ಮಳೆ ಹೆಚ್ಚಾಗುವ ಸಾಧ್ಯತೆ: ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್
ಬೆಂಗಳೂರು, ಅಕ್ಟೋಬರ್ 22: ಮಳೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕಳೆದ ಒಂದೆರೆಡು ತಿಂಗಳ ಹಿಂದಷ್ಟೇ ಪ್ರವಾಹದಿಂದ ನಲುಗಿದ್ದ ಕರ್ನಾಟಕಕ್ಕೆ ಮತ್ತೆ ಪ್ರವಾಹ ಭೀತಿ ಎದುರಾಗಿದೆ.ಈಗಾಗಲೇ ಏಳು ಮಂದಿಯನ್ನು ಬಲಿ ಪಡೆದಿರುವ ಈ ಮಳೆ ಇನ್ನೂ ನಾಲ್ಕು ದಿನ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ.
ಮತ್ತಷ್ಟು ವಾಯುಭಾರ ಕುಸಿತ, ಬೆಂಗಳೂರಲ್ಲಿ 4 ದಿನ ಗುಡುಗು ಸಹಿತ ಮಳೆ
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ನಾಳೆಯೂ ಇದೇ ರೀತಿ ಮುಂದುವರಿಯುವ ಸಾಧ್ಯತೆ ಇದೆ. ಹವಾಮಾನ ಮುನ್ಸೂಚನೆ ಪ್ರಕಾರ ಎರಡು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರಿಯಲಿದೆ.
ಎಲ್ಲೆಲ್ಲಿ ಹೆಚ್ಚು ಮಳೆಯಾಗುತ್ತಿದೆ?
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಮೈಸೂರು ಭಾಗದ ಚಾಮರಾಜನಗರ, ಮೈಸೂರು, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಹಳದಿ ಎಚ್ಚರಿಕೆ ನೀಡಿದೆ.
ಕರಾವಳಿಯ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್
ಕರಾವಳಿಯ ಮೂರು ಜಿಲ್ಲೆಗಳಲ್ಲಿ ನಾಳೆಯಿಂದ ಶನಿವಾರದವರೆಗೂ ರೆಡ್ ಅಲರ್ಟ್ ಜಾರಿಯಲ್ಲಿದೆ. ಇತ್ತ ಮಹಾರಾಷ್ಟ್ರದಲ್ಲೂ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಧಾರಾಕಾರ ಮಳೆ ಆಗ್ತಿದ್ದು, ಉತ್ತರ ಕರ್ನಾಟಕಕ್ಕೆ ನೆರೆ ರಾಜ್ಯದಿಂದ ಹರಿದು ಬರುವ ನೀರಿನ ಪ್ರಮಾಣವೂ ಕೂಡ ಹೆಚ್ಚಾಗುತ್ತಿದೆ.
ಹಿಂಗಾರು ಆರಂಭ: ರಾಜ್ಯದಾದ್ಯಂತ ಇನ್ನೂ ಮೂರು ದಿನ ಭಾರಿ ಮಳೆ
ಚಿಕ್ಕಮಗಳೂರಿನಲ್ಲಿ ಮಳೆಯ ಅವಾಂತರ
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಕಾಟಿಗನರೆ ಸೇತುವೆ ಮಳೆ ಮುಳುಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ರಾತ್ರಿಯಿಡೀ ಪ್ರವಾಹ ಸ್ವರೂಪಿ ಮಳೆ ಆಗಿದೆ. ಶಿರುಕುಳಿ, ಅಗಸೂರಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು 10ಕ್ಕೂ ಹೆಚ್ಚು ಮಂದಿಯನ್ನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಹುಬ್ಬಳ್ಳಿಯಲ್ಲಿ ರಾತ್ರಿ 9 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೂ ಧಾರಾಕಾರ ಮಳೆಯಾಗಿದೆ. ನಗರದ ಸಿದ್ದರಾಮೇಶ್ವರ ಕಾಲೋನಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ಬೆಂಗಳೂರಲ್ಲೂ ಮಳೆ ನಿಂತಿಲ್ಲ
ಬೆಂಗಳೂರಲ್ಲೂ ಸೋಮವಾರ ಬೆಳಗ್ಗೆಯಿಂದ ಆರಂಭವಾದ ಮಳೆ ಮಂಗಳವಾರ ಬಂದರೂ ನಿಂತಿಲ್ಲ, ರಾತ್ರಿ ಪೂರ್ತಿ ಸುರಿದಿದೆ. ತಗ್ಗುಪ್ರದೇಶಗಳಲ್ಲಿರುವ ಮನೆಗಳು, ರಸ್ತೆಗಳು ಜಲಾವೃತಗೊಂಡಿವೆ. ಮೆಜೆಸ್ಟಿಕ್, ಮಲ್ಲೆಶ್ವರಂ, ಸದಾಶಿವನಗರ, ಮೇಖ್ರಿ ಸರ್ಕಲ್, ಜಯನಗರ, ಬಿಟಿಎಂ, ಮೈಕೋಲೇಔಟ್ ಹೆಚ್.ಎಸ್.ಆರ್ ಲೇಔಟ್, ಕೆ ಆರ್ ಮಾರುಕಟ್ಟೆ, ಚಾಮರಾಜಪೇಟೆ, ಜೆಸಿ ರೋಡ್ ಸೇರಿದಂತೆ ಬಹುತೇಕ ಎಲ್ಲ ಕಡೆಗಳಲ್ಲಿ ಮಳೆ ಸುರಿದಿದೆ. ಬಿಟಿಎಂ ಎರಡನೇ ಹಂತದಲ್ಲಿ ಮರ ಬಿದ್ದಿದೆ.