ನವಜಾತ ಶಿಶು ಕೊಂದಿದ್ದ ತಾಯಿ ಕೊಲೆ ಆರೋಪದಿಂದ ಖುಲಾಸೆ
ಬೆಂಗಳೂರು,ಜೂ.27. ಹೆತ್ತ ಮಗುವಿಗೆ ಅನಾರೋಗ್ಯವಿದೆ ಎಂದು ತಾನೇ ತನ್ನ ಕೈಯಾರೆ ಮಗುವನ್ನು ನದಿಗೆ ಎಸೆದು ಕೊಂದಿದ್ದ ಮಹಿಳೆಗೆ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಹೈಕೋರ್ಟ್ ಕೊಲೆ ಆರೋಪದಿಂದ ಖುಲಾಸೆಗೊಳಿಸಿದೆ. ಅಲ್ಲದೆ, ಆಕೆಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಆದೇಶ ನೀಡಿರುವುದರಿಂದ ಆಕೆಗೆ ಬಿಡುಗಡೆ ಭಾಗ್ಯ ಲಭಿಸಿದೆ.
ಮೂರ್ಛೆರೋಗ ಇದೆ ಎಂಬ ಕಾರಣಕ್ಕೆ ಎರಡು ತಿಂಗಳ ಮಗುವನ್ನು ನದಿಗೆ ಎಸೆದಿದ್ದ ಕೊಂದಿದ್ದ ಆಂಧ್ರಪ್ರದೇಶ ಮೂಲಕ 33 ವರ್ಷದ ಮಹಿಳೆಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಆ ಮಹಿಳೆ ಈಗಾಗಲೇ ಸುಮಾರು ಆರು ವರ್ಷ ಜೈಲಿನಲ್ಲಿ ಕಳೆದಿರುವುದರಿಂದ ಕೂಡಲೇ ಆಕೆಯನ್ನು ಬಿಡುಗಡೆ ಮಾಡುವಂತೆಯೂ ನ್ಯಾಯಾಲಯ ಆದೇಶಿಸಿದೆ. ಅಧೀನ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ಪ್ರಶ್ನಿಸಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ. ಕೆ. ಸೋಮಶೇಖರ್ಮತ್ತು ನ್ಯಾ. ಶಿವಶಂಕರ್ ಅಮರಣ್ಣವರ್ ಅವರಿದ್ದ ವಿಭಾಗೀಯಪೀಠ ಈ ಆದೇಶವನ್ನು ಮಾಡಿದೆ.
ತೀರ್ಪಿನ ಸಾರಾಂಶ:
ಸೆಕ್ಷನ್ 302ರಡಿ ಆಕೆಯ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ, ಆದರೆ ಅದನ್ನು ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯವನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ. ಹಾಗಾಗಿ ಅವರಿಗೆ ಜೀವಾವಧಿ ಶಿಕ್ಷೆ ನೀಡಿರುವುದು ಸರಿಯಲ್ಲ, ಈಗ ಅವರು ಅನುಭವಿಸಿರುವ ಶಿಕ್ಷೆಯೇ ಸಾಕು ಎಂದು ಕೋರ್ಟ್ ತಿಳಿಸಿದೆ.
ಪ್ರಕರಣದ ವಿವರಗಳೇನು?
ಆಂದ್ರಪ್ರದೇಶದ ಅನಂತರಪುರ ಜಿಲ್ಲೆಯ ಮೂಲದ ಮಹಿಳೆ 2016ರಲ್ಲಿ ಪತಿಯ ಸಹಿತ ತುಮಕೂರು ಜಿಲ್ಲೆಯ ಕೊರಟಗೆರೆಗೆ ಬಂದಿದ್ದರು. ಆಕೆಗೆ ಜನಿಸಿದ್ದ ಎರಡು ತಿಂಗಳ ಮಗುವಿಗೆ ಉಸಿರಾಟದ ಸಮಸ್ಯೆ ಇತ್ತು, ಜೊತೆಗೆ ಮೂರ್ಛೆರೋಗವಿತ್ತು. ಆ ಮಗುವಿಗೆ ಹಾಲುಣಿಸಲೂ ಆಗುತ್ತಿರಲಿಲ್ಲ. ಆ ಮಗುವನ್ನು ವೈದ್ಯರಿಗೆ ತೋರಿಸಲು ಆಸ್ಪತ್ರೆಗೆ ಕರೆದೊಯ್ದಿದ್ದರು. ಮನನೊಂದಿದ್ದ ಆಕೆ ಗಂಡನಿಗೆ ತಿಳಿಯದಂತೆ ತಪ್ಪಿಸಿಕೊಂಡು ಮಗುವನ್ನು ಸ್ವರ್ಣಮುಖಿ ನದಿಗೆ ಬಿಸಾಡಿದ್ದರು. ಬಳಿಕ ಗಂಡ ಮಗುವಿನ ಬಗ್ಗೆ ವಿಚಾರಿಸಿದಾಗ, ಯಾರೂ ದುಷ್ಕರ್ಮಿಗಳು ಬೆದರಿಸಿ ಒಡವೆ ಹಾಗೂ ಮಗುವನ್ನು ಕದ್ದೊಯ್ದರು ಎಂದು ಸುಳ್ಳು ಹೇಳಿದ್ದರು. ಪತಿ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು. ತನಿಖೆಯ ವೇಳೆ ಆಕೆ ತಾನೇ ಮಗುವನ್ನು ನದಿಗೆ ಎಸೆದಿದ್ದನ್ನು ಒಪ್ಪಿಕೊಂಡಿದ್ದರು.
Recommended Video
ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದ ಮಧುಗಿರಿ ನ್ಯಾಯಾಲಯ 2017ರ ಜು.22ರಂದು ಆಕೆಗೆ ಐಸಿಪಿ ಸೆಕ್ಷನ್ 302ರಡಿ ಜೀವಾವಧಿ ಶಿಕ್ಷೆ ಮತ್ತು 10ಸಾವಿರ ದಂಡವನ್ನು ವಿಧಿಸಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.