ರಾಜ್ಯಕ್ಕೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಒದಗಿಸಿ, ಕೇಂದ್ರಕ್ಕೆ ಕೋರ್ಟ್ ಸೂಚನೆ
ಬೆಂಗಳೂರು, ಮೇ 5: ''ರಾಜ್ಯಕ್ಕೆ 1,792 ಮೆಟ್ರಿಕ್ ಟನ್ ಆಮ್ಲಜನಕ ಅಗತ್ಯವಿದ್ದರೂ ಕೇಂದ್ರ ಸರ್ಕಾರ ಆಮ್ಲಜನಕ ಪೂರೈಕೆಯನ್ನು ಕೇವಲ 802ರಿಂದ 865 ಮೆಟ್ರಿಕ್ ಟನ್ಗೆ ಮಾತ್ರ ಏರಿಕೆ ಮಾಡಿದೆ'' ಎಂಬ ಅಂಶವನ್ನು ಗಮನಿಸಿದ ಕರ್ನಾಟಕ ಹೈಕೋರ್ಟ್ ಪೀಠ ಗರಂ ಆಗಿದೆ. ಕರ್ನಾಟಕಕ್ಕೆ ಪೂರೈಕೆ ಮಾಡುತ್ತಿರುವ ಆಮ್ಲಜನಕ ಪ್ರಮಾಣವನ್ನು ಕೂಡಲೇ ಹೆಚ್ಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಕೇಂದ್ರ ಸರ್ಕಾರದ ಈ ಧೋರಣೆ ಬಗ್ಗೆ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ಹಾಗೂ ನ್ಯಾ. ಅರವಿಂದ್ ಕುಮಾರ್ ಅವರಿದ್ದ ಪೀಠವು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ''ಇನ್ನೂ ಎಷ್ಟು ಜನ ಸಾಯಬೇಕು? ಎರಡು ದಿನಗಳ ನಂತರ ನೀವು ಆಮ್ಲಜನಕವನ್ನು ಹೆಚ್ಚಿಸಲಿದ್ದೀರಾ? ಎಲ್ಲಿ ಕಡಿಮೆ ಪ್ರಕರಣಗಳಿವೆಯೇ ಅಲ್ಲಿ ಹೆಚ್ಚು ಆಮ್ಲಜನಕ ಪೂರೈಕೆಯಾಗುತ್ತಿದೆ. ಇದಕ್ಕೆ ಏನಾದರೂ ಸಮರ್ಥನೆ ಇದೆಯಾ? ಹೇಳಿ, ಯಾವಾಗ ಕೋಟಾವನ್ನು ಹೆಚ್ಚಿಸುತ್ತೀರಿ... ಜನ ಸಾಯಬೇಕು ಎಂದು ನೀವು ಬಯಸುತ್ತೀರೇನು?" ಎಂದು ನ್ಯಾಯಮೂರ್ತಿಗಳು ಕೇಂದ್ರದ ಪರ ವಕೀಲರನ್ನು ಪ್ರಶ್ನಿಸಿದ್ದಾರೆ.
ಐಸಿಯು ಬೆಡ್, ಆಕ್ಸಿಜನ್ ಕೊರತೆ ಬಗ್ಗೆ ಹೈಕೋರ್ಟ್ ಕಳವಳ
ಸಭೆಯನ್ನು ನಡೆಸದೆ ಯಾವುದೇ ಹೇಳೀಕೆಯನ್ನು ನೀಡಲು ಸಾಧ್ಯವಿಲ್ಲ, ಆಮ್ಲಜನಕ ಪೂರೈಕೆ ಸಂಬಂಧ ಬುಧವಾರ ಸಭೆ ನಡೆಸಲಿದ್ದೇವೆ ಎಂದು ಕೇಂದ್ರದ ಪರ ವಕೀಲ ಕುಮಾರ್ ನೀಡಿದ ಉತ್ತರಕ್ಕೆ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿ, ''ನೀವು ಹೇಗೆ ಆಮ್ಲಜನಕ ಒದಗಿಸುತ್ತೀರಿ ಎಂದು ಹೇಳಿ? ನೀವು ಪ್ರಮಾಣ ಹೆಚ್ಚಿಸಬೇಕು. ಇಲ್ಲದೆ ಹೋದರೆ ಜನ ಸಾಯುತ್ತಾರೆ'' ಎಂದು ಹೇಳಿದರು.
Recommended Video
ಈ ಕುರಿತು ನಾಳೆ ನ್ಯಾಯಾಲಯಕ್ಕೆ ತಿಳಿಸಬೇಕು, ವಿವಿಧ ನಗರಗಳಿಗೆ ಆಮ್ಲಜನಕವನ್ನು ಹಂಚುವ ಕುರಿತು ಪ್ರಸಕ್ತ ಇರುವ ಮಾರ್ಗಸೂಚಿಯನ್ನು ದಾಖಲೆಯ ರೂಪದಲ್ಲಿ ಸರ್ಕಾರವು ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.