ಸಾರಿಗೆ ಮುಷ್ಕರದಿಂದ ಆಗಿರುವ ನಷ್ಟ ಕುರಿತು ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು, ಆ. 18: ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ನೌಕರರ ಮುಷ್ಕರಕ್ಕೆ ಪ್ರೇರಣೆ ನೀಡಿ ಮುಂದಾಳತ್ವ ನಾಯಕ ಎಂದು ಬಿಂಬಿಸಿಕೊಂಡಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಹೋರಾಟಗಾರರಿಗೆ ದೊಡ್ಡ ಮಟ್ಟದ ದಂಡ ಬೀಳುವ ಲಕ್ಷಣ ಗೋಚರಿಸುತ್ತಿದೆ.
ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನೌಕರರ ಮುಷ್ಕರದಿಂದ ಆಗಿರುವ ನಷ್ಟದ ಕುರಿತು ತನಿಖಾ ವರದಿಯನ್ನು ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ. ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿ ನೌಕರರ ಮುಷ್ಕರಕ್ಕೆ ಸಂಬಂಧಿಸಿದಂತೆ ಸರ್ಕಾರ ಸಲ್ಲಿಸಿರುವ ತನಿಖಾ ವರದಿಯನ್ನು ಅಂಗೀಕರಿಸಲು ಮುಖ್ಯ ನ್ಯಾಯಮೂರ್ತಿ ಅವರನ್ನು ಒಳಗೊಂಡ ಪೀಠ ನಿರಾಕರಿಸಿದೆ. ಸಾರಿಗೆ ನೌಕರರ ಮುಷ್ಕರದಿಂದ ಆಗಿರುವ ನಷ್ಟ ಕುರಿತ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಆ. 31 ರೊಳಗೆ ಸಲ್ಲಿಸಲು ಸೂಚಿಸಿದೆ.
ಸಾರಿಗೆ ನೌಕರರ ಮುಷ್ಕರದಿಂದ ಆಗಿರುವ ನಷ್ಟವನ್ನು ವಸೂಲಿ ಮಾಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆಯಿತು. ಸಾರಿಗೆ ನೌಕರರ ಮುಷ್ಕರದಿಂದ ನಡೆದ ಹೋರಾಟ, ಗಲಾಟೆಯಿಂದ ಆಗಿರುವ ಸಾರ್ವಜನಿಕ ನಷ್ಟದ ಕುರಿತು ಸರ್ಕಾರ ತನಿಖಾ ಪ್ರಗತಿ ವರದಿಯನ್ನು ಸಲ್ಲಿಸಿತು. ಆದರೆ ಸಿಸಿಟಿವಿ ದೃಶ್ಯ ಇಲ್ಲದ ಕಾರಣ ಸಲ್ಲಿಸಿದ ತನಿಖಾ ಪ್ರಗತಿ ವರದಿಯನ್ನು ಅಂಗೀಕರಿಸಲು ನ್ಯಾಯಪೀಠ ನಿರಾಕರಣೆ ಮಾಡಿತು.
ಕೋಡಿಹಳ್ಳಿಗೆ ಶುರುವಾಯ್ತಾ ಕಂಟಕ: ಯಾವುದೇ ಸಾರ್ವಜನಿಕ ಆಸ್ತಿ ನಷ್ಟವುಂಟು ಮಾಡಿದ ವ್ಯಕ್ತಿಯ ವಿರುದ್ಧ ಕೇಸು ದಾಖಲಿಸುವುದು ಮಾತ್ರವಲ್ಲದೇ ನಷ್ಟದ ಮೊತ್ತವನ್ನು ವಸೂಲಿ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ನ್ಯಾಯಾಲಯಗಳು ಈ ಕುರಿತು ಅನೇಕ ತೀರ್ಪು ನೀಡಿವೆ. ಬಿಎಂಟಿಸಿ ನೌಕರರ ಒಗ್ಗಟ್ಟು ನೋಡಿ, ರೈತರ ಹೋರಾಟ ಪಕ್ಕಕ್ಕೆ ಇಟ್ಟು ಸಾರಿಗೆ ನೌಕರರ ಶಾಂತಿಯುತ ಮುಷ್ಕರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಷ್ಕರ ನಿರತ ನೌಕರರ ಪರ ಧ್ವನಿಯೆತ್ತಿದ್ದ ಮುಖಂಡರನ್ನು ಬುಟ್ಟಿಗೆ ಹಾಕಿಕೊಂಡಿದ್ದ ಕೋಡಿಹಳ್ಳಿ ಚಂದ್ರಶೇಖರ್ ನಂತರ ಸಾರಿಗೆ ನೌಕರರ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ಸುಮಾರು ದಿನಗಳ ಕಾಲ ಸಾರಿಗೆ ನೌಕರರು ಸೇವೆಗೆ ಮರಳದಂತೆ ಪ್ರೇರಪಣೆ ಮಾಡಿದರು. ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆ ಸ್ಥಗಿತ ದಿಂದ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಬಸ್ ಸಂಚಾರ ವಿಲ್ಲದೇ ಜನರು ಹಿಡಿಶಾಪ ಹಾಕಿದ್ದರು. ಮಾತ್ರವಲ್ಲ, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿಗಮಗಳು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದವು. ಅಂತಿಮವಾಗಿ ಸರ್ಕಾರದ ಜತೆಗಿನ ಸಂಧಾನದಿಂದ ಸಾರಿಗೆ ನೌಕರರು ಮುಷ್ಕರ ಹಿಂಪಡೆದಿದ್ದರು.
ಹೋರಾಟದ ಅಗ್ರಗಣ್ಯ ನಾಯಕ ನಾನೇ. ನನ್ನಿಂದ ಸಾರಿಗೆ ನೌಕರರ ಸಮಸ್ಯೆ ಪರಹಾರ ಆಯಿತು ಎಂದೇ ಬೀಗುತ್ತಿದ್ದ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಬೀಗುತ್ತಿದ್ದರು. ರೈತ ಮುಖಂಡ ಸಾರಿಗೆ ನೌಕರರ ಮುಷ್ಕರದಲ್ಲಿ ಮಧ್ಯ ಪ್ರವೇಶ ಮಾಡಿದ್ದಕ್ಕೆ ಅಪಸ್ವರ ಕೇಳಿಬಂದಿತ್ತು. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತನ್ನನ್ನು ಸಮರ್ಥಸಿಕೊಂಡಿದ್ದರು. ಇದೀಗ ಸಾರಿಗೆ ನೌಕರರ ಮುಷ್ಕರದಿಂದ ಆಗಿರುವ ನಷ್ಟವನ್ನು ಹೋರಾಟಗಾರರಿಂದ ವಸೂಲಿ ಮಾಡುವಂತೆ ಸಲ್ಲಿಸಿರುವ ಸಾರ್ವಜನಿಕಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
Recommended Video
ಯಾವುದೇ ಹೋರಾಟ, ಮುಷ್ಕರದಿಂದ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟವುಂಟು ಮಾಡುವುದು ಅಪರಾಧ. ನಷ್ಟವುಂಟು ಮಾಡಿದವರಿಂದಲೇ ಅದನ್ನು ವಸೂಲಿ ಮಾಡಬಹುದು. ಬೆಂಗಳೂರಿನ ಡಿಜೆಹಳ್ಳಿ ಹಾಗೂ ಕೆ.ಜೆ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ನಷ್ಟ ಪರಿಹಾರ ಅನ್ವೇಷಣೆಗೆ ನಿವೃತ್ತ ನ್ಯಾ. ಕೆಂಪಣ್ಣ ನೇತೃತ್ವದಲ್ಲಿ ಕ್ಲೇಮ್ ಕಮೀಷನ್ ರಚನೆ ಮಾಡಲಾಗಿದೆ. ಅದೇ ರೀತಿ ಸಾರಿಗೆ ನೌಕರರಿಂದ ಲಕ್ಷಾಂತರ ಮಂದಿ ಪ್ರತ್ಯಕ್ಷವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಹೋರಾಟ ನಡೆಸಿದ ಸಾರಿಗೆ ನೌಕರರಿಂದಲೇ ನಷ್ಟ ವಸೂಲಿ ಮಾಡುವ ಪರಿಸ್ಥಿತಿ ಎದುರಾದರೆ ಕೋಡಿಹಳ್ಳಿ ಚಂದ್ರ ಶೇಖರ್ ಮಾತ್ರವಲ್ಲ, ಮುಖಂಡರಿಗೂ ಮುಷ್ಕರ ನಿರತ ಸಿಬ್ಬಂದಿಗೂ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.