ಹೈಕಮಾಂಡ್ ಸೂಚಿಸಿದ ಕ್ಷೇತ್ರದಿಂದ ಸ್ಪರ್ಧೆ; ಸಿದ್ದರಾಮಯ್ಯ
ಬೆಂಗಳೂರು, ಡಿಸೆಂಬರ್ 10; ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರ ಯಾವುದು?. ಈ ವಿಚಾರ ರಾಜ್ಯ ರಾಜಕೀಯದಲ್ಲಿ ಈಗ ಚರ್ಚೆಯ ವಿಚಾರ. ಈಗ ಸ್ವತಃ ಸಿದ್ದರಾಮಯ್ಯ ಈ ಕುರಿತು ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯ, "ನಾನೀಗ ಬಾದಾಮಿ ಕ್ಷೇತ್ರದ ಶಾಸಕ, ಹಲವು ಕ್ಷೇತ್ರಗಳ ಜನರು ಆಹ್ವಾನ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಎಲ್ಲಿ ಸೂಚಿಸುವುದೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ" ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬಾದಾಮಿಯಲ್ಲಿ ಸ್ಪರ್ಧೆ; ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ!
"ಕೋಲಾರ, ಕೊಪ್ಪಳ, ಚಾಮರಾಜಪೇಟೆ, ಚಿಕ್ಕನಾಯಕನಹಳ್ಳಿ, ಅರಕಲಗೂಡು, ಹುಣಸೂರು ಕ್ಷೇತ್ರಗಳಿಂದ ನನಗೆ ಆಹ್ವಾನವಿದೆ. ಎಲ್ಲ ಕಡೆ ಸ್ಪರ್ಧಿಸಲು ಆಗುವುದಿಲ್ಲ. ಸ್ಪರ್ಧೆಯನ್ನು ಹೈಕಮಾಂಡ್ ನಿರ್ಧರಿಸುತ್ತದೆ" ಎಂದರು.
2023ರ ಚುನಾವಣೆ; ರಾಣೆಬೆನ್ನೂರು ಕ್ಷೇತ್ರಕ್ಕೆ ಸಿದ್ದರಾಮಯ್ಯಗೆ ಆಹ್ವಾನ!
ಚಾಮರಾಜಪೇಟೆ ಬಗ್ಗೆ ಸ್ಪಷ್ಟನೆ; ಸಿದ್ದರಾಮಯ್ಯ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹಬ್ಬಿದೆ. ಈ ಕುರಿತು ಅವರು ಹಲವು ಬಾರಿ ಸ್ಪಷ್ಟನೆ ಸಹ ನೀಡಿದ್ದಾರೆ.
ಬಾದಾಮಿ; ಮತ್ತೆ ಸಿದ್ದರಾಮಯ್ಯ, ಶ್ರೀರಾಮುಲು ಎದುರಾಳಿಗಳು?
ಗುರುವಾರ ಚಾಮರಾಜಪೇಟೆಯ ಮಹದೇಶ್ವರ ಸಭಾಭವನ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, "ನಾನು ಆಗಾಗ ಚಾಮರಾಜಪೇಟೆಗೆ ಬರುತ್ತಿರುತ್ತೇನೆ. ಈ ಕಾರಣದಿಂದಾಗಿ ಇಲ್ಲೇ ಸ್ಪರ್ಧಿಸುತ್ತೆನೆ ಎಂದು ಕೆಲವರು ಹೇಳುತ್ತಾರೆ. ಚಾಮರಾಜಪೇಟೆ ಕ್ಷೇತ್ರದ ಬಗ್ಗೆ ನನಗೆ ಒಲವೂ ಇಲ್ಲ, ವಿರೋಧವೂ ಇಲ್ಲ" ಎಂದು ಸ್ಪಷ್ಟಪಡಿಸಿದರು.
ಬಿ. ಬಿ. ಚಿಮ್ಮನಕಟ್ಟಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, "ಚಿಮ್ಮನಕಟ್ಟಿ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಕೇಳಿದ್ದು ನಿಜ. ಆದರೆ ಕೇಳಿದವರಿಗೆಲ್ಲ ಟಿಕೆಟ್ ಕೊಡಲು ಸಾಧ್ಯವೇ?. ಟಿಕೆಟ್ ಹಂಚಿಕೆ ಮಾಡುವುದು ನಾನಲ್ಲ, ಪಕ್ಷದ ಹೈಕಮಾಂಡ್" ಎಂದು ಹೇಳಿದರು.
ಹೆಬ್ಬಾಳ ಕ್ಷೇತ್ರಕ್ಕೆ ಆಹ್ವಾನ; ಸಿದ್ದರಾಮಯ್ಯ ಆಪ್ತರು ಹಾಗೂ ಹೆಬ್ಬಾಳ ಕ್ಷೇತ್ರದ ಶಾಸಕರು ಆಗಿರುವ ಬೈರತಿ ಸುರೇಶ್ ಸಿದ್ದರಾಮಯ್ಯಗೆ ಹೆಬ್ಬಾಳದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕರು, "ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೆಬ್ಬಾಳ ಕ್ಷೇತ್ರದಲ್ಲಿ ಸ್ಪರ್ದೆ ಮಾಡಬೇಕು. ಅವರಿಗೆ ಶಕ್ತಿ ತುಂಬುವ ಹೊಣೆ ನಮ್ಮದು" ಎಂದು ಹೇಳಿದ್ದಾರೆ.
"ಸಿದ್ದರಾಮಯ್ಯ ಒಂದು ಕ್ಷೇತ್ರಕ್ಕೆ ಸೀಮಿತವಾದ ನಾಯಕರಲ್ಲ. ಹೆಬ್ಬಾಳ ಸೇರಿದಂತೆ ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಗೆದ್ದು ಬರುವ ವರ್ಚಸ್ಸು ಹಾಗೂ ಕಾರ್ಯಕರ್ತ ಪಡೆ ಹೊಂದಿರುವ ನಾಯಕ ಅವರು" ಎಂದರು.
"ಬಿ. ಬಿ. ಚಿಮ್ಮನಕಟ್ಟಿ ರಾಜಕಾರಣದಲ್ಲಿ ಚಲಾವಣೆ ಕಳೆದುಕೊಂಡಿರುವ ನಾಣ್ಯ. ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಅವರು ಸಿದ್ದರಾಮಯ್ಯ ವಿರುದ್ಧ ಕೀಳು ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ" ಎಂದು ಬೈರತಿ ಸುರೇಶ್ ಹೇಳಿದರು.
ಬಾದಾಮಿ ಕ್ಷೇತ್ರದ ಶಾಸಕ; ಸಿದ್ದರಾಮಯ್ಯ ಈಗ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದ ಶಾಸಕರು. ಆದರೆ ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದ ಮಾಜಿ ಶಾಸಕ ಬಿ. ಬಿ. ಚಿಮ್ಮನಕಟ್ಟಿ ಕಾಂಗ್ರೆಸ್ ಸಮಾವೇಶದ ವೇದಿಕೆಯಲ್ಲಿಯೇ "ಸ್ವ ಕ್ಷೇತ್ರದಲ್ಲಿ ಗೆಲ್ಲುವ ಯೋಗ್ಯತೆ ಇಲ್ಲವೆಂದರೆ ಇಲ್ಲಿ ಯಾಕ ನಿಲ್ಲಬೇಕು?. ನಮಗೆ ಯಾಕ ಗಂಟ ಬಿದ್ರಿ ನೀವು?" ಎಂದು ವೇದಿಕೆಯಲ್ಲಿಯೇ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದರು.
ಸಿದ್ದರಾಮಯ್ಯ 2018ರ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ ಮತ್ತು ಬಾಗಲಕೋಟೆಯ ಬಾದಾಮಿ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಯಲ್ಲಿ ಗೆಲುವು ಕಂಡಿದ್ದರು. ಬಾದಾಮಿಯಲ್ಲಿಯೂ ಬಿಜೆಪಿಯಿಂದ ಕಣಕ್ಕಿಳಿದಿದ್ದ ಬಿ. ಶ್ರೀರಾಮುಲು 65,903 ಮತಗಳನನ್ನು ಪಡೆದು ಪ್ರಬಲ ಪೈಪೋಟಿ ನೀಡಿದ್ದರು.