'#Heng_pung_lee ಆರ್ಗನೈಸ್ಡ್ ಪಿತೂರಿಯೇ ಹೊರತು, ಆರ್ಗಾನಿಕ್ ಅಲ್ಲ': ಟ್ರೆಂಡಿಂಗ್ ಗೆ ಸೂಲಿಬೆಲೆ ಪ್ರತಿಕ್ರಿಯೆ
"ಇದು ಕಾಂಗ್ರೆಸ್ ಐ.ಟಿ. ಸೆಲ್ ನಿಂದ ನಡೆಯುತ್ತಿರುವ 'ಆರ್ಗನೈಸ್ಡ್' ಪಿತೂರಿಯೇ ಹೊರತು 'ಆರ್ಗಾನಿಕ್' ಅಲ್ಲ. ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ಐ.ಟಿ. ಸೆಲ್ ನಲ್ಲಿ ಬದಲಾವಣೆ ಆಗಿದೆ. ಇದು ಅವರ ಪ್ರಯತ್ನ. ಒಬ್ಬ ವ್ಯಕ್ತಿಯ ವಿರುದ್ಧ ಇಷ್ಟು ದೊಡ್ಡ ಕ್ಯಾಂಪೇನ್ ಮಾಡ್ತಿದ್ದಾರಲ್ಲಾ ಅವರಿಗೆ ಧನ್ಯವಾದ ಹೇಳ್ತೀನಿ..."
- ಸದ್ಯ ತಮ್ಮ ಭಾಷಣಗಳ ಸುತ್ತ ಡಿಜಿಟಲ್ ವೇದಿಕೆಗಳಲ್ಲಿ ನಡೆಯುತ್ತಿರುವ ಸತ್ಯ- ಸುಳ್ಳುಗಳ ಪರಾಮರ್ಶೆಯ ಕುರಿತು ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ನೀಡಿದ ಪ್ರತಿಕ್ರಿಯೆ ಇದು.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಚಕ್ರವರ್ತಿ ಸೂಲಿಬೆಲೆ ಹಳೆಯ ಭಾಷಣಗಳ ತುಣುಕುಗಳು ಹರಿದಾಟ ಆರಂಭಿಸಿದವು. ಅವುಗಳಲ್ಲಿ ಎಷ್ಟೋ ವಿಚಾರಗಳು ಭಾಷಣದ ಭರಾಟೆಯಲ್ಲಿ ಬಂದಿದ್ದರೂ, ಇವತ್ತಿನ ವಾಸ್ತವವನ್ನು ಅಣಕಿಸುವಂತಿದ್ದವು.
ಈ ಕುರಿತು ದಕ್ಷಿಣ ಕನ್ನಡ ಮೂಲದ ಕೇಬಲ್ ವಾಹಿನಿಯೊಂದರ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗೆ ಚಕ್ರವರ್ತಿ ಸೂಲಿಬೆಲೆ ಇದೇ ಮಾದರಿಯಲ್ಲಿ ಉತ್ತರಿಸಿದ್ದರು. ತಮ್ಮ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದಾರೆ ಎಂದಿದ್ದರು. ಇದಾದ ನಂತರ ಭಾನುವಾರ #Heng_pung_lee ಹ್ಯಾಷ್ ಟ್ಯಾಗ್ ಟ್ವಿಟರ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತು.
ಈ ಹಿನ್ನೆಲೆಯಲ್ಲಿ ಅವರನ್ನು 'ಒನ್ ಇಂಡಿಯಾ ಕನ್ನಡ' ಸಂಪರ್ಕಿಸಿದಾಗ, ಇದು 'ಆರ್ಗನೈಸ್ಡ್' ಪಿತೂರಿಯೇ ಹೊರತು 'ಆರ್ಗಾನಿಕ್' ಅಲ್ಲ ಎಂದರು. ಅವರ ಮತ್ತು ಒನ್ ಇಂಡಿಯಾ ಕನ್ನಡದ ನಡುವೆ ನಡೆದ ಸಂಭಾಷಣೆಗಳ ಆಯ್ದ ಭಾಗಗಳನ್ನು ಇಲ್ಲಿ ನೀಡುತ್ತಿದ್ದೇವೆ.
ಒನ್ ಇಂಡಿಯಾ: ಡಿಜಿಟಲ್ ವೇದಿಕೆಗಳಲ್ಲಿ ಕೇಳಲಾಗುತ್ತಿರುವ ಪ್ರಶ್ನೆಗಳ ಕುರಿತು ನಿಮ್ಮ ಪ್ರತಿಕ್ರಿಯೆ ಏನು?
ಚಕ್ರವರ್ತಿ ಸೂಲಿಬೆಲೆ: ಕೋವಿಡ್ ನಂಥ ಗಂಭೀರ ಸಮಯದಲ್ಲೂ ಕಾಂಗ್ರೆಸ್ ಏನೂ ಮಾಡಲಾಗದೆ ಇಂಥ ಕೆಲಸ ಮಾಡಿಕೊಂಡಿದೆ. ಸರ್ಕಾರದ ವಿರುದ್ಧವಾಗಿ ಇವರಿಗೆ ಯಾವುದೇ ವಿಚಾರ ಇಲ್ಲ. ಆದ್ದರಿಂದ ನಾನು ಮಾತನಾಡಿದ್ದ ವಿಡಿಯೋಗಳನ್ನು ಹಾಕುತ್ತಿದ್ದಾರೆ. #ಹೆಂಗ್_ಪುಂಗ್_ಲೀ ಎಂಬುದಕ್ಕೆ ಪ್ರತಿಯಾಗಿ ಹುಡುಗರು #ಹಿಂಗ್_ಗುಮ್ ಲಾ ಎಂಬ ಹ್ಯಾಂಡಲ್ ನಲ್ಲಿ ಆರೋಪಗಳಿಗೆ ಸಾಕ್ಷ್ಯ ಸಹಿತ ಉತ್ತರ ನೀಡುತ್ತಿದ್ದಾರೆ. ಕಾಂಗ್ರೆಸ್ ಐ.ಟಿ. ಸೆಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಯಮಕನಮರಡಿ ಶಾಸಕ- ಮಾಜಿ ಸಚಿವ ಸತೀಶ ಜಾರಕಿಹೊಳಿ ಈ ಕ್ಯಾಂಪೇನ್ ಹಿಂದಿದ್ದಾರೆ. ಈ ಬಗ್ಗೆ ನಾನೇನೂ ತಲೆ ಕೆಡಿಸಿಕೊಂಡಿಲ್ಲ.
ಒನ್ ಇಂಡಿಯಾ: ಸಾಕಷ್ಟು ವಿಡಿಯೋ ತುಣುಕುಗಳು ಹಡಿದಾಡುತ್ತಿವೆ. ಒಂದೊಂದಾಗಿ ಪ್ರಶ್ನೆಗಳನ್ನು ಮುಂದಿಡಲಾಗಿದೆ. ಈ ಕುರಿತು ಉತ್ತರ ನೀಡಬೇಕು ಅನ್ನಿಸುತ್ತಿಲ್ಲವಾ?
ಸೂಲಿಬೆಲೆ: ನನ್ನ ಮೇಲೆ ಆರೋಪ ಮಾಡುತ್ತಿರುವುದೆಲ್ಲಕ್ಕೂ ಸಾಕ್ಷ್ಯ ಸಹಿತ ಉತ್ತರ ನೀಡಲಾಗುತ್ತಿದೆ. ಈ ಮಧ್ಯೆ ಮೊನ್ನೆ ಸುಳ್ಯದಲ್ಲಿ ಅಗತ್ಯ ಇರುವ ಅಂಧರೊಬ್ಬರಿಗೆ ಮನೆ ನೀಡಿದ್ದೇವೆ. ಕೋಲಾರದ ಕಡೆಯ ತಮಿಳುನಾಡಿನ ಗಡಿಯಲ್ಲಿ ಹೀನಾಯ ಸ್ಥಿತಿಯಲ್ಲಿದ್ದ ಕನ್ನಡ ಶಾಲೆಯನ್ನು ಸರಿ ಮಾಡಿದ್ದೇವೆ. ನಮಗೆ ಮಾಡಲಿಕ್ಕೆ ಸಾಕಷ್ಟು ಕೆಲಸ ಇದೆ. ಆದರೆ ಕೆಲಸ ಇಲ್ಲದಿರುವವರು ಕಾಂಗ್ರೆಸ್ ಪಕ್ಷದವರು. ಆದ್ದರಿಂದ ಈ ರೀತಿ ನನ್ನ ವಿರುದ್ಧ ವಿಡಿಯೋ, ಟ್ರೋಲ್ ಗಳನ್ನು ಮಾಡುತ್ತಿದ್ದಾರೆ. ಇನ್ನೂ ಹೀನಾಯ ಪ್ರಯತ್ನ ಏನೆಂದರೆ, ನನ್ನ ಜಾತಿಯನ್ನು ತರುವ ಪ್ರಯತ್ನ ಮಾಡುತ್ತಿದ್ದಾರೆ. ಒಂದು ಸಲ ನನ್ನನ್ನು ಸೇಠು ಅಂತಾರೆ. ಶೆಟ್ಟಿ ಅಂತಾರೆ. ಉತ್ತರ ಭಾರತದವನು ಎನ್ನುತ್ತಾರೆ. ಕರ್ನಾಟಕದವನೇ ಅಲ್ಲ ಎನ್ನುತ್ತಾರೆ. ನನಗೆ ಇವೆಲ್ಲ ತಮಾಷೆಯಾಗಿ ಕಾಣಿಸುತ್ತದೆ. ಇನ್ನು ನನ್ನ ವಿರುದ್ಧ ಯಾರು ಈ ಟ್ರೋಲ್ ವಿಡಿಯೋ ಮಾಡುತ್ತಿದ್ದಾರೋ ಆ ಐ.ಡಿ.ಗಳನ್ನು ನೋಡಿದರೆ ಗೊತ್ತಾಗುತ್ತದೆ; ಅವೆಲ್ಲ ಫೇಕ್. ಇಂಥವರ ವಿರುದ್ಧ ಏನು ದೂರು ನೀಡುವುದಕ್ಕೆ ಸಾಧ್ಯ? ಜನರೇ ನಿರ್ಧಾರ ಮಾಡುತ್ತಾರೆ, ಇವು ಆರ್ಗನೈಸ್ಡ್ ಅಥವಾ ಆರ್ಗಾನಿಕ್ ಹೌದಾ ಎಂಬುದನ್ನು.
ಒನ್ ಇಂಡಿಯಾ: ನಿಮ್ಮ ಕಡೆಯಿಂದ ಏನನ್ನು ನಿರೀಕ್ಷಿಸಬಹುದು?
ಸೂಲಿಬೆಲೆ: ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ನಾನು ಮಾಡಿದ್ದ ಭಾಷಣದ ತುಣಕನ್ನು ಈಗಿನ ಯಾವುದೋ ಇನ್ನೊಂದು ವಿಡಿಯೋ- ಸುದ್ದಿ ಜತೆಗೆ ಸೇರಿಸಿ ಹಂಚುತ್ತಿದ್ದಾರೆ. ಅದಕ್ಕೆ ನಮ್ಮ ಹುಡುಗರು ಈಗಾಗಲೇ ಉತ್ತರ ನೀಡುತ್ತಿದ್ದಾರೆ. ಇದನ್ನು ಹೇಗೆ ಮಾಡಬೇಕು ಮತ್ತು ತಪ್ಪನ್ನು ಕಂಡುಹಿಡಿದು, ಅದನ್ನು ಹೇಗೆ ಪ್ರಚಾರ ಮಾಡಬೇಕು ಎಂಬುದು ಅವರಿಗೆ ಗೊತ್ತಿಲ್ಲ ಅನ್ನೋದಾದರೆ ನನ್ನ ಹತ್ತಿರ ಕೇಳಿದ್ದರೆ ಹೇಳಿಕೊಡುತ್ತಿದ್ದೆ. ಆದರೆ ಹೀಗೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಪ್ರಚಾರ ಮಾಡುತ್ತಿದ್ದಾರೆ. ಇವೆಲ್ಲ ಶುರು ಆಗಿರುವುದು ಡಿ. ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಹಾಗೂ ಈ ಹಿಂದೆ ಸಿದ್ದರಾಮಯ್ಯ ಅವರ ಕಾಲದಲ್ಲಿ ಇದ್ದ ಕಾಂಗ್ರೆಸ್ ಐ.ಟಿ. ಸೆಲ್ ಬದಲಾದ ಮೇಲೆ.