ಕರ್ನಾಟಕದಲ್ಲಿ ನೈರುತ್ಯ ಮುಂಗಾರು ಚುರುಕು: ಹಲವೆಡೆ ಭಾರಿ ಮಳೆ
ಬೆಂಗಳೂರು, ಜೂನ್ 8: ನೈರುತ್ಯ ಮುಂಗಾರು ಮಾರುತ ರಾಜ್ಯಕ್ಕೆ ಪ್ರವೇಶಿಸಿದ್ದು, ಭಾನುವಾರ ರಾಜ್ಯದ ಹಲವೆಡೆ ಭಾರಿ ಮಳೆಯಾಗಿದೆ. ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ, ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಭಾನುವಾರ ಧಾರಾಕಾರ ಮಳೆ ಸುರಿದಿದೆ.
Recommended Video
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮತ್ತು ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಭಾನುವಾರ 6 ಸೆ.ಮೀ ಮಳೆಯಾಗಿದೆ. ಆಂಕೋಲಾ, ಆಗುಂಬೆಯಲ್ಲಿ 5 ಸೆ.ಮೀ ಮಳೆ ಸುರಿದಿದೆ. ಚನ್ನಪಟ್ಟಣ, ಕೊಟ್ಟಿಗೆಹಾರ, ಕುಂದಾಪುರ, ಬೆಳ್ತಂಗಡಿ, ಮಾಣಿ, ಮಾಲೂರು, ಬಂಗಾರಪೇಟೆ, ಹೊಸಕೋಟೆ, ಬೆಂಗಳೂರು ಸಿಟಿ, ಎಂ.ಎಂ.ಹಿಲ್ಸ್, ಕೃಷ್ಣರಾಜಸಾಗರದಲ್ಲಿ ಉತ್ತಮ ಮಳೆಯಾಗಿದೆ.
ಕೊಡಗಿನಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆ ಮಳೆ; ಏನೇನು ತಯಾರಿಯಾಗಿದೆ?
ಮಂಗಳೂರು, ಸುಳ್ಯ, ಧರ್ಮಸ್ಥಳ, ಉಡುಪಿ, ಕಾರ್ಕಳ, ಕೊಲ್ಲೂರು, ಗೋಕರ್ಣ, ಗೇರುಸೊಪ್ಪ, ತಿಪಟೂರು, ಚಿಕ್ಕಬಳ್ಳಾಪುರ, ಸಕಲೇಶಪುರ, ಟಿ.ನರಸೀಪುರ, ಕೋಲಾರದಲ್ಲಿ ವರುಣ ತಂಪೆರೆದಿದ್ದಾನೆ.
ಕೊಡಗಿನಲ್ಲಿ ರಸ್ತೆಗಳು ಜಲಾವೃತ
ಕೊಡಗು ಜಿಲ್ಲೆಯ ಹಲವೆಡೆ ಭಾನುವಾರ ಧಾರಾಕಾರ ಮಳೆ ಸುರಿದ ಪರಿಣಾಮ ಹಲವು ರಸ್ತೆಗಳು ಜಲಾವೃತಗೊಂಡಿವೆ. ನೈರುತ್ಯ ಮುಂಗಾರು ಆರಂಭಗೊಳ್ಳುತ್ತಿದ್ದಂತೆಯೇ ಕೊಡಗಿನಲ್ಲಿ ವರುಣ ಅಬ್ಬರಿಸುತ್ತಿದ್ದಾನೆ.
ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ
ಮುಂದಿನ 24 ಗಂಟೆಗಳಲ್ಲಿ ಕರಾವಳಿ ಕರ್ನಾಟಕದ ಹಲವು ಸ್ಥಳಗಳಲ್ಲಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಮುಂದಿನ 48 ಗಂಟೆಗಳಲ್ಲಿ ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಮತ್ತು ಉತ್ತರ ಕರ್ನಾಟಕದ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೆಂಗಳೂರು ಹವಮಾನ
ಮುಂದಿನ 24 ಗಂಟೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಬೆಂಗಳೂರಿನಲ್ಲಿದೆ.
ಬೆಂಗಳೂರಿನ ತಾಪಮಾನ
ಬೆಂಗಳೂರಿನಲ್ಲಿ ಭಾನುವಾರ ಗರಿಷ್ಠ 29.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.