ಒಂದೇ ದಿನ ನಳಿನ್ ಕುಮಾರ್ ಕಟೀಲ್ಗೆ ಎರಡೆರಡು ಗಿಫ್ಟ್
ಬೆಂಗಳೂರು, ಆಗಸ್ಟ್ 27: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ ಸಂಭ್ರಮದ ಬೆನ್ನಲ್ಲೇ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮತ್ತೊಂದು ಖುಷಿಯೂ ಸಿಕ್ಕಿದೆ. ಅವರ ವಿರುದ್ಧದ ಮಹತ್ವದ ಪ್ರಕರಣವೊಂದನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ.
Recommended Video
ದಕ್ಷಿಣ ಕನ್ನಡದ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಬಿಜೆಪಿ ಹೈಕಮಾಂಡ್ ನೇಮಕ ಮಾಡಿತ್ತು. ಇದುವರೆಗೂ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನಿರ್ವಹಿಸುತ್ತಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಂಗಳವಾರ ಬಿಜೆಪಿ ಕಚೇರಿ ಮುಂಭಾಗ ಅಧಿಕಾರ ಹಸ್ತಾಂತರ ಮಾಡಿದ್ದರು.
ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಖುಷಿಯಲ್ಲಿ ಇರುವಾಗಲೇ ಅವರಿಗೆ ಇನ್ನೊಂದು ಸಹಿ ಸುದ್ದಿ ದೊರಕಿದೆ. ಎರಡು ವರ್ಷದ ಹಿಂದೆ ಅವರ ವಿರುದ್ಧ ದಾಖಲಾದ ಪ್ರಕರಣದಿಂದ ಅವರು ಮುಕ್ತರಾಗಿದ್ದಾರೆ. ಬಿಜೆಪಿ ಕಾರ್ಯಕರ್ತರೊಬ್ಬರ ಹತ್ಯೆ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ದಕ್ಷಿಣ ಕನ್ನಡಕ್ಕೆ ಬೆಂಕಿ ಹಚ್ಚುತ್ತೇವೆ: ಸಂಸದ ಕಟೀಲ್
ಬಿಜೆಪಿ ಕಾರ್ಯಕರ್ತ ಕಾರ್ತಿಕ್ ರಾಜ್ ಅವರ ಹತ್ಯೆ ಖಂಡಿಸಿ ಮತ್ತು ಆರೋಪಿಗಳ ಬಂಧನಕ್ಕೆ ಆಗ್ರಹಿಸಿ 2017ರ ಜನವರಿ 1ರಂದು ಬಿಜೆಪಿ ಭಾರಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲೆಗೆ ಬೆಂಕಿ ಹಚ್ಚುವ ಬಗ್ಗೆ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ
ಬಂಟ್ವಾಳ ತಾಲ್ಲೂಕಿನ ಪಜೀರು ಗ್ರಾಮದ ಬಿಜೆಪಿ ಮುಖಂಡ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಉಮೇಶ್ ಗಾಣಿಗ ಅವರ ಮಗ ಕಾರ್ತಿಕ್ ರಾಜ್ ಅವರನ್ನು 2016ರ ಅಕ್ಟೋಬರ್ 22ರಂದು ಕೊಣಾಜೆ ಗಣೇಶ ಮಹಲ್ ಎಂಬಲ್ಲಿ ಬೆಳಿಗ್ಗೆ 5.30ರ ವೇಳೆಗೆ ಜಾಗಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಗಾಯಗೊಂಡಿದ್ದ ಕಾರ್ತಿಕ್ ರಾಜ್ ಅವರು ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಆರೆಸ್ಸೆಸ್ ಕಾರ್ಯಕರ್ತ ಕಾರ್ತಿಕ್ ರಾಜ್ ಕೊಲೆಗೆ ತಂಗಿಯಿಂದಲೇ ಸುಪಾರಿ!
ಬೆಂಕಿ ಇಡುವುದಾಗಿ ಹೇಳಿದ್ದ ಕಟೀಲ್
ಕಾರ್ತಿಕ್ ರಾಜ್ ಹತ್ಯೆಯಾಗಿ ಎರಡು ತಿಂಗಳು ಕಳೆದಿದ್ದರೂ ಆರೋಪಿಗಳ ಬಂಧನವಾಗಿರಲಿಲ್ಲ. ಆಗ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತ್ತು. 2017ರ ಜನವರಿ ಒಂದರಂದು ಕೊಣಾಜೆ ಪೊಲೀಸ್ ಠಾಣೆ ಮುಂಭಾಗ ನಡೆದ ಪ್ರತಿಭಟನಾ ಧರಣಿ ವೇಳೆ ಭಾಷಣ ಮಾಡಿದ್ದ ನಳಿನ್ ಕುಮಾರ್ ಕಟೀಲ್ ಅವರು, ಇನ್ನು ಹತ್ತು ದಿನಗಳ ಒಳಗೆ ಆರೋಪಿಗಳನ್ನು ಬಂಧಿಸದೆ ಇದ್ದರೆ ಇಡೀ ಜಿಲ್ಲೆಗೆ ಬೆಂಕಿ ಇಡಲೂ ಸಿದ್ಧ ಎಂದಿದ್ದರು.
ಪ್ರಕರಣ ವಜಾಗೊಳಿಸಿದ ನ್ಯಾಯಾಲಯ
ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕಟೀಲ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದು ಹೈಕೋರ್ಟ್ ಮೆಟ್ಟಿಲೇರಿತ್ತು. ತನಿಖೆಗೂ ಮುನ್ನ ಕಾನೂನು ಪ್ರಕ್ರಿಯೆಯನ್ನು ಪಾಲಿಸದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ವಜಾಗೊಳಿಸಿ ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರ ಏಕ ಸದಸ್ಯ ನ್ಯಾಯಪೀಠ ಮಂಗಳವಾರ ಆದೇಶ ಹೊರಡಿಸಿದೆ.
ಕಾರ್ತಿಕ್ ರಾಜ್ ಕೊಲೆ, ಜಿಹಾದಿ ಕೃತ್ಯ; ಯಡಿಯೂರಪ್ಪ
ತಂಗಿಯೇ ಹತ್ಯೆ ಆರೋಪಿ
ಈ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಆದರೆ, ಇದು ಯಾವುದೇ ಸಂಘಟನೆ ಅಥವಾ ಪಕ್ಷಗಳ ದ್ವೇಷದಿಂದ ನಡೆದಿರುವುದಲ್ಲ ಎನ್ನುವುದು ಬಳಿಕ ಗೊತ್ತಾಗಿತ್ತು. ಘಟನೆ ನಡೆದು ಸುಮಾರು ಆರು ತಿಂಗಳ ಬಳಿಕ 2017ರ ಏಪ್ರಿಲ್ನಲ್ಲಿ ಪೊಲೀಸರು ಕಾರ್ತಿಕ್ ರಾಜ್ ತಂಗಿ ಕಾವ್ಯಶ್ರೀ, ಆಕೆಯ ಸ್ನೇಹಿತ ಗೌತಮ್ ಮತ್ತು ಆತನ ಸಹೋದರ ಗೌರವ್ನನ್ನು ಬಂಧಿಸಿದ್ದರು. ಅಣ್ಣ ತಂಗಿ ನಡುವಿನ ವೈಷಮ್ಯದಿಂದ ಈ ಕೊನೆ ನಡೆದಿದೆ ಎನ್ನುವುದು ಬಹಿರಂಗವಾಗಿತ್ತು.