ಆರ್ ಅಶೋಕ್ಗೆ ಡಿಸಿಎಂ ಪಟ್ಟ ತಪ್ಪಿದ್ದು ಏಕೆ ? ಇಲ್ಲಿದೆ ಕಾರಣ
Recommended Video
ಬೆಂಗಳೂರು, ಆಗಸ್ಟ್ 28: ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆ ಆಗಿದೆ. ಅಶ್ವತ್ಥ ನಾರಾಯಣ, ಗೋವಿಂದ ಕಾರಜೋಳ ಹಾಗೂ ಲಕ್ಷ್ಮಣ ಸವಡಿ ಉಪಮುಖ್ಯಮಂತ್ರಿಗಳಾಗಿ ನೇಮಕವಾಗಿದ್ದಾರೆ.
ಆರ್ ಅಶೋಕ್ಗೆ ಸಿಗಬೇಕಿದ್ದ ಡಿಸಿಎಂ ಪಟ್ಟ ಅಶ್ವತ್ಥ ನಾರಾಯಣಗೆ ಸಿಕ್ಕಿದೆ. ಹಾಗಾದರೆ ಆರ್ ಆಶೋಕ್ಡಿಸಿಎಂ ಪಟ್ಟದಿಂದ ವಂಚಿತರಾಗಲು ಕಾರಣ ಇಲ್ಲಿದೆ.
ಬಿಜೆಪಿಯಲ್ಲಿ ಒಕ್ಕಲಿಗ ಸಮುದಾಯದ ಮುಂಚೂಣಿ ನಾಯಕ ಎಂದೇ ಬಿಂಬಿಸಲ್ಪಟ್ಟಿರುವ ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ಗೆ ಈ ಬಾರಿ ಉಪಮುಖ್ಯಮಂತ್ರಿ ಸ್ಥಾನ ಹೇಗೆ ಕೈತಪ್ಪಿತು ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ.
ಅಶೋಕ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡದಿರುವುದಕ್ಕೆ ಹಲವು ಕಾರಣಗಳಿವೆ.ಮುಖ್ಯವಾಗಿ ಸಂಘ ಪರಿವಾರದ ಮುಖಂಡರು ಅಶೋಕ್ ಅವರ ಬಗ್ಗೆ ನಿರಾಸೆ ಹೊಂದಿದ್ದು, ಪಕ್ಷದ ಹೈಕಮಾಂಡ್ ಬಳಿ ಈ ಕುರಿತು ವಿವರಣೆ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆರ್ ಆಶೋಕ್ಗೆ ಡಿಸಿಎಂ ಸ್ಥಾನ ತಪ್ಪಲು ಪ್ರಮುಖ ಕಾರಣ
ಒಕ್ಕಲಿಗ ಸಮುದಾಯದಲ್ಲಿ ಪ್ರಭಾವ ಹೊಂದಿರುವ ಅಶೋಕ್ ಅವರು ಹಲವು ವರ್ಷಗಳಿಂದ ಸಂಘ ಪರಿವಾರದೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಂಘ ಪರಿವಾರದ ಮುಖಂಡರು ಸೂಕ್ಷ್ಮವಾಗಿ ಹಲವು ಬಾರಿ ಹೇಳಿದ್ದರು. ಆದರೂ ಅಶೋಕ್ ಅವರ ಬಳಿ ಅಂತರವನ್ನೇ ಕಾಯ್ದುಕೊಂಡರು.
ಡಿಸಿಎಂ ಆಗಿದ್ದಾಗ ಬೆಂಗಳೂರು ಬಿಟ್ಟಿ ಬೇರೆಡೆ ಪ್ರವಾಸ ಮಾಡಿರಲಿಲ್ಲ
ಕಳೆದ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದರೂ ಅಶೋಕ್ ಅವರು ಬೆಂಗಳೂರು ಬಿಟ್ಟು ಬೇರೆಡೆಗೆ ಹೆಚ್ಚು ಪ್ರವಾಸ ಮಾಡಿರಲಿಲ್ಲ. ಒಕ್ಕಲಿಗರ ಪ್ರಾಬಲ್ಯವಿರುವ ಹಳೆ ಮೈಸೂರು ಪ್ರದೇಶದಲ್ಲಿ ಪಕ್ಷ ಸಂಘಟನೆಗೆ ನಿರೀಕ್ಷಿತ ಮಟ್ಟದ ಶ್ರಮವನ್ನೂ ಹಾಕಿರಲಿಲ್ಲ. ಇತರೆ ಒಕ್ಕಲಿಗ ಮುಖಂಡರನ್ನು ಬೆಳೆಯಲು ಬಿಡಲಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.
ಅಶೋಕ್ 'ಕಿರೀಟ' ಅಶ್ವಥ್ ನಾರಾಯಣ್ ತಲೆಗೆ; ಬದಲಾಯ್ತಾ ಬೆಂಗಳೂರು ಬಿಜೆಪಿ ಆದ್ಯತೆ?
ಅಶೋಕ್ರದ್ದು ಹೊಂದಾಣಿಕೆ ರಾಜಕಾರಣ
ಆರ್ ಅಶೋಕ್ರದ್ದು ಹೊಂದಾಣಿಕೆಯ ರಾಜಕಾರಣ, ವಿವಿಧ ಚುನಾವಣೆಗಳಲ್ಲಿ ಇತರೆ ಪಕ್ಷಗಳ ನಾಯಕರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಜೊತೆಗೆ ಕಳೆದ ಜಯನಗರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿನಲ್ಲೂ ಅಶೋಕ್ ಅವರು ಕಾಂಗ್ರೆಸ್ ಮುಖಂಡರ ಜೊತೆ ಒಪ್ಪಂದ ಮಾಡಿಕೊಂಡಿದ್ದರೂ ಎನ್ನುವ ಆರೋಪವೂ ಇತ್ತು.ಇದೆಲ್ಲ ಎಷ್ಟು ಸುಳ್ಳು, ಎಷ್ಟು ಸತ್ಯ ಎಂದು ಗೊತ್ತಿಲ್ಲ. ಆದರೆ ಈ ಆರೋಪಗಳು ಅಶೋಕ್ ಮೇಲೆ ಬಂದಿರುವುದು ಮಾತ್ರ ಸತ್ಯ.
ನನ್ನ ಹಾಗೂ ಅಶೋಕ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಅಶ್ವತ್ಥ ನಾರಾಯಣ
ಮುನಿರತ್ನ ಗೆಲುವಿಗೆ ಕಾರಣರಾದವರು
ಕಳೆದ ಚುನಾವಣೆಯಲ್ಲಿ ಬಿಜೆಪಿಯ ಮುನಿರಾಜುಗೌಡ ಅವರು ಸೋಲುವುದಕ್ಕೆ ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕರಾಗಿದ್ದ ಮುನಿರತ್ನ ಗೆಲ್ಲುವುದಕ್ಕೆ ಪರೋಕ್ಷವಾಗಿ ಸಹಕರಿಸಿದ್ದಾರೆ ಎನ್ನುವ ಆರೋಪವಿದೆ. ಅಲ್ಲದೆ ನಕಲಿ ಮತದಾರರ ಚೀಟಿ ಪ್ರಕರಣದಲ್ಲಿ ಮುನಿರತ್ನ ವಿರುದ್ಧದ ಪ್ರಕರಣವನ್ನು ಕೋರ್ಟ್ನಿಂದ ವಾಪಸ್ ಪಡೆಸುವಲ್ಲಿ ಪಕ್ಷದ ಮುಖಂಡರೂ ಆಗಿರುವ ಅರ್ಜಿದಾರರ ಮೇಲೆ ಪ್ರಭಾವ ಬೀಡಿದ್ದರು ಎನ್ನುವ ಆರೋಪ ಕೂಡ ಕೇಳಿಬಂದಿತ್ತು.