್ರೀಂಕೋರ್ಟ್ ನಿರ್ದೇಶನ ಪಾಲನೆ ಮಾಡಲಾಗುತ್ತಿದೆಯೇ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಅಲ್ಲದೇ ಕೈದಿಗಳು ತಂಗಿರುವ ಕಾರಾಗೃಹಗಳಿಗೆ ಹೊಂದಿಕೊಂಡಿರುವ ಜೈಲು ಆಸ್ಪತ್ರೆಗಳ ಸ್ಥಿತಿ ಹೇಗಿದೆ. ಅಗತ್ಯ ಹಾಸಿಗೆ ಸೌಲಭ್ಯ ಕಲ್ಪಿಸಲಾಗಿದೆಯೇ ? ಆ ಆಸ್ಪತ್ರೆಗಳಿಗೆ ಅಗತ್ಯ ಇರುವ ವೈದ್ಯಕೀಯ ಸಿಬ್ಬಂದಿ ಇದ್ದಾರೆಯೇ ಎಂಬುದರ ವರದಿ ನೀಡಲು ಹೈಕೋರ್ಟ್ ನಿರ್ದೇಶನ ನೀಡಿದೆ.