ಹಕ್ಕಿ ಜ್ವರ: ರಾಜ್ಯದ ಈ ಎಲ್ಲ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಿದ ರಾಜ್ಯ ಸರ್ಕಾರ!
ಬೆಂಗಳೂರು, ಜ. 06: ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಹಕ್ಕಿಜ್ವರ (H5N8) ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿಯೂ ರೋಗ ಕಾಣಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದ ರೋಗ ಹರಡದಂತೆ ತಡೆಯಲು ಎಲ್ಲಾ ಜಿಲ್ಲೆಗಳಲ್ಲಿಯೂ ಹೈಅಲರ್ಟ್ ಘೋಷಿಸಲಾಗಿದೆ ಎಂದು ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚೌಹಾಣ್ ಅವರು ತಿಳಿಸಿದ್ದಾರೆ. ಕೋಳಿಶೀತ ಜ್ವರದ ಹರಡದಂತೆ ತಡೆಯಲು ಸಿದ್ಧತೆ ಮಾಡಿಕೊಳ್ಳಿ ಎಂದು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಮತ್ತು ಪಶುವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ಇದೇ ಸಂದರ್ಭದಲ್ಲಿ ಅವರು ಕೊಟ್ಟಿದ್ದಾರೆ.
Recommended Video
ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ, ರಾಜ್ಯದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರುಗಳು, ಹಕ್ಕಿ ಜ್ವರದ ಸಂಭಾವ್ಯ ರೋಗ ಹರಡುವಿಕೆಯನ್ನು ತಡೆಯಲು ಆಯಾ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸುವಂತೆ ಸೂಚಿಸಲಾಗಿದೆ.
ದೇಶದಲ್ಲಿ Avian Influenza-ಹಕ್ಕಿ ಜ್ವರದ ಸ್ಥಿತಿಗತಿ
ಜೊತೆಗೆ ಜಿಲ್ಲಾ ಮಟ್ಟದ ರೋಗ ನಿಯಂತ್ರಣ ಸಮಿತಿಯ ಸಭೆ ಮಾಡಿ, ಸೂಕ್ತ ಮುಂಜಾಗ್ರತೆ ಕ್ರಮಕೈಗೊಳ್ಳುವಂತೆ ಆದೇಶ ಮಾಡಲಾಗಿದೆ. ಈವರೆಗೆ ರಾಜ್ಯದಲ್ಲಿ ಕೋಳಿಜ್ವರದ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ಆದರೇ ಎಲ್ಲ ರೀತಿಯ ಎಚ್ಚರಿಗೆ ವಹಿಸಿ ರೋಗ ಕಂಡುಬಂದಲ್ಲಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಪ್ರಭು ಚೌಹಾಣ್ ತಿಳಿಸಿದ್ದಾರೆ.
ಚೆಕ್ಪೋಸ್ಟ್ ಸ್ಥಾಪನೆ
ಕೇರಳ ರಾಜ್ಯದ ಗಡಿ ಭಾಗದಲ್ಲಿ ಕೂಡಲೇ ಚೆಕ್ ಪೋಸ್ಟಗಳನ್ನು ಸ್ಥಾಪಿಸಿ ಕೇರಳ ರಾಜ್ಯದಿಂದ ಕೋಳಿ, ಕುಕ್ಕುಟ ಹಾಗೂ ಕುಕ್ಕುಟ ಉತ್ಪನ್ನಗಳ ಸಾಗಾಣಿಕೆಯನ್ನು ನಿರ್ಬಂಧಿಸಲು ಸೂಚಿಸಿದಲಾಗಿದೆ. ಜೊತೆಗೆ ಕೇರಳ ರಾಜ್ಯದಿಂದ ಒಳ ಬರುವ ಕೋಳಿ ಸಾಗಾಣಿಕೆ ವಾಹನಗಳನ್ನು ನೈರ್ಮಲ್ಯೀಕರಿಸಿ (disinfection) ಒಳಬಿಡಲು ಸೂಚನೆ ನೀಡಲಾಗಿದೆ. ಅಲ್ಲದೇ ತೆಗೆದುಕೊಂಡ ಕ್ರಮಗಳ ದೈನಂದಿನ ವರದಿಯನ್ನು ಉಪನಿರ್ದೇಶಕರು, ಕೋಳಿ ರೋಗ ನಿರ್ಣಯ ಪ್ರಯೋಗಾಲಯದ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ.
ರ್ಯಾಂಡಮ್ ಪರೀಕ್ಷೆ
ಗಡಿ ಜಿಲ್ಲೆಗಳಲ್ಲಿ ಇರುವ ಕುಕ್ಕುಟ ಕ್ಷೇತ್ರಗಳಿಂದ ಪ್ರತಿ ವಾರ ರ್ಯಾಂಡಮ್ ಆಗಿ ತಲಾ 5 ಸೀರಂ ಮಾದರಿಗಳು, 5 ಕ್ಲೋಯಕಲ್-ಟ್ರೇಕಿಯಲ್ ಮಾದರಿಗಳು ಮತ್ತು 5 ಪರಿಸರ ಮಾದರಿಗಳನ್ನು ಸಂಗ್ರಹಿಸಿ ಮುಂದಿನ ಆದೇಶದವರೆಗೆ ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ ಪ್ರಯೋಗಾಲಯಕ್ಕೆ ವಿಶ್ಲೇಷಣೆಗೆ ಸಲ್ಲಿಸಲು ತಿಳಿಸಲಾಗಿದೆ.
ಕೇರಳ ಸಂಪರ್ಕಿಸುವ ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ಹೈ ಅಲರ್ಟ್
ಹಕ್ಕಿಗಳ ಮೇಲೆ ನಿಗಾ
ಎಲ್ಲಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಕುಕ್ಕುಟ ಕ್ಷೇತ್ರಗಳಲ್ಲಿ ವಿಶೇಷವಾಗಿ, ಪಕ್ಷಿಧಾಮ ಹಾಗೂ ನೀರು ಸಂಗ್ರಹಣ ಸ್ಥಳಗಳ (Water Bodies) ಬಗ್ಗೆ ಹೆಚ್ಚಿನ ನಿಗಾ ವಹಿಸಲು ಸೂಚಿಸಿದಲಾಗಿದೆ. ಕೋಳಿಗಳು/ಹಿತ್ತಲ ಕೋಳಿಗಳು/ಹಕ್ಕಿಗಳು/ಕಾಡು ಹಕ್ಕಿಗಳು/ವಲಸೆ ಹಕ್ಕಿಗಳ ಯಾವುದೇ ಅಸ್ವಾಭಾವಿಕ ಮರಣ ಸಂಭವಿಸಿದಲ್ಲಿ ಅಥವಾ ರೋಗ ಲಕ್ಷಣಗಳು ಕಂಡುಬಂದಲ್ಲಿ, ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸಂಬಂಧಿಸಿದ ಎಲ್ಲರಿಗೂ ಸೂಚಿಸಲಾಗಿದೆ.
ಕೋಳಿ ಶೀತ ಜ್ವರದ ಸಂಭವನೀಯತೆಯನ್ನು ಪರಿಗಣಿಸಿ, ಸಂಬಂಧಪಟ್ಟ ಪ್ರಯೋಗಾಲಯಕ್ಕೆ ವರದಿ ಮಾಡಿ, ರೋಗ ವಿಶ್ಲೇಷಣೆ ನೆಡಸುವ ಬಗ್ಗೆ ಕ್ರಮ ವಹಿಸುವುದು. ಹಾಗೂ ಜೈವಿಕ ಸುರಕ್ಷಾತಾ (Biosecurity) ಕ್ರಮಗಳನ್ನು ಕೈಗೊಳ್ಳಲು ತಿಳಿಸಲಾಗಿದೆ ಎಂದು ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ದೇಶಾದ್ಯಂತ ಹೈಅಲರ್ಟ್
ಕೇರಳದಲ್ಲಿ ಈ H5N8 ಹಕ್ಕಿ ಜ್ವರದ ವೈರಸ್ ಬಾತುಕೋಳಿಗಳಲ್ಲಿ ಕಂಡುಬಂದಿತ್ತು. ಸುಮಾರು 12,000 ಬಾತುಕೋತಿಗಳು ಸಾವನ್ನಪ್ಪಿದ್ದು, 48,000 ಹಕ್ಕಿಗಳನ್ನು ಕೊಲ್ಲಲು ಕೇರಳ ಸರ್ಕಾರ ಆದೇಶಿಸಿದೆ. ನಿನ್ನೆ (ಜ.05) ಮಂಗಳವಾರದಿಂದ ಹಕ್ಕಿಗಳನ್ನು ಕೊಲ್ಲುವ ಕಾರ್ಯ ಆರಂಭಗೊಂಡಿದೆ. ಹರಿಯಾಣ ಹಾಗೂ ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ ಹಾಗೂ ರಾಜಸ್ಥಾನ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ 5 ಲಕ್ಷಕ್ಕೂ ಹೆಚ್ಚಿನ ಹಕ್ಕಿಗಳು ಕಳೆದ 10 ದಿನಗಳಲ್ಲಿ ಸಾವನ್ನಪ್ಪಿವೆ.
ಕುಕ್ಕುಟ ಮಂಡಳಿ ಸ್ಪಷ್ಟನೆ
ಕರ್ನಾಟಕದಲ್ಲಿ ಈವರೆಗೆ ಹಕ್ಕಿಜ್ವರದ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ ಎಂದು ರಾಜ್ಯ ಕುಕ್ಕುಟ ಮಂಡಳಿ ಅಧ್ಯಕ್ಷ ಕಾಂತರಾಜು ಹೇಳಿದ್ದಾರೆ. ಕರ್ನಾಟಕದಲ್ಲಿ ಈವರೆಗೆ ಯಾವುದೇ ಪಕ್ಷಿ ಜ್ವರದ ಪ್ರಕರಣಗಳಿಲ್ಲ, ರೈತರು ಮತ್ತು ಕೋಳಿ ಫಾರ್ಮ್ ಮಾಲೀಕರಿಗೆ ನಷ್ಟವನ್ನುಂಟುಮಾಡುವ ಕೆಲವು ವದಂತಿಗಳು ನಡೆಯುತ್ತಿವೆ. ಜಿಲ್ಲಾಡಳಿತವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕರ್ನಾಟಕ ಕುಕ್ಕುಟ ಮಂಡಳಿಯ ಅಧ್ಯಕ್ಷ ಕಾಂತರಾಜು ತಿಳಿಸಿದ್ದಾರೆ.