ಕರ್ನಾಟಕದ ಕರಾವಳಿ, ಉತ್ತರ ಒಳನಾಡಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ
ಬೆಂಗಳೂರು, ಆಗಸ್ಟ್ 14: ಕರ್ನಾಟಕ ಬಹುತೇಕ ಭಾಗಗಳಲ್ಲಿ ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡು ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆ ಹೆಚ್ಚಳವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಕರ್ನಾಟಕದ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಮಳೆ ಅಧಿಕಗೊಳ್ಳಲಿದೆ ಎನ್ನಲಾಗಿದೆ. ಬೆಂಗಳೂರಿನಲ್ಲೂ ಇಂದು ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣವಿದ್ದು, ಮೂರ್ನಾಲ್ಕು ದಿನಗಳಿಂದ ಬಿಡುವು ಪಡೆದಿದ್ದ ವರುಣ ಇಂದು ಮತ್ತೆ ಆರ್ಭಟಿಸುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ನಾಳೆ ಬೆಳಗ್ಗಿನವರೆಗೆ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶಿವಮೊಗ್ಗದಲ್ಲಿ ಮಳೆ ಪ್ರಮಾಣ, ಅಣೆಕಟ್ಟಲ್ಲಿ ನೀರು ಎಷ್ಟಿದೆ?
ಕರ್ನಾಟಕ ಹೊರತುಪಡಿಸಿದರೆ ಮಧ್ಯಪ್ರದೇಶ, ಒಡಿಶಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ದೆಹಲಿಯಲ್ಲೂ ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದೆಹಲಿಯಲ್ಲಿ ನಿನ್ನೆ ಮಳೆಯ ಪ್ರಮಾಣ ಅಧಿಕವಾಗಿದ್ದು, ರಸ್ತೆಗಳೆಲ್ಲ ಹೊಳೆಗಳಂತಾಗಿತ್ತು. ಇಂದು ಕೂಡ ದೆಹಲಿಯಲ್ಲಿ ಭಾರೀ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ
ಕರ್ನಾಟಕದಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದೆ. ಆದರೆ, ಈ ಹಿಂದೆ ಸುರಿದ ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳಾದ ಕೆಆರ್ಎಸ್, ತುಂಗಭದ್ರಾ, ಲಿಂಗನಮಕ್ಕಿ, ಆಲಮಟ್ಟಿ, ಘಟಪ್ರಭಾ, ಮಲಪ್ರಭಾ, ಕಬಿನಿ, ಹಾರಂಗಿ, ಹೇಮಾವತಿ, ವರಾಹಿ ಸೇರಿದಂತೆ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ಭಾರೀ ಏರಿಕೆಯಾಗಿದೆ. ಈ ವರ್ಷ ತಡವಾಗಿ ಮಳೆಗಾಲ ಆರಂಭವಾಗಿದ್ದರೂ ಬಿಡುವಿಲ್ಲದೆ ಮಳೆ ಅಬ್ಬರಿಸಿರುವ ಕಾರಣಕ್ಕೆ ಈಗಾಗಲೇ ಹಲವು ಜಲಾಶಯಗಳು ತುಂಬುವ ಹಂತ ತಲುಪಿವೆ.
ದೆಹಲಿಯಲ್ಲೂ ಭಾರಿ ಮಳೆ
ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಮಧ್ಯರಾತ್ರಿಯಿಂದ ಸುರಿದ ಭಾರಿ ಮಳೆಗೆ ರಸ್ತೆಗಳೆಲ್ಲ ನದಿಯಂತಾಗಿ ಬದಲಾದ ಸನ್ನಿವೇಶ ಸೃಷ್ಟಿಯಾಗಿದೆ. ಮುಂಗಾರು ಆರಂಭವಾಗಿ ವಾರಗಳೇ ಕಳೆದರು ಅಷ್ಟೇನೂ ಮಳೆ ಬಂದಿರಲಿಲ್ಲ. ಆದರೆ ರ್ಬುವಾರದಿಂದ ಗುರುವಾರ ಬೆಳಗ್ಗೆವರೆಗೆ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ದೆಹಲಿಯಲ್ಲಿ ಮುಂದಿನ ಎರಡು, ಮೂರು ದಿನಗಳವರೆಗೆ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಜಲಾಶಯಗಳಲ್ಲಿ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಎಷ್ಟಿದೆ?
ತಲಕಾವೇರಿಯಲ್ಲಿ ಇಂದಿನಿಂದ ಪೂಜೆ
ಆಗಸ್ಟ್ 5 ರಂದು ರಾತ್ರಿ ಸಂಭವಿಸಿದ ಭೂಕುಸಿತದಿಂದಾಗಿ ತಲಕಾವೇರಿಯ ಪ್ರಧಾನ ಅರ್ಚಕರು ಸೇರಿದಂತೆ ಐವರು ಭೂಸಮಾಧಿಯಾಗಿದ್ದರು. ಈ ಹಿನ್ನೆಲೆಯಲ್ಲಿ ತಲಕಾವೇರಿ ದೇವಾಲಯದಲ್ಲಿ ಸುಮಾರು ಎಂಟು ದಿನಗಳ ಕಾಲ ಪೂಜಾ ಕಾರ್ಯ ಸ್ಥಗಿತಗೊಂಡಿತ್ತು. ಇದೀಗ ಶುಕ್ರವಾರದಿಂದ ನಿತ್ಯ ಪೂಜೆ ಆರಂಭವಾಗಲಿದೆ. ಜಿಲ್ಲೆಯಲ್ಲಿ ಸಂಭವಿಸಿದ ದುರ್ಘಟನೆಯಿಂದ ಇದೇ ಮೊದಲ ಬಾರಿಗೆ ಇಷ್ಟು ದಿನಗಳ ಕಾಲ ಪೂಜೆ ಸ್ಥಗಿತಗೊಂಡಿತ್ತು. ಕ್ಷೇತ್ರದಲ್ಲಿ ಶುಕ್ರವಾರ ನೀಲೇಶ್ವರ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಾನ ನಡೆಯಲಿದೆ.
ಮಳೆಯಾಗಿರುವ ಪ್ರದೇಶಗಳು
ಕದ್ರ, ತಾಳಗುಪ್ಪ, ಆಗುಂಬೆ, ಶಿರಾಲಿ, ಧರ್ಮಸ್ಥಳ, ಲೋಂಡಾ, ಹೊಸನಗರ, ಕೋಟಾ, ಸುಬ್ರಹ್ಮಣ್ಯ, ಮಾಣಿ, ಸುಬ್ರಹ್ಮಣ್ಯ, ಗೋಕರ್ಣ, ಕುಂದಾಪುರ, ಕಮ್ಮರಡಿ,ಭಾಗಮಂಡಲ, ಹೊನ್ನಾವರ, ಪಣಂಬೂರು, ಚಿಂಚೋಳಿ, ಕೊಪ್ಪ, ತೀರ್ಥಹಳ್ಳಿ, ಜಯಪುರ, ಸಕಲೇಶಪುರದಲ್ಲಿ ಭಾರಿ ಮಳೆಯಾಗಿದೆ.