ಹೈಕಮಾಂಡ್ ಗೆ ಕಪ್ಪ: ಅನಂತ್ ಕುಮಾರ್, ಯಡಿಯೂರಪ್ಪ ವಿರುದ್ಧ ಎಫ್ಐಆರ್
ಬೆಂಗಳೂರು, ಅಕ್ಟೋಬರ್ 8: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪುಟ್ಟಸ್ವಾಮಿ ದಾಖಲೆ ಬಿಡುಗಡೆ : ಬಿಎಸ್ವೈ
ಬಿಜೆಪಿ ಹೈಕಮಾಂಡ್ ಗೆ ಕಪ್ಪ ನೀಡಿದ್ದಾರೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕಾರಣಿಯಲ್ಲಿ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ನಡುವಿನ ಸಂಭಾಷಣೆ ವಿಡಿಯೋ ಸಹಿತ ಬಹಿರಂಗವಾಗಿತ್ತು. ಹೈಕಮಾಂಡ್ ಗೆ ಸ್ಥಳೀಯ ಪಕ್ಷದ ನಾಯಕರು ವರ್ಗಾವಣೆ ಮಾಡಿರುವ ಹಣದ ಬಗ್ಗೆ ಉಭಯ ನಾಯಕರು ಮಾತನಾಡಿಕೊಂಡಿದ್ದು ಧ್ವನಿ ಮುದ್ರಣಗೊಂಡಿತ್ತು.
ಈ ಆಡಿಯೋ ಸಂಭಾಷಣೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಲಾಗಿತ್ತು. ಈ ಆಡಿಯೋದಲ್ಲಿರುವ ಧ್ವನಿ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರಿಗೇ ಸೇರಿದ್ದು ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ನೀಡಿದ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಎಸ್ ಯಡಿಯೂರಪ್ಪ, "ಸಿದ್ದರಾಮಯ್ಯ ತಮಗೆ ಬೇಕಾದಂತೆ ಎಸಿಬಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಬೇಕೆಂದೇ ಎಸಿಬಿ ಈ ಪ್ರಕರಣ ದಾಖಲಿಸಿದೆ. ಸಿದ್ದರಾಮಯ್ಯ ನನ್ನನ್ನು ಮತ್ತು ಅನಂತ್ ಕುಮಾರ್ ಅವರನ್ನು ಎದುರಿಸುವಲ್ಲಿ ವಿಫಲರಾಗಿದ್ದಾರೆ. ನಾವು ಈ ಪ್ರಕರಣವನ್ನು ಎದುರಿಸಲು ಸಿದ್ದರಾಗಿದ್ದೇವೆ," ಎಂದು ಹೇಳಿಕೆ ನೀಡಿದ್ದಾರೆ.