ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗುಡುಗು ಸಹಿತ ಧಾರಾಕಾರ ಮಳೆ
ಬೆಂಗಳೂರು, ಏಪ್ರಿಲ್ 29: ಇಂದು ಬೆಳಗಿನ ಜಾವ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.
ಬೆಳಗ್ಗೆ 5.30ರ ಸುಮಾರಿಗೆ ಆರಂಭವಾದ ಮಳೆ ಬಿಡದೇ ಸುರಿಯುತ್ತಿದೆ. ಮೈಸೂರು ರಸ್ತೆ, ಕೆಂಗೇರಿ, ಉತ್ತರಹಳ್ಳಿ, ಜಯನಗರ, ಮಲ್ಲೇಶ್ವರಂ, ವಿಜಯನಗರ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದೆಲ್ಲೆಡೆ ಭಾರಿ ಮಳೆ ಮುನ್ಸೂಚನೆ
ಮೇ 1ರವರೆಗೂ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಗಳವಾರ ರಾಮನಗರ, ಎಚ್ಡಿ ಕೋಟೆಯಲ್ಲಿ ಮಳೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗಲಿದ್ದು, ಉತ್ತರ ಒಳನಾಡು, ಕರಾವಳಿ ಪ್ರದೇಶಗಳಲ್ಲಿ ಒಣಹವೆ ಮುಂದುವರೆಯಲಿದೆ.
ಕಲಬುರಗಿಯಲ್ಲಿ ಅತಿ ಹೆಚ್ಚು ಅಂದರೆ 41.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಮೈಸೂರು, ರಾಮನಗರ, ಶಿವಮೊಗ್ಗದಲ್ಲಿ ಮಳೆಯಾಗುವ ಮುನ್ಸೂಚನೆ ದೊರೆತಿದೆ.
ಮುಂದಿನ48 ಗಂಟೆ ಆಕಾಶ ಮೋಡದಿಂದ ಕೂಡಿರಲಿದೆ, ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗಲಿದೆ.ಕೋಲಾರ ಜಿಲ್ಲೆಯ ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕಿನ ವಿವಿಧೆಡೆ ಮಂಗಳವಾರ ಬಿರುಗಾಳಿ ಹಾಗೂ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದ್ದು ಲಕ್ಷಾಂತರ ರೂ ಮೌಲ್ಯದ ತೋಟಗಾರಿಕಾ ಬೆಳೆಗಳು ನಾಶವಾಗಿವೆ.
ಕೋಲಾರದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ
ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಮಳೆ ಅರ್ಧ ಗಂಟೆ ಎಡೆಬಿಡದೆ ಸುರಿದಿದ್ದು , ಗಾಳಿಯ ತೀವ್ರತೆಗೆ ವಿದ್ಯುತ್ ಕಂಬಗಳು, ಮರಗಳು ನೆಲಕ್ಕುರುಳಿವೆ. ಮರಗಲ್, ಬಿರಾಂಡಹಳ್ಳಿ, ಮಾವಳ್ಳಿ, ಐತಾಂಡಹಳ್ಳಿ, ಕಾವರನಹಳ್ಳಿ, ಲಕ್ಷ್ಮೀಪುರ, ಕೆಲಜಿಎಫ್ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ.
ತಗ್ಗು ಪ್ರದೇಶಗಳಲ್ಲಿ ನೀರು
ಸಿಲಿಕಾನ್ ಸಿಟಿಯಲ್ಲಿ ಇಂದು ಮುಂಜಾನೆಯಿಂದಲೇ ಸುರಿದ ಭಾರೀ ಮಳೆಗೆ ಬಹುತೇಕ ರಸ್ತೆಗಳು ಜಲಾವೃತವಾಗಿವೆ. ತಗ್ಗುಪ್ರದೇಶಗಳಲ್ಲಿ ನೀರು ನಿಂತಿದೆ. ವಾಹನಗಳ ಸಂಚಾರ ಅಷ್ಟಿಲ್ಲದೆ ಇದ್ದರು ಅಗತ್ಯ ವಸ್ತುಗಳ ಖರೀದಿಗೆ ಹೋಗುವವರು ಕೂಡ ಪರದಾಡುವಂತಾಗಿತ್ತು.
ಬೆಳಗ್ಗೆ 5 ಗಂಟೆಯಿಂದ ಆರಂಭವಾದ ಮಳೆ 8 ಗಂಟೆಯವರೆಗೆ ಸುರಿದಿತ್ತು. ಮಳೆಯ ಜೊತೆ ಗಾಳಿ, ಮಿಂಚು, ಗುಡುಗು ಇದ್ದ ಕಾರಣ ಭಾರೀ ಅನಾಹುತವಾಗಿದೆ. ಯಲಹಂಕ- ದೊಡ್ಡಬಳ್ಳಾಪುರ ಹೆದ್ದಾರಿ ಕೂಡ ಮಳೆ ನೀರಿಗೆ ಜಲಾವೃತವಾಗಿದೆ. ಮಳೆ ನೀರಿನಿಂದ ರಸ್ತೆ ಕೆರೆಯಂತಾಗಿದೆ. ಬೊಮ್ಮನಹಳ್ಳಿ ಮನೆಗಳಿಗೆ ನೀರು ನುಗಿದ್ದು, ನಿವಾಸಿ ನೀರು ಹೊರಹಾಕುವಲ್ಲಿ ನಿರತರಾಗಿದ್ದಾರೆ.
ಹೆಬ್ಬಾಳ ಬಳಿ ಅಪಘಾತ
ಭಾರೀ ಮಳೆಗೆ ಹೆಬ್ಬಾಳದ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. ಕ್ಯಾಂಟರ್, ಲಾರಿ ಹಾಗೂ ಪೊಲೀಸ್ ವ್ಯಾನ್ ನಡುವೆ ಆಕ್ಸಿಡೆಂಟ್ ಸಂಭವಿಸಿದೆ. ಘಟನೆಯಲ್ಲಿ ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಕ್ಯಾಂಟರ್, ಡಿವೈಡರ್ ಹತ್ತಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಮಳೆಯಿಂದ ಎಲ್ಲೆಲ್ಲಿ ಅನಾಹುತ?
ಶಾಂತಿನಗರ ಸುತ್ತಮುತ್ತ ಮಳೆ ಹಿನ್ನೆಲೆಯಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತಿದ್ದು, ಸಿಲಿಕಾನ್ ಸಿಟಿಯ ಬಹುತೇಕ ರಸ್ತೆಗಳು ನೀರು ತುಂಬಿಕೊಂಡು ಬ್ಲಾಕ್ ಆಗಿವೆ.ಬೊಮ್ಮನಹಳ್ಳಿ 9 ನೇ ಬ್ಲಾಕ್, ಎರಡನೇ ಕ್ರಾಸ್, ಬಗಲಗುಂಟೆ, ಬನಶಂಕರಿಯಲ್ಲಿ ರಸ್ತೆಗಳು ಬ್ಲಾಕ್ ಆಗಿವೆ. ಅಲ್ಲದೇ ಮೂರು ಕಡೆ ಮರ ಬಿದ್ದಿದೆ. ಬಸವೇಶ್ವರ ನಗರ, ಕೋರಮಂಗಲ ಮತ್ತು ಶೇಷಾದ್ರಿ ಲೇಔಟ್ ನಲ್ಲಿ ಮರಗಳು ಧರೆಗುರುಳಿವೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಬಿಬಿಎಂಪಿಗೆ ದೂರು ನೀಡಿದ್ದಾರೆ.
ಕೆರೆಯಂತಾದ ಯಲಹಂಕ-ದೊಡ್ಡಬಳ್ಳಾಪುರ ಹೆದ್ದಾರಿ
ಸುಂಕದಕಟ್ಟೆ ಬಳಿ ರಾಜಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತಿದೆ. ಸುಂಕದಕಟ್ಟೆಯಲ್ಲಿ ರಸ್ತೆಯ ಅಂಚು ಕುಸಿದಿವೆ. ಯಲಹಂಕ ಆವಲಹಳ್ಳಿ ರಸ್ತೆ ನೀರಿನಿಂದ ಜಲಾವೃತವಾಗಿದೆ. ಯಲಹಂಕ - ದೊಡ್ಡಬಳ್ಳಾಪುರ ಹೆದ್ದಾರಿ ಕೆರೆಯಂತಾಗಿದೆ. ಕೋರಮಂಗಲ ಪಾಸ್ ಪೋರ್ಟ್ ಆಫೀಸ್ ಮುಂಭಾಗದ ರಸ್ತೆಯಲ್ಲಿ ಆಟೋ ಹಾಗೂ ದ್ವಿಚಕ್ರ ವಾಹನ ಮುಳುಗಿದೆ. ಆಟೋ ಹಾಗೂ ದ್ವಿಚಕ್ರ ವಾಹನಗಳನ್ನು ಹೊರ ತರಲು ವಾಹನ ಸವಾರರು ಪರದಾಡುತ್ತಿದ್ದಾರೆ.