'ಕಾವೇರಿ ಕೂಗು' ಯೋಜನೆಗೆ ಹಣ ಸಂಗ್ರಹ: ಸದ್ಗುರು ಫೌಂಡೇಷನ್ಗೆ ಹೈಕೋರ್ಟ್ ತರಾಟೆ
ಬೆಂಗಳೂರು, ಜನವರಿ 7: ಕಾವೇರಿ ನದಿಯ ಪುನಶ್ಚೇತನಕ್ಕಾಗಿ ಈಶಾ ಫೌಂಡೇಷನ್ನ ಸ್ಥಾಪಕ ಜಗ್ಗಿ ವಾಸುದೇವ್ ನಡೆಸುತ್ತಿರುವ ಕಾವೇರಿ ಕೂಗು (ಕಾವೇರಿ ಕಾಲಿಂಗ್) ಅಭಿಯಾನಕ್ಕೆ ಹಣ ಸಂಗ್ರಹಿಸುತ್ತಿರುವುದರ ಕುರಿತು ರಾಜ್ಯ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಭಿಯಾನಕ್ಕೆ ಸಾರ್ವಜನಿಕರಿಂದ ಬಲವಂತವಾಗಿ ದೇಣಿಗೆ ಸಂಗ್ರಹಿಸುವ ವಿಚಾರದಲ್ಲಿ ಕಿಡಿಕಾರಿರುವ ಹೈಕೋರ್ಟ್, ಅಧ್ಯಾತ್ಮದ ಹೆಸರಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಉತ್ತೇಜನ ನೀಡುವುದಿಲ್ಲ ಎಂದು ಹೇಳಿದೆ.
ಕೊಯಮತ್ತೂರು ಮೂಲದ ಈಶಾ ಫೌಂಡೇಷನ್ನ ಜಗ್ಗಿ ವಾಸುದೇವ್, ಒಣಗುತ್ತಿರುವ ನದಿಯ ಪುನಶ್ಚೇತನಕ್ಕಾಗಿ 'ಕಾವೇರಿ ಕಾಲಿಂಗ್' ಅಭಿಯಾನ ಆರಂಭಿಸಿದ್ದರು. ಕಾವೇರಿ ನದಿ ಹುಟ್ಟುವಲ್ಲಿನಿಂದ ಅದು ಸಾಗುವ ಉದ್ದಕ್ಕೂ ತೀರದಲ್ಲಿ ಗಿಡಗಳನ್ನು ನೆಡುವುದು ಅಭಿಯಾನದ ಉದ್ದೇಶ. ಇದಕ್ಕಾಗಿ ಒಂದು ಗಿಡಕ್ಕೆ 42 ರೂ, ನಂತೆ ಜನರಿಂದ ಹಣ ಸಂಗ್ರಹ ಮಾಡಲಾಗುತ್ತಿದೆ.
ಗಿಡ ನೆಡಲು ಕೋಟಿಗಟ್ಟಲೆ ಹಣ ಸಂಗ್ರಹ: ಸದ್ಗುರು ವಿರುದ್ಧ ದೂರು
ಈಶಾ ಫೌಂಡೇಷನ್ನ ಅಭಿಯಾನದಲ್ಲಿ ಜನರಿಂದ ಅನಧಿಕೃತ ಮತ್ತು ಒತ್ತಾಯಪೂರ್ವಕವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ ವಕೀಲ ಎ.ವಿ. ಅಮರನಾಥನ್ ಕಳೆದ ವರ್ಷ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರನ್ನು ಒಳಗೊಂಡ ನ್ಯಾಯಪೀಠ ಮಂಗಳವಾರ ವಿಚಾರಣೆಗೆ ಒಳಪಡಿಸಿತು.
ಅಧ್ಯಾತ್ಮವೂ ಕಾನೂನಿಗೆ ಒಳಪಡುತ್ತದೆ
ಅಧ್ಯಾತ್ಮದ ವಿಚಾರಗಳು ಕೂಡ ಕಾನೂನಿನ ಚೌಕಟ್ಟಿಗೆ ಒಳಪಡಬೇಕು. ಅಧ್ಯಾತ್ಮದ ಹೆಸರಿನಲ್ಲಿ ನೀವೆಲ್ಲ ಏನು ಮಾಡುತ್ತಿದ್ದೀರಿ? ನೀವು ಲಾಭದ ಸಂಸ್ಥೆಯ ವ್ಯಾಪ್ತಿಯಲ್ಲಿಲ್ಲ, ನಿಮಗೆ ಕಾನೂನುಗಳು ಒಳಪಡುವುದಿಲ್ಲ ಎಂಬ ಭಾವನೆಗಳನ್ನು ಹೊಂದಬೇಡಿ ಎಂದು ಎ.ಎಸ್ ಓಕಾ ಹೇಳಿದರು.
ಯಾವ ಅಧಿಕಾರದಲ್ಲಿ ಹಣ ಸಂಗ್ರಹಿಸುತ್ತಿದ್ದೀರಿ?
ನೀವು ಹಣ ಸಂಗ್ರಹಿಸಲು ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕಾರ ಪಡೆದುಕೊಂಡಿಲ್ಲ. ಯಾವ ಅಧಿಕಾರದಲ್ಲಿ ನೀವು ರೈತರಿಂದ ಹಣ ಸಂಗ್ರಹಿಸುತ್ತಿದ್ದೀರಿ? ನಿಮ್ಮದು ನೋಂದಾಯಿತ ಸಂಸ್ಥೆಯಲ್ಲ. ಅದನ್ನು ಯಾರು ಯಾವ ಕಾನೂನಿನ ಅಡಿಯಲ್ಲಿ ಸ್ಥಾಪಿಸಿದರು? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿಯಾದ ಸದ್ಗುರು
ಅಫಿಡವಿಟ್ ಸಲ್ಲಿಸಿದ್ದೀರಾ?
ಈಶಾ ಫೌಂಡೇಷನ್ ಪರ ವಕೀಲರಿಂದ ಈ ಪ್ರಶ್ನೆಗಳಿಗೆ ಪ್ರತಿಕ್ರಿಯೆ ಪಡೆದ ಹೈಕೋರ್ಟ್, ನದಿ ಪುನಶ್ಚೇತನದ ಕುರಿತು ಅರಿವು ಮೂಡಿಸುವುದು ಒಳ್ಳೆಯ ಉದ್ದೇಶ ಸರಿ. ಆದರೆ ಅದಕ್ಕಾಗಿ ಜನರು ಹಣ ನೀಡುವಂತೆ ಒತ್ತಾಯ ಮಾಡುವುದು ಸರಿಯಲ್ಲ ಎಂದಿತು.
'ಜನರು ಹಣ ನೀಡುವಂತೆ ನೀವು ಒತ್ತಾಯ ಮಾಡಿಲ್ಲ ಎನ್ನುವುದನ್ನು ಪ್ರತಿಪಾದಿಸಿರುವ ಅಫಿಡವಿಟ್ ಎಲ್ಲಿದೆ?' ಎಂದು ನ್ಯಾ. ಓಕಾ ಪ್ರಶ್ನಿಸಿದರು.
ಯಾವುದಾದರೂ ತನಿಖೆ ನಡೆದಿದೆಯೇ?
ಈ ಪ್ರಕರಣ ಕುರಿತು ಯಾವುದಾದರೂ ತನಿಖೆ ನಡೆದಿದೆಯೇ ಎಂದು ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಅವರನ್ನು ನ್ಯಾಯಪೀಠ ಕೇಳಿತು.
ಸೆ.1 ರಿಂದ ಸದ್ಗುರು ನೇತೃತ್ವದಲ್ಲಿ Rally for Rivers ಆರಂಭ
'ಸರ್ಕಾರ ಸುಮ್ಮನೆ ತಡೆಯಲು ಆಗುವುದಿಲ್ಲ. ನೀವು ಯಾವ ತನಿಖೆ ಮಾಡಿದ್ದೀರಿ? ಅವರು ಯಾರಿಂದ ಹಣ ಸಂಗ್ರಹಿಸುತ್ತಿದ್ದಾರೆ ಎಂದು ನೀವು ತನಿಖೆ ಮಾಡಬೇಕಿತ್ತು. ಒಬ್ಬ ನಾಗರಿಕ ಆರೋಪ ಮಾಡಿದಾಗ ನೀವು ತನಿಖೆಯನ್ನು ನಡೆಸಬೇಕಾಗುತ್ತದೆ. ಯಾವುದೋ ಅಧ್ಯಾತ್ಮ ಕಾರ್ಯಕ್ಕಾಗಿ ಸರ್ಕಾರವು ಪ್ರಭಾವಿತವಾಗಬಾರದು' ಎಂದು ನ್ಯಾ. ಓಕಾ ತೀಕ್ಷ್ಣವಾಗಿ ಹೇಳಿದರು.
ಹೇಗೆ ಹಣ ಸಂಗ್ರಹಿಸಲಾಗಿದೆ, ತಿಳಿಸಿ?
ಕಾವೇರಿ ಕಾಲಿಂಗ್ ಅಭಿಯಾನಕ್ಕಾಗಿ ಇದುವರೆಗೂ ಎಷ್ಟು ಹಣವನ್ನು ಸಂಗ್ರಹಿಸಲಾಗಿದೆ ಮತ್ತು ಯಾವ ಯಾವ ಮಾರ್ಗಗಳಲ್ಲಿ ಹಣ ಸಂಗ್ರಹ ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸುವಂತೆ ಈಶಾ ಫೌಂಡೇಷನ್ಗೆ ನ್ಯಾ. ಓಕಾ ಸೂಚಿಸಿದರು. ಮುಂದಿನ ವಿಚಾರಣೆಯನ್ನು ಫೆ. 12ಕ್ಕೆ ನಿಗದಿಪಡಿಸಲಾಗಿದೆ.
ಸರ್ಕಾರಿ ಭೂಮಿಯಲ್ಲಿ ಗಿಡ ನೆಡಲು ಹಣ ಸಂಗ್ರಹ
ಈಶಾ ಫೌಂಡೇಷನ್, ಕಾವೇರಿ ಕಾಲಿಂಗ್ ಹೆಸರಿನಲ್ಲಿ ಸರ್ಕಾರಿ ಭೂಮಿಯಲ್ಲಿ ಗಿಡಗಳನ್ನು ನೆಡುತ್ತಿದೆ. ಅದಕ್ಕಾಗಿ ಜನರಿಂದ ಹಣ ಸಂಗ್ರಹ ಮಾಡುತ್ತಿದೆ ಎಂದು ಅಮರನಾಥ್ ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಫೌಂಡೇಷನ್ ಕೈಗೊಂಡಿರುವ ಯೋಜನೆಯ ಸಾಧಕ ಮತ್ತು ಬಾದಕಗಳ ಕುರಿತು ಅಧ್ಯಯನ ಮಾಡದೆಯೇ ಖಾಸಗಿ ಸಂಸ್ಥೆಯೊಂದಕ್ಕೆ ತನ್ನ ಭೂಮಿಯಲ್ಲಿ ಗಿಡನೆಡಲು ಸರ್ಕಾರ ಹೇಗೆ ಅವಕಾಶ ನೀಡಿದೆ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಫೌಂಡೇಷನ್ ತನ್ನ ಅಭಿಯಾನದಲ್ಲಿ 10,626 ಕೋಟಿ ರೂ. ದೇಣಿಗೆ ಸಂಗ್ರಹಿಸುವ ನಿರೀಕ್ಷೆಯಿದ್ದು, ಜನರಿಂದ ಇಷ್ಟು ಭಾರಿ ಪ್ರಮಾಣದ ಹಣ ಸಂಗ್ರಹಿಸುವುದು ಕಳವಳಕಾರಿಯಾಗಿದೆ ಎಂದು ವಾದಿಸಿದ್ದಾರೆ.