ಕೊವಿಡ್ 19 ಭೀತಿ ಹೆಚ್ಚಳ: 9 ಜಿಲ್ಲೆಗಳ ಕೋರ್ಟ್ ಪ್ರವೇಶ ನಿರ್ಬಂಧ
ಬೆಂಗಳೂರು, ಏಪ್ರಿಲ್ 16: ಕರ್ನಾಟಕದಲ್ಲಿ ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 9 ಜಿಲ್ಲೆಗಳ ನ್ಯಾಯಾಲಯಗಳಲ್ಲಿ ತುರ್ತು ಕ್ರಮ ಕೈಗೊಳ್ಳಲು ಹೈಕೋರ್ಟ್ ಸೂಚಿಸಿದೆ.
ಖುದ್ದು ಹಾಜರಾತಿಗೆ ಇಂದಿನಿಂದ ಅನಿರ್ದಿಷ್ಟಾವಧಿಗೆ ನಿಷೇಧ ವಿಧಿಸಲಾಗಿದೆ. ಹೈಕೋರ್ಟ್ನ ಬೆಂಗಳೂರಿನ ಪ್ರಧಾನ ಪೀಠ ಮತ್ತು ಕಲಬುರ್ಗಿ ಹಾಗೂ ಧಾರವಾಡದ ಪೀಠಗಳಿಗೆ ದಾವೆದಾರರು ಮತ್ತು ಪಕ್ಷಕಾರರ ಭೇಟಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಜೊತೆಗೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳಲ್ಲಿನ ಸಾಕ್ಷ್ಯ ದಾಖಲೀಕರಣವನ್ನು ನಿರ್ಬಂಧಿಸಲಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮೀಣ, ಮೈಸೂರು, ಹಾಸನ, ತುಮಕೂರು, ಬಳ್ಳಾರಿ, ಕಲಬುರ್ಗಿ, ಬೀದರ್ ಮತ್ತು ದಕ್ಷಿಣ ಕನ್ನಡ ಸೇರಿದಂತೆ ಒಂಭತ್ತು ಜಿಲ್ಲೆಗಳಲ್ಲಿ ದಾವೆದಾರರು ನ್ಯಾಯಾಲಯಕ್ಕೆ ಬರುವುದಕ್ಕೂ ಶುಕ್ರವಾರ(ಏಪ್ರಿಲ್ 16)ದಿಂದ ನಿಷೇಧ ಹೇರಲಾಗಿದೆ.
ನ್ಯಾಯಾಲಯದಿಂದ ವಿಶೇಷ ಆದೇಶಗಳು ಇದ್ದರೆ ಮಾತ್ರ ದಾವೆದಾರರು ನ್ಯಾಯಾಲಯಕ್ಕೆ ಆಗಮಿಸಬಹುದಾಗಿದೆ. ಇಲ್ಲವಾದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರ ಕಲಾಪದಲ್ಲಿ ಭಾಗವಹಿಸಬೇಕಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಆದೇಶಿಸಿದ್ದಾರೆ.
ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ಕಾಲಮಿತಿ ನಿಗದಿಗೊಳಿಸಿದ ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯ ದಾಖಲೆಗೆ ನಿಷೇಧ ವಿಧಿಸಲಾಗಿದೆ. ಕಾಲಮಿತಿ ನಿಗದಿಗೊಳಿಸಿದ ಪ್ರಕರಣಗಳು ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಬಹುತೇಕ ಸಾಕ್ಷ್ಯ ದಾಖಲೆ ಪೂರ್ಣಗೊಂಡಿದ್ದರೆ ಅವುಗಳನ್ನು ಮಾತ್ರ ಮುಂದುವರೆಸಬಹುದಾಗಿದೆ.
Recommended Video
ಪೊಲೀಸ್ ಅಧಿಕಾರಿಗಳು ಮತ್ತು ಕಸ್ಟಡಿಯಲ್ಲಿರುವ ಆರೋಪಿಗಳನ್ನು ಹೊರತುಪಡಿಸಿ ಉಳಿದ ಯಾರೂ ನ್ಯಾಯಾಲಯದ ಆವರಣ ಪ್ರವೇಶಿಸುವಂತಿಲ್ಲ. ಪಕ್ಷಕಾರರು ಮತ್ತು ದೂರುದಾರರು ನ್ಯಾಯಾಲಯದ ಕೊಠಡಿಗೆ ಬರಬೇಕಿದ್ದರೆ ಆ ಸಂಬಂಧ ನಿಗದಿತ ನ್ಯಾಯಾಲಯಗಳು ವಿಶೇಷ ಆದೇಶ ಹೊರಡಿಸಬೇಕು ಎಂದು ಸೂಚಿಸಿದ್ದಾರೆ. (ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)