ಹೆಬ್ಬಾಳ ಉಪ ಚುನಾವಣೆ: ಜಾಫರ್ ಷರೀಫ್, ಗೌಡ್ರ ಮಾತಿನ ಚಕಮಕಿ
ಉಪಚುನಾವಣೆ ನಡೆಯುವ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಚಾರದಲ್ಲಿ ಜೆಡಿಎಸ್ ಅಷ್ಟೇನೂ ಸೀರಿಯಸ್ಸಾಗಿ ಇಲ್ಲ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿತ್ತು.
ಇದಕ್ಕೆ ಪೂರಕ ಎನ್ನುವಂತೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯೇ ನಮಗೆ ಮೊದಲ ಪ್ರಾಶಸ್ತ್ಯ ಎನ್ನುವ ಮಾತನ್ನೂ ಆಡಿದ್ದರು. (ಮಲ್ಲಿಕಾರ್ಜುನ ಖರ್ಗೆ ಸೇಡಿನಾಟದಲ್ಲಿ ಸಿದ್ದುಗೆ ಮುಖಭಂಗ)
ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಎನ್ನುವುದು ಮೇಲ್ನೋಟಕ್ಕೆ ಕಾಣುವ ಲೆಕ್ಕಾಚಾರ. ಆದರೆ ಎಲ್ಲರದ್ದು ಒಂದು ಲೆಕ್ಕವಾದರೆ, ದೇವೇಗೌಡ್ರದ್ದು ಬೇರೇನೇ ಲೆಕ್ಕ ಎನ್ನುವುದು ರಾಜ್ಯ ರಾಜಕಾರಣದಲ್ಲಿ ಎಲ್ಲರೂ ಬಲ್ಲರು.
ಹೆಬ್ಬಾಳ ಕ್ಷೇತ್ರದಲ್ಲಿ ಇಸ್ಮಾಯಿಲ್ ಷರೀಫ್ ಅವರನ್ನು ಕಣಕ್ಕಿಳಿಸಿ ದೇವೇಗೌಡ್ರು ಕಾಂಗ್ರೆಸ್ಸಿಗೆ ಮತ್ತು ತನ್ನ ಆಪ್ತ ಜಾಫರ್ ಷರೀಫ್ ಅವರಿಗೆ ಮೊದಲ ಬಿಸಿಮುಟ್ಟಿಸಿದ್ದಾರೆ. ಯಾಕೆಂದರೆ ಈ ಕ್ಷೇತ್ರದಲ್ಲಿ ಮುಸ್ಲಿಂ ವೋಟ್ ಬ್ಯಾಂಕೇ ಟ್ರಂಪ್ ಕಾರ್ಡ್. (3 ಕ್ಷೇತ್ರಗಳ ಉಪ ಚುನಾವಣೆ : ಪಕ್ಷಗಳ ಅಭ್ಯರ್ಥಿಗಳ ಪಟ್ಟಿ)
ಹೆಬ್ಬಾಳ, ಬೀದರ್ ಮತ್ತು ದೇವದುರ್ಗ ಕ್ಷೇತ್ರದ ಉಪಚುನಾವಣೆ ಫೆಬ್ರವರಿ ಫೆ.13ರಂದು ನಡೆಯಲಿದ್ದು, ಫೆ.16ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಹೆಬ್ಬಾಳ ಕ್ಷೇತ್ರದಲ್ಲಿ ಸುಮಾರು ಅರವತ್ತು ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತಗಳಿವೆ. ಹಾಗಾಗಿ, ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಹೇಳುವ ಅಭ್ಯರ್ಥಿಗೆ ಬಿಫಾರಂ ಕೊಡುತ್ತೇನೆಂದಿದ್ದ ಗೌಡ್ರು, ಅಭ್ಯರ್ಥಿಯ ಹೆಸರನ್ನು ಕೊನೇ ಕ್ಷಣದವರೆಗೂ ಗೌಪ್ಯವಾಗಿ ಇಟ್ಟಿದ್ದರು. (ಜಮೀರ್ ಹೇಳಿದರೆ ಮಾತ್ರ ಹೆಬ್ಬಾಳದಲ್ಲಿ ಸ್ಪರ್ಧೆ)
ಯಾವಾಗ ಬೈರತಿ ಸುರೇಶ್ ಅವರಿಗೆ ಟಿಕೆಟ್ ಕೈತಪ್ಪಿ, ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಹೆಸರು ಅಂತಿಮವಾಯಿತೋ, ದೇವೇಗೌಡ್ರು ತಮ್ಮ ಪಕ್ಷದ ಅಭ್ಯರ್ಥಿ ಇಸ್ಮಾಯಿಲ್ ಷರೀಫ್ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದರು. ಮುಂದಿನ ಪುಟದಲ್ಲಿ ಓದಿ..
ಗೌಡ್ರ ರಾಜಕೀಯ ದಾಳ
ಗೌಡ್ರ ರಾಜಕೀಯ ದಾಳದ ಬಿಸಿ ಅರಿತ ಜಾಫರ್ ಷರೀಫ್ ಜೆಡಿಎಸ್ ಅಭ್ಯರ್ಥಿಯನ್ನು ಒಂದೋ ಬದಲಾಯಿಸಿ, ಇಲ್ಲವೇ ಕಣದಿಂದ ಹಿಂದಕ್ಕೆ ಸರಿಯಿರಿ ಎಂದು ರಾತ್ರೋರಾತ್ರಿ ದೇವೇಗೌಡರಿಗೆ ಕರೆ ಮಾಡಿ ಮನವೊಲಿಸುವ ಪ್ರಯತ್ನವನ್ನು ಮಾಡಿದ್ದಾರೆ.
ಗೌಡ್ರ ವಿರುದ್ದ ಮುನಿಸಿಕೊಂಡ ಷರೀಫ್
ತನ್ನ ಮನವಿಗೆ ಗೌಡ್ರು ಸೊಪ್ಪು ಹಾಕದೇ ಇದ್ದುದ್ದರಿಂದ ಬೇಸರಗೊಂಡ ಜಾಫರ್ ಷರೀಫ್, ಗೌಡ್ರ ವಿರುದ್ದ ಕಿಡಿಕಾರಿದ್ದಾರೆ. ತಾನು ಜಾತ್ಯಾತೀತ ಎಂದು ಬರೀ ಬಾಯಲ್ಲಿ ಹೇಳಿದರೆ ಸಾಲುವುದಿಲ್ಲ, ಕಾರ್ಯರೂಪಕ್ಕೆ ತರಬೇಕು. ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಮತ ವಿಭಜನೆಗೆ ಗೌಡ್ರು ಯತ್ನಿಸುತ್ತಿದ್ದಾರೆಂದು ಗೌಡ್ರ ವಿರುದ್ದ ಷರೀಫ್ ಮುನಿಸಿಕೊಂಡಿದ್ದಾರೆ.
ಜಾತ್ಯಾತೀತ ವಾದ
ದೇವೇಗೌಡ್ರು ನಿಜವಾಗಿಯೂ ಜಾತ್ಯಾತೀತ ವಾದದಲ್ಲಿ ನಂಬಿಕೆ ಇರುವವರಾದರೆ, ತನ್ನ ಅಭ್ಯರ್ಥಿಯನ್ನು ಕಣದಿಂದ ವಾಪಸ್ ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯ ವಿಜಯಕ್ಕೆ ಪರೋಕ್ಷವಾಗಿ ಸಹಾಯ ಮಾಡಲಿ, ಆ ಮೂಲಕ ತಾನು ಸೆಕ್ಯೂಲರ್ ಎಂದು ರುಜುವಾತು ಪಡಿಸಲಿ ಎಂದು ಷರೀಫ್ ಹೇಳಿಕೆ ನೀಡಿದ್ದಾರೆ.
ಷರೀಫ್ ಹೇಳಿಕೆಗೆ ದೇವೇಗೌಡ್ರ ತಿರುಗೇಟು
ಜಾಫರ್ ಷರೀಫ್ ಹೇಳಿಕೆಗೆ ತಿರುಗೇಟು ನೀಡಿರುವ ದೇವೇಗೌಡ್ರು, ನಾನು ಜಾತ್ಯಾತೀತನೋ ಅಲ್ಲವೋ ಎನ್ನುವುದಕ್ಕೆ ಷರೀಫ್ ಸಾಹೇಬ್ರ ಸರ್ಟಿಫಿಕೇಟ್ ಬೇಕಾಗಿಲ್ಲ. ನನ್ನ ನಿಲುವೇನು ಎನ್ನುವುದನ್ನು ರಾಜ್ಯದ ಜನ ಬಲ್ಲರು ಎಂದು ಗೌಡ್ರು ಪ್ರತ್ಯುತ್ತರ ನೀಡಿದ್ದಾರೆ.
ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನ ಜ 30
ಮಂಗಳವಾರ (ಜ 26) ಅಭ್ಯರ್ಥಿಯನ್ನು ಬದಲಾಯಿಸಲು ಅಥವಾ ಹಿಂದಕ್ಕೆ ಪಡೆಯಲು ಜಾಫರ್ ಷರೀಫ್ ದೂರವಾಣಿ ಮೂಲಕ ನನಗೆ ಮನವಿ ಮಾಡಿದರು. ನನ್ನ ಅಭ್ಯರ್ಥಿಯನ್ನು ವಾಪಸ್ ತೆಗೆದುಕೊಂಡರೆ ಅಲ್ಪಸಂಖ್ಯಾತರಿಗೆ ಮೋಸ ಮಾಡಿದ ಹಾಗಾಗುತ್ತೆ, ಹಾಗಾಗಿ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಷರೀಫ್ ಅವರಿಗೆ ಹೇಳಿದ್ದೇನೆಂದು ದೇವೇಗೌಡ್ರು ಹೇಳಿದ್ದಾರೆ. ಅಂದ ಹಾಗೇ, ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನಾಂಕ ಶನಿವಾರ, ಜನವರಿ 30.
ಬೈರತಿ ಮನವೊಲಿಸುತ್ತೇನೆ
ಟಿಕೆಟ್ ಸಿಗದೆ ಬೇಸರಗೊಂಡಿರುವ ಬೈರತಿ ಸುರೇಶ್ ಜತೆ ಮಾತುಕತೆ ನಡೆಸಿ, ಚುನಾವಣಾ ಪ್ರಚಾರಕ್ಕೆ ಅವರನ್ನು ಕರೆ ತರುವುದಾಗಿ ಜಾಫರ್ ಶರೀಫ್ ಹೇಳಿದ್ದಾರೆ. ಬೈರತಿ ಸುರೇಶ್ ಮತ್ತು ನನ್ನ ಕುಟುಂಬದ ನಡುವೆ ಹಲವಾರು ವರ್ಷಗಳಿಂದ ಅವಿನಾಭಾವ ಸಂಬಂಧ ಇದೆ. ಬೈರತಿ ತಂದೆ ನನ್ನ ಮನೆಗೆ ತರಕಾರಿ ತಂದು ಕೊಡುತ್ತಿದ್ದರು ಎಂದು ಷರೀಫ್ ಹೇಳಿದ್ದಾರೆ.